ಸಾರಾಂಶ
I came to bring water to JG part: Minister D Sudhakar
-ಜೆಜಿ ಹಳ್ಳಿ ಭಾಗದ ರೈತ ಮುಖಂಡರ ಜೊತೆ ಸಚಿವ ಡಿ ಸುಧಾಕರ್ ಸಭೆ । ಧರಣಿ ನಿಲ್ಲಿಸುವಂತೆ ಮನವಿ
---ಕನ್ನಡಪ್ರಭ ವಾರ್ತೆ ಹಿರಿಯೂರು: ನಾನು, ಸುಳ್ಳು ಹೇಳುವ ರಾಜಕಾರಣಿಯಲ್ಲ. ಯಾವುದಾದರೂ ಕೆಲಸ ಮಾಡಿಕೊಡುತ್ತೇನೆ ಅಂತ ಹೇಳಿದರೆ ಶತಾಯಗತಾಯ ಆ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ಜೆಜಿ ಹಳ್ಳಿ ಭಾಗದ ಕೆರೆಗಳಿಗೆ ನೀರು ತುಂಬಿಸುವಂತೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ರೈತ ಮುಖಂಡರ ಜೊತೆ ಸಭೆ ನಡೆಸಿ ಮಾತನಾಡಿದರು.ಈಗಾಗಲೇ ವಾಣಿವಿಲಾಸ ಜಲಾಶಯಕ್ಕೆ ನೀರಿನ ಅಲೋಕೇಶನ್ ಆಗಿದ್ದು, ವಾಣಿವಿಲಾಸ ಜಲಾಶಯದಿಂದ ನೀರು ಹಂಚಿಕೆ ಮಾಡಲು ಸಾಧ್ಯವಿಲ್ಲ. ಆದರೂ ನಾನು ಪ್ರಯತ್ನ ಮಾಡಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಹೆಚ್ಚುವರಿ ನೀರು ಅಲೋಕೇಶನ್ ಮಾಡಿಸಿ 0.25 ಟಿಎಂಸಿ ನೀರನ್ನು ಜೆಜಿ ಹಳ್ಳಿ ಭಾಗಕ್ಕೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಜೆಜಿ ಹಳ್ಳಿ ಭಾಗದ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಲೈನಿಂಗ್, ಎಸ್ಟಿಮೆಂಟ್ ಮಾಡುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಂತರ ಸರ್ಕಾರದಿಂದ ಡಿಪಿಆರ್ ಮಾಡಿಸಲಾಗುತ್ತದೆ. ಬಳಿಕ ಹಣ ಮಂಜೂರಾತಿ ಮಾಡಿಸಿ ಆ ಭಾಗಕ್ಕೆ ನೀರು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನಗೂ ನನ್ನ ಅವಧಿಯಲ್ಲಿ ಆ ಭಾಗಕ್ಕೆ ನೀರು ಹರಿಸಿ ಆ ಭಾಗದ ಜನರ ದಶಕಗಳ ಸಮಸ್ಯೆ ಬಗೆಹರಿಸುವ ಮನಸ್ಸಿದೆ. ಹಾಗಾಗಿ ರೈತರು ಧರಣಿ ಸ್ಥಗಿತಗೊಳಿಸಿ ಎಂದರು.ಸಚಿವರ ಮಾತಿಗೆ ಪ್ರತಿಕ್ರಿಯಿಸಿದ ರೈತರು ಡಿಪಿಆರ್ ರೆಡಿ ಮಾಡಿ ಅಲೋಕೇಶನ್ ಆದೇಶ ಬರುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ, ಈರಣ್ಣ, ಕನ್ಯಪ್ಪ, ತಿಮ್ಮರಾಯಪ್ಪ , ಎಂಆರ್ ಈರಣ್ಣ, ನಾಗೇಂದ್ರಪ್ಪ, ವಿಶ್ವನಾಥ್, ವಜೀರ್ ಸಾಬ್, ಕಲೀಮ್ ಸಾಬ್, ಕೆಆರ್ ಹಳ್ಳಿ ರಾಜಪ್ಪ, ರಾಮಯ್ಯ, ಜೈರಾಮಯ್ಯ, ರಾಮಕೃಷ್ಣ, ಸುರೇಶ್ ಉಪಸ್ಥಿತರಿದ್ದರು.----
ಫೋಟೊ: ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ಜೆಜಿ ಹಳ್ಳಿ ಭಾಗದ ರೈತ ಮುಖಂಡರ ಜೊತೆ ಸಚಿವ ಡಿ ಸುಧಾಕರ್ ಸಭೆ ನಡೆಸಿ ಧರಣಿ ನಿಲ್ಲಿಸುವಂತೆ ಮನವಿ ಮಾಡಿದರು.