ಬಾಲಪ್ರತಿಭೆಗಳ ಗುರುತಿಸಿ ಪ್ರೋತ್ಸಾಹಿಸಿ: ಶಿವರಾಮ ಹೆಬ್ಬಾರ

| Published : Sep 18 2024, 01:46 AM IST

ಬಾಲಪ್ರತಿಭೆಗಳ ಗುರುತಿಸಿ ಪ್ರೋತ್ಸಾಹಿಸಿ: ಶಿವರಾಮ ಹೆಬ್ಬಾರ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವು ಬಹಳ ಮಹತ್ವದ್ದಾಗಿದೆ. ಸಮಾಜಮುಖಿ ಚಿಂತನೆಯ ಮಾದರಿಯಾದ ಕಾರ್ಯಕ್ರಮ ಇದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಯಲ್ಲಾಪುರ: ಸನಾತನ ಸಂಸ್ಕಾರ, ಪರಂಪರೆ ಹಾಗೂ ಮಹೋನ್ನತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಶ್ರೀಕೃಷ್ಣಾರ್ಪಣಂ ಸಮಾರಂಭವು ಬಹಳ ಔಚಿತ್ಯಪೂರ್ಣವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಸೆ. ೧೫ರಂದು ಪಟ್ಟಣದ ಅಡಿಕೆ ಭವನದಲ್ಲಿ ಸುಜ್ಞಾನ ಸೇವಾ ಫೌಂಡೇಷನ್, ಇ- ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ವತಿಯಿಂದ ಗೌತಮ ಜ್ಯುವೆಲರ್ಸ್, ಹಾಂಗ್ಯೊ ಐಸ್ ಕ್ರೀಂ, ಟಿಎಸ್ಎಸ್, ರಂಗ ಸಹ್ಯಾದ್ರಿಯ ಸಹಯೋಗದಲ್ಲಿ ಜಿಲ್ಲಾಮಟ್ಟದ ಶ್ರೀಕೃಷ್ಣಾರ್ಪಣಂ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಬಾಲಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವು ಬಹಳ ಮಹತ್ವದ್ದಾಗಿದೆ. ಸಮಾಜಮುಖಿ ಚಿಂತನೆಯ ಮಾದರಿಯಾದ ಕಾರ್ಯಕ್ರಮ ಇದಾಗಿದೆ ಎಂದರು.ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಮಕ್ಕಳಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸುವ ಜತೆಗೆ ಪುರಾಣ, ಇತಿಹಾಸದ ಕುರಿತಾದ ಕಲ್ಪನೆಯನ್ನೂ ಮೂಡಿಸಿದಾಗ ಸಾರ್ಥಕತೆ ಬರುತ್ತದೆ. ಸುಜ್ಞಾನ ಸೇವಾ ಫೌಂಡೇಷನ್, ಇ- ಯಲ್ಲಾಪುರ ಡಿಜಿಟಲ್ ನ್ಯೂಸ್, ಸುಜ್ಞಾನ ವಾಹಿನಿ ಹಾಗೂ ಸಂಘಟಕರ ಕಾರ್ಯ ಮಾದರಿಯಾಗಿದೆ ಎಂದರು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮುದ್ದುಕೃಷ್ಣ ವೇಷ ಫೋಟೋ ಸ್ಪರ್ಧೆಯ ವಿಜೇತರಾದ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದ ಮಕ್ಕಳಿಗೆ ನಗದು ಬಹುಮಾನ, ಆಕರ್ಷಕ ಬೆಳ್ಳಿಯ ಸ್ಮರಣಿಕೆ, ಪಾರಿತೋಷಕ, ಪದಕ, ಪ್ರಶಸ್ತಿಪತ್ರ ಹಾಗೂ ೯ ಸಮಾಧಾನಕರ ಬಹುಮಾನ ವಿಜೇತರಿಗೆ ವಿತರಿಸಲಾಯಿತು. ಸಮಾರಂಭದಲ್ಲಿ ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರಿಗೆ ಪ್ರತಿಷ್ಠಿತ ಸುಜ್ಞಾನ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಸೇವಾ ಫೌಂಡೇಷನ್ ಅಧ್ಯಕ್ಷ ಜಿ.ಎನ್. ಭಟ್ಟ ತಟ್ಟಿಗದ್ದೆ ಮಾತನಾಡಿದರು. ಸ್ಪರ್ಧೆಯ ನಿರ್ಣಾಯಕರಾಗಿ ಸಹಕರಿಸಿದ ಶಿಕ್ಷಕ ರಾಘವೇಂದ್ರ ಹೆಗಡೆ, ಪತ್ತಾರ್ ಸ್ಟುಡಿಯೊದ ಗಣೇಶ ಪತ್ತಾರ ಅವರನ್ನು ಗೌರವಿಸಲಾಯಿತು. ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಗೌತಮ ಜ್ಯುವೆಲರ್ಸ್‌ ಮಾಲೀಕ ಪ್ರಕಾಶ ಶೇಟ್, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್. ಹೆಗಡೆ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನಮಠ ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಜ್ಯೋತಿರಾದಿತ್ಯ ಭಟ್ಟ ಸ್ವಾಗತಿಸಿದರು. ಪತ್ರಕರ್ತ ಶ್ರೀಧರ ಅಣಲಗಾರ ಸನ್ಮಾನಪತ್ರ ವಾಚಿಸಿದರು. ಶಿಕ್ಷಕ ಸಣ್ಣಪ್ಪ ಭಾಗ್ವತ ನಿರ್ವಹಿಸಿದರು. ಶಿಕ್ಷಕ ಎಂ. ರಾಜಶೇಖರ ವಂದಿಸಿದರು. ಶ್ರೀಪಾದ ಭಟ್ಟ ಅವರು ಕೃಷ್ಣನ ಕುರಿತಾದ ಭಕ್ತಿ ಗೀತೆಗಳನ್ನು ಹಾಡಿ ರಂಜಿಸಿದರು. ವಿದುಷಿ ವಿನುತಾ ಹೆಗಡೆ ಅವರ ಭರತನಾಟ್ಯ ಗಮನ ಸೆಳೆಯಿತು.