ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ನಾನು ನಿಮ್ಮಂತೆ ಆಗುವುದು ಕಷ್ಟ. ನೀವು ಬೇಕಾದರೆ ನನ್ನಂತೆ ರಾಜಕಾರಣಿಯಾಗಿ ಜನರ ಸೇವೆಮಾಡಬಹುದು. ಸತತ ಪ್ರಯತ್ನ ಪಟ್ಟರೆ ಶಾಸಕ, ಸಚಿವರಾಗಿ ಜನರ ಸೇವೆಗೂ ಮುಂದಾಗಬಹುದು ಎಂದು ವಿದ್ಯಾರ್ಥಿಗಳಿಗೆ ಸಚಿವ ಸಿ. ಪುಟ್ಟರಂಗಶೆಟ್ಟಿ ಕಿವಿಮಾತು ಹೇಳಿದರು.ಕೊಳ್ಳೇಗಾಲ ಗುರುಭವನದಲ್ಲಿ ಹನೂರು, ಕೊಳ್ಳೇಗಾಲ ಉಪ್ಪಾರ ನೌಕರರ ಸಂಘ ಅಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಈನಿಟ್ಟಿನಲ್ಲಿ ಉಪ್ಪಾರ ಸಮಾಜದ ಬಂಧುಗಳು ಸರ್ಕಾರದ ಸವಲತ್ತು ಪಡೆದು ವಿದ್ಯಾಭ್ಯಾಸ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆಗಳಾಗಿ ರೂಪುಗೊಳ್ಳಬೇಕು. ಭಗೀರಥ ಮಹರ್ಷಿಗಳು ಯಾವ ರೀತಿ ಅವಿರತ ಪರಿಶ್ರಮದ ಮೂಲಕ ಗಂಗೆಯನ್ನು ಧರೆಗೆ ತಂದು ಖ್ಯಾತರಾದರು ಅದೇ ರೀತಿ ಭಗೀರಥ ಪರಿಶ್ರಮದ ಮೂಲಕ ಸಮಾಜ ಮುಖಿಗಳಾಗಿ ಮೌಲ್ಯಯುತ ಜೀವನ ಕಟ್ಟಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು. ಉಪ್ಪಾರ ಸಮಾಜ ಕೇವಲ ಭಗೀರಥ ಮಹರ್ಷಿಗಳನ್ನು ಸ್ಮರಿಸಿದರೆ ಸಾಲದು, ಅವರ ಆದರ್ಶ ಕಿಂಚಿತ್ತಾದರೂ ಅಳವಡಿಸಿಕೊಳ್ಳಬೇಕು. ಮಕ್ಕಳ ಸಾಧನೆಗೆ ಬೆನ್ನೆಲುಬಾಗಿ ನಿಂತುಕೊಳ್ಳಬೇಕು. ಕಾಟಾಚಾರದ ಓದು ಬೇಡ. ಬಡತನವಿದ್ದರೆ ಧಾನಿಗಳು, ಗಣ್ಯರ ಸಹಕಾರವನ್ನಾದರೂ ಪಡೆದು ಉಪ್ಪಾರ ಬಂಧುಗಳು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಶ್ರಮಿಸಬೇಕು. ಸರ್ಕಾರದ ಸೌಲಭ್ಯ ಬಳಕೆ ಮಾಡಿಕೊಳ್ಳಬೇಕು. ಗುರಿ ಇಟ್ಟುಕೊಂಡು ಸಾಧಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.ಈ ವೇಳೆ ಶಿವಕುಮಾರ್, ಮುಡಿಗುಂಡ ಶಾಂತರಾಜು, ರಾಜೇಂದ್ರ, ಸೋಮಣ್ಣ, ಮಾದೇಶ್ ಇನ್ನಿತರಿದ್ದರು.
-