ಸಾರಾಂಶ
ರೋಣ: ಸಾಮಾಜಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ, ಶೈಕ್ಷಣಿಕವಾಗಿ ಅಲ್ಪಸಂಖ್ಯಾತ ಸಮೂದಾಯ ಪ್ರಗತಿ ಹೊಂದಬೇಕು. ಈ ದಿಸೆಯಲ್ಲಿ ಅಲ್ಪಸಂಖ್ಯಾತರ ಸಮೂದಾಯದ ಏಳ್ಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿ ರೋಣ ವತಿಯಿಂದ ಜರುಗಿದ 40 ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಈಗಾಗಲೇ ಬಜೆಟ್ನಲ್ಲಿ ಸಾಕಷ್ಟು ಅನುದಾನ ಕಾಯ್ದಿರಿಸಿದ್ದು, ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಪ್ರತಿಯೊಂದು ತಾಲೂಕು, ಗ್ರಾಪಂ ಮಟ್ಟದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿದೆ. ರೋಣದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ನಿರ್ಮಿಸಲಿರುವ 40 ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ವಕ್ಫ್ ಬೋರ್ಡ್ ಸಚಿವರಾದ ಜಮೀರ ಅಹ್ಮದ ಅವರಿಗೆ ₹ 2 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೊದಲ ಹಂತದಲ್ಲಿ ₹ 1 ಕೋಟಿ ಬಿಡುಗಡೆ ಮಾಡಿದ್ದು, ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದ್ದಾಗ ಇನ್ನು ₹ 1 ಕೋಟಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾನು ಶಾಸಕನಾಗಲು ಅಲ್ಪಸಂಖ್ಯಾತರ ಆಶೀರ್ವಾದ, ಋಣ ನನ್ನ ಮೇಲೆ ಸಾಕಷ್ಡಿದ್ದು, ಆ ಋಣವನ್ನು ತೀರಿಸುವಲ್ಲಿ, ಸಮಾಜದ ಏಳ್ಗೆಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ವಾಣಿಜ್ಯ ಮಳಿಗೆಗಳು ಅಂಜುಮನ್ ಇಸ್ಲಾಂ ಕಮಿಟಿಯ ಪ್ರಗತಿಗಾಗಿ ಸಹಕಾರಿಯಾಗಲಿವೆ ಎಂದರು.ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಬಾವಾಸಾಬ ಬೆಟಗೇರಿ, ಪುರಸಭೆ ಮಾಜಿ ಉಪಾಧ್ಯಕ್ಷ ಯೂಶೂಫ ಇಟಗಿ ಮಾತನಾಡಿದರು. ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಹಜರತ ಸೈಯದ್ ಸುಲೇಮಾನ ಶಾವಲಿ ದರ್ಗಾದ ಅಜ್ಜನವರು ವಹಿಸಿದ್ದರು. ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಜಿ. ಪಾಟೀಲ, ಅಂಜುಮನ್ ಇಸ್ಲಾಂ ಕಮಿಟಿ ಉಪಾಧ್ಯಕ್ಷ ಮಹಮ್ಮದಗೈಬುಸಾಬ ತರಪದಾರ, ಕಾರ್ಯದರ್ಶಿ ಅಬ್ದುಲರಹಿಮಾನ್ ಸೈಯದ್, ಎ.ಎಸ್. ಖತೀಬ, ಎ.ಎಂ. ಹುಲ್ಲೂರ, ಬಮಹಮ್ಮದಸಾಬ ಬಿಲ್ಲುಖಾನ, ಫೈಜ್ಬಾಹ್ಮದ ಕಲಾದಗಿ, ಖಲಂದರಭಾಷಾ ಅಬ್ಬಿಗೇರಿ, ಅಪ್ತಾಬ ಅಹ್ಮದ ತಹಸೀಲ್ದಾರ್, ಮಲೀಕ ಯಲಿಗಾರ, ಶಫೀಕ ಮೂಗನೂರ, ಮುನ್ನಾ ದಳವಾಯಿ, ರಿಯಾಜ್ ಮುಲ್ಲಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಕಲೀಲ ರಾಮದುರ್ಗ ಸ್ವಾಗತಿಸಿ, ನಿರೂಪಿಸಿದರು.