ಸಾರಾಂಶ
ಬರೀ ಜಾತಿ ಜನಗಣತಿ ದೃಷ್ಟಿಯಿಂದ ಈ ಸಮಾವೇಶ ಆಯೋಜಿಸಿಲ್ಲಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ದಾವಣಗೆರೆಯಲ್ಲಿ ಡಿ. 24ರಂದು ನಡೆಯಲಿರುವ ವೀರಶೈವ ಮಹಾಸಭಾದ ಮಹಾ ಅಧಿವೇಶನಕ್ಕೆ ನನಗೂ ಆಹ್ವಾನ ಬಂದಿದೆ. ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವೆ. ಬರೀ ಜಾತಿ ಗಣತಿ ದೃಷ್ಟಿಯಿಂದ ಈ ಸಮಾವೇಶ ನಡೆಯುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ ತಿಳಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3-4 ವರ್ಷಗಳಿಗೊಮ್ಮೆ ವೀರಶೈವ ಮಹಾಸಭಾ ಮಹಾ ಅಧಿವೇಶನ ನಡೆಸಲಾಗುತ್ತದೆ. ಬರೀ ಜಾತಿ ಜನಗಣತಿ ದೃಷ್ಟಿಯಿಂದ ಈ ಸಮಾವೇಶ ಆಯೋಜಿಸಿಲ್ಲ. 2-3 ಪ್ರಮುಖ ವಿಚಾರಗಳ ಕುರಿತು ಸಭೆ ನಡೆಯುತ್ತಿದೆ. ಅದರಲ್ಲಿ ಜಾತಿಗಣತಿ ಸಹ ಒಂದು. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಮತ್ತು ಎಲ್ಲ ಒಳಪಂಗಡಗಳನ್ನು ಸೇರಿಸುವುದು ಪ್ರಮುಖ ಬೇಡಿಕೆಯಾಗಿದೆ. ಸಮಾಜ ಜಾಗೃತಿ ಮತ್ತು ಸಂಘಟನೆ ಮಾಡಲು ಏನು ಮಾಡಬೇಕೆಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.
ಸಭೆ ಕರೆದು ಚರ್ಚಿಸಲಿ:ಸಾಮಾಜಿಕ ಸಮೀಕ್ಷೆ ಉದ್ದೇಶದಿಂದ ಜಾತಿಗಣತಿ ಮಾಡಲಾಗಿದೆ. ಆದರೆ, ಗಣತಿಯ ಅಂಕಿ ಸಂಖ್ಯೆಗಳ ಬಗ್ಗೆ ಕೆಲವೊಂದು ವಿಚಾರ ಸೋರಿಕೆಯಾಗಿ ವಿವಾದವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ಎಲ್ಲ ಸಮುದಾಯದ ನಾಯಕರ ಸಭೆ ಕರೆದು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
15-20 ಕ್ಷೇತ್ರಗಳಲ್ಲಿ ಗೆಲುವು:ಲೋಕಸಭೆ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಲಿ ಸಂಸದರು. ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಮಾನ್ಯ. ನಾನು ಸ್ಪರ್ಧಿಸುವ ಕುರಿತು ಕಾಂಗ್ರೆಸ್ ಹೈಕಮಾಂಡ್ ಈ ವರೆಗೂ ನನ್ನೊಂದಿಗೆ ಚರ್ಚಿಸಿಲ್ಲ. ಚರ್ಚೆ ಕೂಡ ಪ್ರಾರಂಭವಾಗಿಲ್ಲ. ಈಗಲೇ ಈ ಬಗ್ಗೆ ಚರ್ಚಿಸುವುದು ಅನವಶ್ಯಕ. ಪಕ್ಷ ಮತ್ತು ಅಭ್ಯರ್ಥಿಯನ್ನು ಗಟ್ಟಿಸಿಗೊಳ್ಳಿಸುವ ಪ್ರಯತ್ನ ಮಾಡಲಾಗುವುದು. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 15- 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಅದರಲ್ಲಿ ಧಾರವಾಡ ಕೂಡ ಒಂದು ಎಂದರು.
ನಾನೇನೆಂಬುದು ಗೊತ್ತಾಗಿದೆ:ವಿಧಾನಸಭಾ ಚುನಾವಣೆಯಲ್ಲೇ ಜಗದೀಶ ಶೆಟ್ಟರ್ ಏನೆಂಬುದು ಬಿಜೆಪಿಗೆ ಗೊತ್ತಾಗಿದೆ. ಅದರ ಪರಿಣಾಮ ಅವರೇ ಹೇಳಬೇಕು. ಈ ಕುರಿತು ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಒಬ್ಬ ವ್ಯಕ್ತಿಯ ಶಕ್ತಿ ಏನು? ಎಂಬುದು ಈಗಾಗಲೇ ಅವರಿಗೆ ಅರ್ಥವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಈಶ್ವರಪ್ಪ ಹೈಕಮಾಂಡಾ?ಶೆಟ್ಟರ್ ಬಿಜೆಪಿಗೆ ಮರಳುತ್ತಾರೆ ಎಂಬ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಉತ್ತರಿಸಿದ ಅವರು, ಈಶ್ವರಪ್ಪ ಬಿಜೆಪಿಯ ಹೈಕಮಾಂಡಾ? ಯಾವ ಬಿಜೆಪಿ ಹೈಕಮಾಂಡ್ ಈ ವರೆಗೆ ನನ್ನೊಂದಿಗೆ ಚರ್ಚಿಸಿಲ್ಲ. ಅರ್ಥವಿಲ್ಲದ ಇಂತಹ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ. ಈ ರೀತಿ ಗೊಂದಲ ಸೃಷ್ಟಿಸಿ ಬಿಜೆಪಿಯಿಂದ ಕಾಂಗ್ರೆಸ್ಗೆ ಬರುವವರನ್ನು ತಡೆಯುವ ತಂತ್ರವಷ್ಟೇ ಇದು ಎಂದರು.
ಅಡ್ವಾಣಿ ಮೂಲೆಗುಂಪು:ವಯಸ್ಸಿನ ನೆಪವೊಡ್ಡಿ ಈ ಹಿಂದೆ ಲಾಲಕೃಷ್ಣ ಅಡ್ವಾಣಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದರು. ಈಗ ಶ್ರೀರಾಮಮಂದಿರ ಲೋಕಾರ್ಪಣೆಗೂ ಬರಬೇಡಿ ಎನ್ನುತ್ತಿದ್ದಾರೆ. ರಾಮಮಂದಿರ ಬಗ್ಗೆ ಇಡೀ ರಾಷ್ಟ್ರದಲ್ಲಿ ಜಾಗೃತಿ ಮೂಡಿಸಿದ್ದು ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ. ಅವರ ಉಪಸ್ಥಿತಿ ಬಹಳ ಮುಖ್ಯ. ಆದರೆ, ಅವರನ್ನೇ ದೂರುವಿಡುತ್ತಿದ್ದಾರೆ ಇದು ಸರಿಯಲ್ಲ ಎಂದ ಅವರು, ಅಡ್ವಾಣಿ ಅವರೇ ನನಗೆ ವಯಸ್ಸಾಗಿದೆ ಆರೋಗ್ಯ ಸರಿಯಾಗಿಲ್ಲ ಎಂದು ಹೇಳಬೇಕು. ಆದರೆ, ಇವರೇ ಹೇಳುತ್ತಿದ್ದಾರೆ ಎಂದು ಶೆಟ್ಟರ್ ವ್ಯಂಗ್ಯವಾಡಿದರು.