ಸಾರಾಂಶ
ಕುಮಟಾ:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೂರ್ವಾಗ್ರಹ ಪೀಡಿತರಾಗಿ ಹಿಂದೂ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ದುರಂಹಕಾರದಿಂದ ವರ್ತಿಸುವ ಅವರ ಬಗ್ಗೆ ಬೇಕೆಂದೇ ಏಕವಚನದಲ್ಲಿ ಮಾತನಾಡಿದ್ದೆ. ಅವರು ರಾಷ್ಟ್ರಪತಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಏನು ಹೇಳಬೇಕು? ಎಂದು ಸಂಸದ ಅನಂತಕುಮಾರ ಹೆಗಡೆ ಪ್ರಶ್ನಿಸಿದರು.ಪಟ್ಟಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರದು ಏಕಮುಖ ನೀತಿ, ಸ್ಪಷ್ಟವಾಗಿ ಹಿಂದೂ ವಿರೋಧಿ ನೀತಿ, ಸ್ಪಷ್ಟವಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಕರ್ನಾಟಕ ಸರ್ಕಾರದಲ್ಲಿ ಮಿತಿಮೀರಿದೆ. ಇದು ನಿಲ್ಲಬೇಕು, ಇಲ್ಲದಿದ್ದರೆ ಇದೊಂದು ಹೊಸ ಜನಾಂದೋಲನವಾಗಿ ಬೆಳೆಯುತ್ತದೆ. ಕರ್ನಾಟಕದ ಜನ ಅತ್ಯಂತ ಪ್ರಜ್ಞಾವಂತರು. ಕರ್ನಾಟಕದ ಕಾಂಗ್ರೆಸ್ಸಿಗೆ ಸಿದ್ದರಾಮಯ್ಯನವರ ಕಾರಣದಿಂದಾಗಿ ಜನರು ದೊಡ್ಡ ಪಾಠ ಕಲಿಸಲು ಹೊರಟಿದ್ದಾರೆ ಎಂದರು.
ರಾಷ್ಟ್ರಪತಿಗಳ ಬಗ್ಗೆ, ಅದರಲ್ಲಿಯೂ ಪರಿಶಿಷ್ಟ ಜನಾಂಗದ ಸಭ್ಯ, ಸುಸಂಸ್ಕೃತ ಮಹಿಳೆಯೋರ್ವಳನ್ನು ಏಕವಚನದಲ್ಲಿ ನಿಂದಿಸಿದ್ದು ಸಿದ್ದರಾಮಯ್ಯ ಅವರ ಸಂಸ್ಕೃತಿ ತೋರುತ್ತದೆ. ಇದೇ ಕಾರಣಕ್ಕೆ ನಾನು ಬೇಕೆಂದೇ ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದೆ ಎಂದು ಅನಂತಕುಮಾರ ಹೆಗಡೆ ಸ್ಪಷ್ಟಪಡಿಸಿದರು.ಪ್ರಜಾಪ್ರಭುತ್ವದಲ್ಲಿ ಒಂದು ರಾಜಕೀಯ ಪಕ್ಷ ಇನ್ನೊಂದು ರಾಜಕೀಯ ಪಕ್ಷದ ಸಿದ್ಧಾಂತ ವಿರೋಧಿಸುವುದು, ಅದರ ಬಗ್ಗೆ ಚರ್ಚೆ ಮಾಡುವುದು ಸ್ವಾಭಾವಿಕ. ಆದರೆ ರಾಜಕೀಯ ಪಕ್ಷ ವಿರೋಧಿಸುವ ನೆಪದಲ್ಲಿ ಈ ದೇಶದ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು, ಈ ದೇಶದ ನಂಬಿಕೆಯನ್ನು ಚರ್ಚೆಗೆ ಒಳಪಡಿಸುವ ವ್ಯವಸ್ಥೆ ಅಪಾಯಕಾರಿ. ಕರ್ನಾಟಕದ ಮುಖ್ಯಮಂತ್ರಿ ಇದನ್ನು ಸ್ಪಷ್ಟವಾಗಿ ಮಾಡುತ್ತಿದ್ದಾರೆ. ತಮ್ಮ ಮೇಲೆ ಪ್ರಕರಣ ದಾಖಲಾದ ವಿಚಾರ ಉಲ್ಲೇಖ ಮಾಡಿ ಐತಿಹಾಸಿಕವಾಗಿರುವ ವಿಚಾರಗಳನ್ನು ನಾವು ಕಾರ್ಯಕರ್ತರ ಜತೆಗೂ ಹಂಚಿಕೊಳ್ಳಬಾರದೆ ಎಂದರು.
ಶ್ವೇತಪತ್ರ ಹೊರಡಿಸಿ:ಕರ್ನಾಟಕದ ಸಂಪೂರ್ಣ ಆರ್ಥಿಕ ಪರಿಸ್ಥಿತಿ ಸತ್ತು ಹೋಗಿದೆ. ಸಂಬಳ ಕೊಡಲು ಹಣ ಇಲ್ಲದಂತಾಗಿದೆ. ಅಭಿವೃದ್ಧಿಗೆ ಹಣವಿಲ್ಲ, ಶಾಸಕರ ನಿಧಿ ಕೊಡಲು ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅದನ್ನು ಮುಚ್ಚಿಕೊಳ್ಳಲು ಈ ರೀತಿಯ ಡೊಂಬರಾಟವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಕರ್ನಾಟಕದ ಆರ್ಥಿಕ ಪರಿಸ್ಥಿತಿ ದಿವಾಳಿ ಎದ್ದಿದ್ದು ತಕ್ಷಣದಲ್ಲಿಯೇ, ಲೋಕಸಭಾ ಚುನಾವಣೆಗೂ ಮೊದಲು ಈ ಬಗ್ಗೆ ಶ್ವೇತಪತ್ರ ನೀಡಬೇಕು ಎಂದು ಆಗ್ರಹಿಸಿದರು..ಈ ವೇಳೆ ಶಾಸಕ ದಿನಕರ ಶೆಟ್ಟಿ, ಕುಮಟಾ ಮಂಡಲದ ಅಧ್ಯಕ್ಷ ಹೇಮಂತಕುಮಾರ ಗಾಂವ್ಕರ್, ಕೃಷ್ಣ ಎಸಳೆ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಎಸ್.ಎಸ್. ಹೆಗಡೆ, ಅರುಣ ನಾಯ್ಕ ಇದ್ದರು.