ಸಾರಾಂಶ
ಜಿಲ್ಲೆಯಲ್ಲಿ ಎರಡು ಪ್ರಬಲ ಕುಟುಂಬಗಳ ಸರ್ವಾಧಿಕಾರದ ಧೋರಣೆಗಳಿಂದ ಇತರೆ ಸಮುದಾಯದ ಜನರಿಗೆ ಆವಕಾಶಗಳು ಸಿಗುತ್ತಿಲ್ಲ.
ಹರಪನಹಳ್ಳಿ: ದಾವಣಗೆರೆ ಲೋಕಸಭಾ ಕ್ಷೇತ್ರ ಕೇವಲ ಎರಡು ಕುಟುಂಬಗಳ ಸ್ವತ್ತಾಗಿದೆ. ಇಲ್ಲಿ ಹಿಂದುಳಿದ ವರ್ಗದ ಜನರ ಧ್ವನಿಗೆ ಬೆಲೆ ಇಲ್ಲದಂತಾಗಿದೆ. ಇದರ ವಿರುದ್ಧ ನಾನು ಸ್ವಾಭಿಮಾನದ ಹೋರಾಟಕ್ಕೆ ಮುಂದಾಗಿದ್ದೇನೆ ಎಂದು ದಾವಣಗೆರೆ ಲೋಕಸಭಾ ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ. ವಿನಯಕುಮಾರ ಹೇಳಿದರು.
ತಾಲೂಕಿನ ಹಲವಾಗಲು, ಅರಸನಾಳು, ತೊಗರಿಕಟ್ಟೆ, ಅರೇಮಜ್ಜಿಗೇರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮತದಾರರ ಅಭಿಪ್ರಾಯ ಸಂಗ್ರಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಎರಡು ಪ್ರಬಲ ಕುಟುಂಬಗಳ ಸರ್ವಾಧಿಕಾರದ ಧೋರಣೆಗಳಿಂದ ಇತರೆ ಸಮುದಾಯದ ಜನರಿಗೆ ಆವಕಾಶಗಳು ಸಿಗುತ್ತಿಲ್ಲ. ಸಾಮಾಜಿಕ ಕಳಕಳಿ ಇರುವ ನನ್ನಂತಹ ಯುವ ನಾಯಕರ ಅವಶ್ಯಕತೆ ಈ ಕ್ಷೇತ್ರಕ್ಕೆ ಬೇಕಿದೆ. ಆದರೆ ರಾಜಕೀಯ ವ್ಯವಸ್ಥೆಯಲ್ಲಿ ನಮ್ಮಂತ ಶೋಷಿತ ಹಿಂದುಳಿದ ಸಮುದಾಯಗಳ ನಾಯಕರು ಆವಕಾಶದಿಂದ ವಂಚಿತರಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಂದಿರುವುದು ಜನರ ಸೇವೆ ಮಾಡಲು. ಕಡಿಮೆ ಅವಧಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಜನರ ವಿಶ್ವಾಸ ಗಳಿಸಿದ್ದೇನೆ. ಜನಾಭಿಪ್ರಾಯದಂತೆ ನಾನು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಲವಾಗಲು ನಾಗರಾಜ, ಬೀರಪ್ಪ, ಸುನೀಲ್, ಮಜ್ಜಿಗೇರಿ ಗುಡ್ಡಪ್ಪ, ಕರಿಯಪ್ಪ, ಹಾಲೇಶ, ಬಸವರಾಜ, ಹನುಮಂತಪ್ಪ, ಕರಿಯಲ್ಲಪ್ಪ, ರಾಮಪ್ಪ, ದಿಳ್ಯೇಪ್ಪ, ಶರತ್ಕುಮಾರ್, ರಿಯಾಜ್ ಅಹ್ಮದ್, ಚನ್ನವೀರ, ನೀಲಪ್ಪ ರಂಗಸ್ವಾಮಿ ಇದ್ದರು.