ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ರೈತರು ಉತ್ತಮ ಫಸಲಿಗಾಗಿ ಮಣ್ಣು ಪರೀಕ್ಷೆ, ಭೂಮಿ ಸಿದ್ಧತೆ, ಉತ್ತಮ ತಳಿಗಳ ಆಯ್ಕೆ ಮಾಡಬೇಕು ಎಂದು ಸುತ್ತೂರಿನ ಐಸಿಎಆರ್- ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಕರೆ ನೀಡಿದರು.ಐಸಿಎಆರ್- ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ಮೈಸೂರಿನ ನಾಗನಹಳ್ಳಿಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದ ರೈತರಿಗೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಉಪ ನಿರ್ದೇಶಕ ಡಾ. ಧನಯಂಜಯ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ರೋಗ ನಿರೋಧಕ ತಳಿಗಳನ್ನು ಆಯ್ಕೆ ಮಾಡಿ ಬಿತ್ತನೆ ಮಾಡುವ ಮುಂಚೆ ಬೀಜೋಪಚಾರವನ್ನು ಮಾಡಬೇಕು, ತಂಬಾಕು ಬೆಳೆಗೆ ಪರ್ಯಾಯವಾಗಿ ಜೋಳದ ಬೆಳೆಯನ್ನು ಬೆಳೆಯಲು ರೈತರಿಗೆ ಕರೆ ನೀಡಿದರು.ರೈತರು ಬೆಳೆದ ಜೋಳವನ್ನು ಕನಿಷ್ಟ ಬೆಂಬಲ ಬೆಲೆಗಿಂತಲೂ ಕಂಪನಿಗೆ ಮಾರಾಟ ಮಾಡಲು ತಿಳಿಸಿದರು.
ಟಿ. ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಸುಗಂಧರಾಜ ಬೆಳೆಗಳಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ರೋಗ ಹಾಗೂ ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.ವಿಜ್ಞಾನಿ ಡಾ. ಸುಜಾತಾ ನಾಯರ್ ಮಾತನಾಡಿ, ಸ್ಥಳಿಯ ಸುಗಂಧರಾಜ ತಳಿಯನ್ನು ಬೆಳೆಯುವ ಬದಲುಅಧಿಕ ಇಳುವರಿ ನೀಡುವಆರ್ಕಾ ಪ್ರಜ್ವಲ್ ತಳಿಯನ್ನು ಬೆಳೆಯಲು ಕರೆ ನೀಡಿದರು. ಏರುಮಡಿ ಹಾಗೂ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಬೇರು ಕೊಳೆಯುವಿಕೆ, ನೆಮಟೋಡ್ ನಿರ್ವಹಣೆಯನ್ನು ಸುಗಂಧರಾಜ ಬೆಳೆಯಲ್ಲಿ ಮಾಡಬಹುದೆಂದು ತಿಳಿಸಿದರು.
ನಂಜನಗೂಡು ತಾಲೂಕಿನ ಜೀಮಾರಹಳ್ಳಿ ಗ್ರಾಮದಲ್ಲಿ ಡಾ. ಅನುರಾಧ ಸಾನೆ ಅವರು ಅಂಗಾಶ ಬಾಳೆ ಬೆಳೆಯನ್ನು ಬೆಳೆಯಲು ರೈತರಿಗೆ ಕರೆ ನೀಡಿದರು. ಗ್ರಾಮದ ಬಾಳೆ ಬೆಳೆದಿರುವ ಸಮಸ್ಯಾತ್ಮಕ ತಾಕಿಗೆ ಭೇಟಿ ನೀಡಿ ಮಾಹಿತಿ ನೀಡಿದರು.ನಂಜನಗೂಡು ತಾಲೂಕಿನ ತಾಯೂರು, ಈಶ್ವರಗೌಡನಹಳ್ಳಿ, ನೇರಳೆ ಮತ್ತು ಹಳೆಪುರ ಗ್ರಾಮಗಳಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಕೃಷಿ ಸಂಬಂಧಿಸಿದ ಇಲಾಖೆಗಳು ಹಾಗೂ ಗ್ರಾಪಂ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಡಾ.ಜಿ.ಎಂ. ವಿನಯ್ ಅವರು ಮಣ್ಣು ಪರೀಕ್ಷೆಯ ಪದ್ಧತಿ ಹಾಗೂ ಉಪಯೋಗಗಳ ಕುರಿತು ಮಾಹಿತಿ ನೀಡಿದರು.ಮುಂಗಾರಿನಲ್ಲಿ ಭೂಮಿ ಸಿದ್ಧತೆ, ಹಸಿರೆಲೆ ಗೊಬ್ಬರಗಳ ಉಪಯೋಗಳು ಹಾಗೂ ಬಳಕೆ, ಬೆಳೆ ಮತ್ತು ತಳಿಗಳ ಆಯ್ಕೆ, ಪೋಷಕಾಂಶಗಳ ನಿರ್ವಹಣೆ ಜೊತೆಗೆ ಲಘು ಪೋಷಕಾಂಶಗಳ ಮಿಶ್ರಣಗಳಾದ ಬಾಳೆ ಸಮೃದ್ಧಿ ಹಾಗೂ ತರಕಾರಿ ಸಮೃದ್ಧಿಗಳ ಬಳಕೆ ಹಾಗೂ ಅವುಗಳ ಉಪಯೋಗಗಳ ಕುರಿತು ಮಾಹಿತಿ ನೀಡಿದರು.
ಡಾ. ಪ್ರಸಾದ್ ಅವರು ಮುಂಗಾರಿನ ಬೆಳೆಗಳಲ್ಲಿ ಕಾಣುವ ಕೀಟ ಹಾಗೂ ರೋಗಗಳ ಬಗ್ಗೆ ಹಾಗೂ ಅವುಗಳ ಜೈವಿಕ ನಿರ್ವಹಣೆ ಕುರಿತು ಮಾಹಿತಿ ನೀಡಿದರು.ವಿಶೇಷವಾಗಿ ಭತ್ತದಲ್ಲಿ ಬರುವ ರೋಗಗಳನ್ನು ತಿಳಿಸಿ ಅವುಗಳ ಜೈವಿಕ ನಿರ್ವಹಣೆ ಬಗ್ಗೆ ರೈತರ ಜೊತೆ ಸಂವಾದ ನಡೆಸಿದರು. ಕೇಂದ್ರೀಯ ಸಿಹಿ ನೀರು ಜಲ ಕೃಷಿ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಸಂಶೋಧನಾ ಕೇಂದ್ರ ಬೆಂಗಳೂರಿನ ಹಿರಿಯ ವಿಜ್ಞಾನಿಯಾದ ಡಾ. ಸತೀಶ್ ಏವುಂಜೆ ಅವರ ಸಂಶೋಧನಾ ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಮೀನುಗಾರಿಕೆಗೆ ಸಂಬಂಧಿಸಿದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗಳು ಕುರಿತು ರೈತರಿಗೆ ಮಾಹಿತಿ ನೀಡಿದರು.
ಸಾಲಿಗ್ರಾಮ ತಾಲೂಕಿನ ಹನುಮನಹಳ್ಳಿ, ಬೀಜನಹಳ್ಳಿ ಹಾಗೂ ಮಿರ್ಲೆ ಗ್ರಾಮದ ರೈತರಿಗೆ ಜಾನುವಾರುಗಳಲ್ಲಿ ಬರುವ ಕಾಲು ಬಾಯಿ ರೋಗದ ನಿರ್ವಹಣೆ, ಕೋಳಿ, ಕುರಿ ಸಾಕಾಣಿಕೆ ಕುರಿತು ಡಾ.ಯು.ಎಂ. ರಕ್ಷಿತ್ ರಾಜ್ ಮಾಹಿತಿ ನೀಡಿದರು. ಡಾ. ದೀಪಕ್ ಅವರು ವಿವಿಧ ಬೆಳೆಗಳ ಮೌಲ್ಯವರ್ಧನೆ, ಪೌಷ್ಟಿಕ ಕೈತೋಟ ಕುರಿತು ಮಾಹಿತಿ ನೀಡಿದರು.