ಅತಿಥಿ ಶಿಕ್ಷಕರ ಬೇಡಿಕೆ ಕುರಿತು ಸರ್ಕಾರದ ಗಮನಕ್ಕೆ ತರುತ್ತೇನೆ: ದೊಡ್ಡನಗೌಡ

| Published : Feb 10 2025, 01:46 AM IST

ಅತಿಥಿ ಶಿಕ್ಷಕರ ಬೇಡಿಕೆ ಕುರಿತು ಸರ್ಕಾರದ ಗಮನಕ್ಕೆ ತರುತ್ತೇನೆ: ದೊಡ್ಡನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲಾ ಶಿಕ್ಷಕರಂತೆ ಕೆಲಸ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಈಡೇರಿಸಲು ಶ್ರಮಿಸುತ್ತೇನೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಸರ್ಕಾರಿ ಶಾಲಾ ಶಿಕ್ಷಕರಂತೆ ಕೆಲಸ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಈಡೇರಿಸಲು ಶ್ರಮಿಸುತ್ತೇನೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಹೊರವಲಯದ ಬುದ್ಧ ವಿಹಾರದಲ್ಲಿ ನಡೆದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕಕರ ಸಂಘದ ಜಿಲ್ಲಾ ಸಮ್ಮೇಳನವನ್ನು ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆ, ಬುದ್ಧ, ಬಸವ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರೆಕ್ಕೆ ಪುಷ್ಟ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣವನ್ನು ನೀಡಬೇಕಾದರೆ ಸರ್ಕಾರವೂ ಸಮರ್ಪಕವಾಗಿ ಶಿಕ್ಷಕರು, ಮೂಲಭೂತ ಸೌಕರ್ಯ ನೀಡಬೇಕಾಗಿದೆ. ಸರ್ಕಾರಿ ಶಿಕ್ಷಕರಿಗೆ ಇರುವ ಕನಿಷ್ಠ ಸೌಲಭ್ಯಗಳು ಸಹಿತ ಅತಿಥಿ ಶಿಕ್ಷಕರಿಗೆ ಇಲ್ಲ. ಈ ಕುರಿತು ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು.

ನಮ್ಮ ಕ್ಷೇತ್ರದಲ್ಲಿ ನೂರು ಅತಿಥಿ ಶಿಕ್ಷಕರ ನೇಮಕ ಮಾಡುವಂತೆ ಇಲಾಖೆ ಹಾಗೂ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ 60 ಜನ ಅತಿಥಿ ಶಿಕ್ಷಕರ ಹುದ್ದೆ ನೀಡಿದ್ದು, ಶಾಲೆಗಳಲ್ಲಿ ಶಿಕ್ಷಕರು ಕಡಿಮೆ ಇರುವಂತಹ ಸ್ಥಳದಲ್ಲಿ ನೇಮಕ ಮಾಡುವ ಮೂಲಕ ಸಹಕಾರ ನೀಡಲಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪಠ್ಯ ಬೋಧನೆ ಮಾಡಿದರೆ ಉತ್ತಮ ಶಿಕ್ಷಣ ಸಿಗಲು ಸಾಧ್ಯ. ಅದರಂತೆ ಅತಿಥಿ ಶಿಕ್ಷಕರ ಶಿಕ್ಷಕರ ಸೇವಾ ಭದ್ರತೆ, ಗೌರವಧನ ಇತರೆ ಬೇಡಿಕೆಗಳನ್ನು ಈಡೇರಿಸುವ ಕೆಲಸ ಆಗಬೇಕಿದೆ ಎಂದರು.

ಕರ್ನಾಟಕ ರಾಜ್ಯ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತ ಎಚ್.ಎಸ್., ಪ್ರಧಾನ ಕಾರ್ಯದರ್ಶಿ ಬಸವರಾಜ ಕರಡಿಗುಡ್ಡ, ಡಯಟ್ ಮುನಿರಾಬಾದ್ ಉಪನ್ಯಾಸಕ ರಾಜೇಂದ್ರ ಬೆಳ್ಳಿ, ಗ್ಯಾನಪ್ಪ ರಾಂಪೂರ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಂಪಾಪತಿ ಕೊರ್ಲಿ, ಬಸವರಾಜ ಕರಡಿಗುಡ್ಡ, ಸೇರಿದಂತೆ ಅನೇಕರು ಮಾತನಾಡಿದರು.

ಮನವಿ:

ರಾಜ್ಯ ಘಟಕ ಮತ್ತು ಜಿಲ್ಲಾ ,ತಾಲೂಕು ಘಟಕದ ಪದಾಧಿಕಾರಿಗಳಿಂದ ಶಾಸಕರಿಗೆ ವಿವಿಧ ಬೇಡಿಕೆ ಕುರಿತು ಮನವಿ ಸಲ್ಲಿಸಲಾಯಿತು. ನಂತರ ಸಂಘದ ಸರ್ವ ಸದಸ್ಯರು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಜಿಲ್ಲಾ ಘಟಕದ ಅಧ್ಯಕ್ಷ ಬೀರಪ್ಪ ಬಂಡಿ, ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ, ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಶಾಲೆಗಳ ಅತಿಥಿ ಶಿಕ್ಷಕರು ಇದ್ದರು. ಶರಣಪ್ಪ ಎಸ್. ಸಂವಿಧಾನದ ಪೀಠಿಕೆ ಓದಿದರು.