ಸಾರಾಂಶ
- ಬಸವನಗೌಡ ಪಾಟೀಲ್ ಯತ್ನಾಳ್ ಪಕ್ಷಕ್ಕೆ ವಾಪಸ್ ಬರುವ ವಿಚಾರವೂ ಗೊತ್ತಿಲ್ಲ
- ಜನಾರ್ದನ ರೆಡ್ಡಿ- ಶ್ರೀರಾಮುಲು ಒಂದಾಗಲು ಪೀಠಿಕೆ ಹಾಕಿದ್ದೆ ನಾನು: ರೈಲ್ವೆ ಸಚಿವ- - -
ಕನ್ನಡಪ್ರಭ ವಾರ್ತೆ ದಾವಣಗೆರೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ನನಗೆ ನನ್ನ ಕೇಂದ್ರ ಹಾಗೂ ಕೆಲಸಗಳ ಕಡೆಗೆ ಗಮನವಿದೆ. ನಮ್ಮಲ್ಲಿ ಯಾವುದೇ ಟೀಂ ಅಂತಾ ಇಲ್ಲ. ನಮ್ಮದು ಒಂದೇ ಹೈಕಮಾಂಡ್, ಒಬ್ಬರೇ ನಾಯಕರು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಬದಲಾವಣೆ ಎಂಬುದು ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಅಭಿಪ್ರಾಯ. ಬದಲಾವಣೆ ವಿಚಾರ ನನಗಂತೂ ಗೊತ್ತಿಲ್ಲ ಎಂದರು.
ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪಕ್ಷಕ್ಕೆ ವಾಪಸ್ ಬರುವ ವಿಚಾರವೂ ನನಗೆ ಗೊತ್ತಿಲ್ಲ. ಮಾಜಿ ಸಚಿವರಾದ ಜನಾರ್ದನ ರೆಡ್ಡಿ- ಶ್ರೀರಾಮುಲು ಇಬ್ಬರೂ ಒಂದಾಗಲೆಂದು ಪೀಠಿಕೆ ಹಾಕಿದ್ದೆ ನಾನು. ಇವಾಗ ಇಬ್ಬರೂ ಸೇರಿಕೊಂಡು, ನನಗೆ ಒಳ್ಳೆಯ ಗಿಫ್ಟ್ ಕೊಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಪಂಚ ಪೀಠಾಧೀಶರು 2002ರಲ್ಲಿ ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದರು. ಅದಾದ ನಂತರ ಒಟ್ಟಿಗೆ ಸೇರಿರಲಿಲ್ಲ. 16 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ದಾವಣಗೆರೆಯಲ್ಲಿ ಸೇರಿದ್ದು ಸಂತಸದ ಸಂಗತಿ. ಅ.ಭಾ.ವೀ.ಲಿಂ.ಮ. ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಪಂಚಪೀಠಗಳನ್ನು ಒಗ್ಗೂಡಿಸುವಲ್ಲಿ ಹಾಗೂ ಗುರು-ವಿರಕ್ತರನ್ನು ಒಂದು ಮಾಡುವ ಮೂಲಕ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಒಳ್ಳೆಯ ಹೆಜ್ಜೆ ಇಟ್ಟಿದ್ದಾರೆ ಎಂದು ವಿ.ಸೋಮಣ್ಣ ಶ್ಲಾಘಿಸಿದರು.
- - -(ಕೋಟ್) ಧರ್ಮಸ್ಥಳ ಪ್ರಕರಣವನ್ನು ಇದೀಗ ರಾಜ್ಯ ಸರ್ಕಾರದವರು ಎಸ್ಐಟಿಗೆ ಕೊಟ್ಟಿದ್ದಾರೆ. ಅಲ್ಲಿನ ಆಡಳಿತ ಮಂಡಳಿ ಸಹ ಇದನ್ನು ಸ್ವಾಗತಿಸಿದೆ. ಟೀಕೆ ಮಾಡುವುದು ಸುಲಭ. ತನಿಖೆ ನಂತರ ಸತ್ಯಾಸತ್ಯತೆ ಹೊರಗೆ ಬರಬೇಕು.
- ವಿ.ಸೋಮಣ್ಣ, ಕೇಂದ್ರ ಸಚಿವ.- - -
(ಫೋಟೋ: ವಿ.ಸೋಮಣ್ಣ)