ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ತನ್ನ ಬಗ್ಗೆ ಉಡುಪಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ, ಗೋಬ್ಯಾಕ್ ಅಭಿಯಾನದ ವಿಷಯ ಗೊತ್ತಿಲ್ಲ, ನನಗಂತೂ ಯಾರೂ ಹಾಗೇ ಹೇಳಿಲ್ಲ. ನಾನು ಕಾರ್ಯಕರ್ತರ ಜೊತೆಗೆ ಚೆನ್ನಾಗಿದ್ದೇನೆ. ಕೆಲಸಗಳನ್ನು ಚಾಚೂ ತಪ್ಪದೇ ಮಾಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ಮೃಣಾಳ್ ಹೆಬ್ಬಾಳ್ಕರನೇ ಚುನಾವಣೆಗೆ ನಿಂತಿದ್ದರಿಂದ ತಾನು ಬೆಳಗಾವಿಯಲ್ಲಿ ಬ್ಯುಸಿಯಾಗಿದ್ದೆ, ಜೊತೆಗೆ ಬೆಳಗಾವಿ ಕ್ಷೇತ್ರದ ಉಸ್ತುವಾರಿಯೂ ಆಗಿದ್ದೆ, ಆದ್ದರಿಂದ ಬರಲಾಗಲಿಲ್ಲ, ಇಲ್ಲಿ ನನ್ನ ಬದಲು ಕೆ.ಜೆ.ಚಾರ್ಜ್ ಚುನಾವಣಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಕಾರ್ಯಕರ್ತರಿಗೆ ಯಾವುದೇ ತೊಂದರೆಯಾಗಿಲ್ಲ ಎಂದರು.
ಸಿಎಂ ಅವರ ದೊಡ್ಡ ಗುಣ: ಖುದ್ದು ಸಿಎಂ ಬೆಳಗಾವಿಗೆ ಪ್ರಚಾರಕ್ಕೆ 4 ಬಾರಿ ಬಂದಿದ್ದರು, ವಾತಾವರಣ ಚೆನ್ನಾಗಿದೆ. ಮೃಣಾಲ್ ಗೆಲ್ಲುವುದರಲ್ಲಿ ಸಂಶಯ ಇಲ್ಲ ಎಂದಿದ್ದರು ಸಿಎಂ, ನಾವೆಲ್ಲಾ ಮೃಣಾಳ್ ಗೆದ್ದೇ ಗೆಲ್ಲುತ್ತಾನೆ ಎಂದೇ ನಿರೀಕ್ಷೆ ಇಟ್ಟುಕೊಂಡಿದ್ದೆವು.ಸೋತಾಗ ಸಿಎಂ ಕೂಡ ಬೇಸರ ವ್ಯಕ್ತಪಡಿಸಿದರು. ಸಾರಿ ಅಂದದ್ದು ಅವರ ದೊಡ್ಡಗುಣ ಎಂದು ಸಚಿವೆ ಹೇಳಿದರು.
ಸೋಲು ಮೃಣಾಳ್ ಗೆ ಪಾಠ: ಬೆಳಗಾವಿಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಗೊತ್ತಾಗಿಲ್ಲ, ಇನ್ನೂ ಹುಡುಕುತ್ತಿದ್ದೇವೆ. ಗ್ಯಾರಂಟಿಗೂ ಚುನಾವಣೆಗೂ ಸಂಬಂಧ ಇಲ್ಲ. ಸೋಲಿಗೆ ನಾನು ಯಾರ ಮೇಲೂ ಬೆಟ್ಟು ಮಾಡುವುದಿಲ್ಲ, ಅದು ನಾಯಕತ್ವದ ಗುಣ ಅಲ್ಲ. ಇದೊಂದೇ ಚುನಾವಣೆಯೂ ಅಲ್ಲ, ಐದು ವರ್ಷಕ್ಕೊಮ್ಮೆ ಚುನಾವಣೆಗಳು ಬರುತ್ತವೆ, ನಾನೂ ಎರಡು ಬಾರಿ ಸೋತು ಗೆದ್ದವಳು, ಅವನಿಗೂ ಇದೊಂದು ಪಾಠ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದರ್ಶನ್ ಮೇಲೆ ಕ್ರಮ: ಸೆಲೆಬ್ರಿಟಿಯಾಗಲಿ, ಪಂಕ್ಚರ್ ಹಾಕುವವನೇ ಇರಲಿ, ಕಾನೂನು ಎಲ್ಲರಿಗೂ ಒಂದೇ, ಇಲ್ಲಿ ಪ್ರಸಿದ್ಧರು, ದೊಡ್ಡವರು ಎಂಬ ಪ್ರಶ್ನೆಯೇ ಬರುವುದಿಲ್ಲ.ಸಿನೆಮಾ ನಟ ದರ್ಶನ್ ಪ್ರಕರಣದಲ್ಲಿ ಕಾನೂನು ಕ್ರಮ ಆಗುತ್ತದೆ, ಮೃತರ ಪತ್ನಿ ಜೊತೆ ಸರ್ಕಾರ ಇದೆ, ಆಕೆಗೆ ನ್ಯಾಯ ನೀಡುತ್ತೇವೆ, ಆರ್ಥಿಕವಾಗಿ, ನೈತಿಕವಾಗಿ ಆಕೆಯ ಜೊತೆಗಿದ್ದೇವೆ ಎಂದು ಸಚಿವೆ ಹೇಳಿದರು.