ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರ ಹೊರವಲಯದ ಶ್ರೀಸಿಯೇರಾ ಹೋಟೆಲ್ನಲ್ಲಿ ಭಾನುವಾರ ಜಿಲ್ಲಾ ಮತ್ತು ತಾಪಂ ಚುನಾವಣಾ ಪೂರ್ವಸಭೆಯ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ತಮ್ಮ ಬೆಂಬಲಿಗರ ಸಭೆಯನ್ನು ಶಾಸಕ ಪ್ರದೀಪ್ ಈಶ್ವರ್ ನಡೆಸಿದರು.ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ತಮ್ಮ ವಿರುದ್ದ ಪಿತೂರಿ ಸಭೆಗಳನ್ನು ನಡೆಸಿರುವ ಮತ್ತು ಭಾಗವಹಿಸಿರುವ ಕಾಂಗ್ರೆಸ್ನ ಕೆಲವು ನಾಯಕರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರೂ ಅವರನ್ನು ಹತ್ತಿರ ಸೇರಿಸುವುದಿಲ್ಲ ಎಂದು ತಮ್ಮ ವಿರೋಧಿಗಳ ವಿರುದ್ಧ ಹರಿಹಾಯ್ದರು.
ನಿಮ್ಮ ಮನೆಗಳಲ್ಲಿ ಸತ್ತರೆ 50 ಜನರು ಬರಲ್ಲ. ಅದು ಹೇಗೆ ಐದು ಸಾವಿರ ಮತ ಹಾಕಿಸುತ್ತೀರಾ? 50ರಿಂದ 200 ಮತ ಹಾಕಿಸಲಷ್ಟೇ ಇವರು ಶಕ್ತರು. 50 ಸಾವಿರ ಮತ ಹಾಕಿಸಲು ಸಾಧ್ಯವೇ? ರಾಜಕಾರಣದಲ್ಲಿ ವಾಸ್ತವ ಅರಿತುಕೊಳ್ಳಬೇಕು. ಆ ವಾಸ್ತವ ನನಗೆ ಚೆನ್ನಾಗಿ ಅರಿವಿದೆ ಎಂದರು.ಟಿಎಪಿಸಿಎಂಎಸ್ ಚುನಾವಣೆಯಲ್ಲಿ ₹1 ಕೋಟಿ ಕೇಳಿದರು. ಆದರೆ ಅವರು ಏನನ್ನೂ ಮಾಡಲಿಲ್ಲ. ಸುಮ್ಮನೆ ದಾರಿತಪ್ಪಿಸಿದರು. ನನ್ನ ಭಯಪಡಿಸಲು ಸಾಧ್ಯವಿಲ್ಲ. ನಾನು ಈ ಹಿಂದಿನ 3 ಚುನಾವಣೆ ಮಾಡಿಲ್ಲ. ಮುಂದೆ ಬರುವ ನಗರಸಭೆ, ಜಿಪಂ, ತಾಪಂ ಚುನಾವಣೆ ನಾನೇ ನಡೆಸುವೆ ಎಂದರು.
ನಂದಿಯ ಲೀಡರ್ ನಂದಿಯಲ್ಲಿ ರಾಜಕೀಯ ಮಾಡಬೇಕು. ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಮಾಡಲು ಬಿಡುವುದಿಲ್ಲ. ಈ ಹಿಂದಿನ ಶಾಸಕರು ಭಯ ಬೀಳುತ್ತಿದ್ದರೇನೊ ನಾನು ಭಯ ಬೀಳುವುದಿಲ್ಲ. ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆಗಳ ನಡುವೆ ಕಿತ್ತಾಡಬೇಕು. ಮಾಧ್ಯಮಗಳ ಮುಂದೆ ಹೋದರೆ ಸುಮ್ಮನೆ ಇರುವುದಿಲ್ಲ ಎಂದರು.ನಾನು ಚುನಾವಣೆ ಮಾಡುವೆ. ನನ್ನ ಮೇಲೆ ನಂಬಿಕೆ ಇಡಿ. ರಾಜಕೀಯದಲ್ಲಿ ಸಿದ್ಧಾಂತವಿದೆ. ಬೂತ್ ಮಟ್ಟದಲ್ಲಿ ಐದು ಮಂದಿಯನ್ನು ಗುರುತಿಸಿ ಅವರಿಗೆ ಜವಾಬ್ದಾರಿ ನೀಡಲಾಗುವುದು. ನಿಮ್ಮ ಎಲ್ಲ ಕಷ್ಟಗಳಿಗೆ ಜೊತೆಯಲ್ಲಿರುವೆ. ಮುಂದಿನ ನಗರಸಭೆ ಚುನಾವಣೆಯಲ್ಲಿ ಯಾವುದೇ ಪ್ರಭಾವಿಗಳಿಗೆ ಮಣಿದು ಬಿ.ಫಾರಂ ನೀಡುವುದಿಲ್ಲ. ವಾರ್ಡ್ಗಳಿಗೆ ಭೇಟಿ ನೀಡಿದಾಗ ಅನುದಾನ ಕೇಳುತ್ತಾರೆ. ಆದ ಕಾರಣ ಎಲ್ಲ ವಾರ್ಡ್ ಗಳಿಗೆ ಭೇಟಿ ನೀಡಲು ಆಗುತ್ತಿಲ್ಲ. ನಗರಸಭೆಯಲ್ಲಿ ಬೇರೆ ಪಕ್ಷದ ಸದಸ್ಯರು ಇದ್ದಾರೆ. ಮುಂದೆ ನಮ್ಮ ಪಕ್ಷದವರು ಅಧಿಕಾರಕ್ಕೆ ಬಂದಾಗ ಪ್ರತಿ ವಾರ್ಡ್ ₹5 ಕೋಟಿ ಅನುದಾನ ನೀಡುವೆ. ನಾನು ಶಾಸಕನಾದ ಮೇಲೆ ಪ್ರತಿ ಮನೆಗೂ ಭೇಟಿ ನೀಡಿ ಅವರಿಗೆ ಸೇವೆ ನೀಡಿದ್ದೇನೆ.
ಹೊಸದಾಗಿ ಸಂಘಟನೆ ಮಾಡೋಣ. ನನಗೆ ನೇರವಾಗಿ ಕರೆ ಮಾಡಿ. ನಿಮ್ಮನ್ನು ನಾನು ಕಾಪಾಡಿಕೊಳ್ಳುವೆ. ಪಕ್ಷವನ್ನು ಸಮರ್ಥಿಸಿಕೊಳ್ಳದವರು ನಾಯಕರಾಗುವುದಿಲ್ಲ. ಮುಂದಿನ ಚುನಾವಣೆಗಳಲ್ಲಿ ನಾನೇ ಟಿಕೆಟ್ ನೀಡುವೆ ಎಂದು ಹೇಳಿದರು.ವಿಧಾನಸಭೆ ಚುನಾವಣೆ ವೇಳೆ ಕೊತ್ತೂರು ಮಂಜುನಾಥ್ ಸೇರಿದಂತೆ ಎಲ್ಲರೂ ಕಾಂಗ್ರೇಸ್ ಬಿ ಫಾರಂ ಬೇಡ ಎಂದರು. ಆದರೆ ನಾನು ಬಿ.ಫಾರಂ ತಂದೆ. ಬಲಿಜ ಸಮುದಾಯದಿಂದ ಗೆದ್ದಿರುವ ಶಾಸಕ ನಾನೊಬ್ಬನೇ. ಸಚಿವ ಸ್ಥಾನ ನೀಡಿ ಎಂದು ಕೇಳಬಹುದು. ಆದರೆ ನಾನು ಕೇಳಿಲ್ಲ. ಶಿವಶಂಕರ ರೆಡ್ಡಿ ಅವರಿಗೆ ಸ್ಥಾನ ಕೇಳಿ ಅವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದೆವು .
ಲೋಕಸಭೆ ಚುನಾವಣೆ ವೇಳೆ ರಕ್ಷಾರಾಮಯ್ಯ ಸಾರ್ ನಿಮಗೆ ಒಳೇಟು ಹಾಕುತ್ತಾರೆ. 8 ರಿಂದ 10 ಮುಖಂಡರನ್ನು ನಂಬಿ ರಾಜಕೀಯ ಮಾಡಬೇಡಿ, ದಾರಿತಪ್ಪಿಸುತ್ತಿದ್ದಾರೆ ಎಂದು ಕೈ ಹಿಡಿದು ಹೇಳಿದೆ. ನನಗೆ ಜವಾಬ್ದಾರಿ ನೀಡಿದ್ದರೆ ಸರಿಯಾದ ರೀತಿಯಲ್ಲಿ ಚುನಾವಣೆ ಮಾಡುತ್ತಿದ್ದೆ. ಬೆಂಗಳೂರು ಬಾಯ್ಸ್ ರಕ್ಷಾ ರಾಮಯ್ಯ ಅವರನ್ನು ಕರೆದುಕೊಂಡು ಹಾಳು ಮಾಡಿದರು. ರಕ್ಷಾ ಅವರ ಬಳಿ ಹಣ ಇದೆ. ಟಿಕೆಟ್ ನೀಡಿದರೂ ಗೆಲ್ಲಲಿಲ್ಲ. ಮೊಯಿಲಿ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಗೆಲ್ಲುತ್ತಿದ್ದರು. ರಕ್ಷಾ ರಾಮಯ್ಯ ನಮ್ಮ ಸಮುದಾಯದ ಹುಡುಗ. ಅವರನ್ನು ರಾಜ್ಯದ ಯಾವುದೇ ಕ್ಷೇತ್ರದಿಂದಾದರೂ ಗೆಲ್ಲಿಸಿಕೊಂಡು ಬರುವೆ. ಬೆಂಗಳೂರು ಬಾಯ್ಸ್ ನನಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎನ್ನುತ್ತಿದ್ದಾರೆ. ಶಾಸಕರಿಗೆ ಪಕ್ಷ ಟಿಕೆಟ್ ನೀಡುತ್ತದೆ.ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಅನಸೂಯಮ್ಮ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸದಸ್ಯ ಯಲುವಳ್ಳಿ ರಮೇಶ್ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ, ಮುಖಂಡರಾದ ಸು.ಧಾ ವೆಂಕಟೇಶ್,ಕೋಲಾಟ್ಲು ರಾಮಚಂದ್ರ,ಕೆ.ಎಲ್.ಶ್ರೀನಿವಾಸ್, ಡ್ಯಾನ್ಸ್ ಶ್ರೀನಿವಾಸ್, ವೆಂಕಟ್, ಪಕ್ಷದ ಪದಾಧಿಕಾರಿಗಳು, ಮುಖಂಡರು. ಬೆಂಬಲಿಗರು ಇದ್ದರು.ಸುಧಾಕರ್ಗಿಂತ ಹೆಚ್ಚು ತೆರಿಗೆ ಪಾವತಿಸುವೆ: ಸುಧಾಕರ್ಗಿಂತ ಹೆಚ್ಚು ತೆರಿಗೆ ಪಾವತಿಸುವೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಅಷ್ಟು ಕೋಟಿ ಖರ್ಚು ಮಾಡುತ್ತಾರೆ. ಇಷ್ಟು ಕೋಟಿ ಖರ್ಚು ಮಾಡುತ್ತಾರೆ ಎನ್ನುತ್ತಿದ್ದಾರೆ. ನನ್ನ ಬಳಿ ಹಣ ಇಲ್ಲ ಎಂದುಕೊಳ್ಳಬೇಡಿ. ನಾನು ಸುಧಾಕರ್ಗಿಂತ ಹೆಚ್ಚು ಆದಾಯ ತೆರಿಗೆ ಪಾವತಿಸುತ್ತಿರುವೆ. ಎಲ್ಲರನ್ನೂ ಕರೆದು ಮಾತನಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು ''''''''ನಾನು ಯಾವುದೇ ಕಾರಣಕ್ಕೂ ಬರುವುದಿಲ್ಲ. ಅವರನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಮಾತನಾಡುವುದಿಲ್ಲ ಎಂದು ಸಚಿವರಿಗೆ ತಿಳಿಸಿದ್ದೇನೆ.