ಅರವಿಂದ ಗೆಲ್ಲಿಸಿದರೆ ಜಾರಕಿಹೊಳಿ ಗೆಲ್ಲಿಸಿದಂತೆ

| N/A | Published : Jun 20 2025, 12:34 AM IST / Updated: Jun 20 2025, 02:25 PM IST

ಅರವಿಂದ ಗೆಲ್ಲಿಸಿದರೆ ಜಾರಕಿಹೊಳಿ ಗೆಲ್ಲಿಸಿದಂತೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದ ಮಾಜಿ ಶಾಸಕ ಹಾಗೂ ಬ್ಯಾಂಕ್‌ನ ಹಾಲಿ ನಿರ್ದೇಶಕ ಅರವಿಂದ ಪಾಟೀಲ ಅವರನ್ನು ಇಡೀ ಜಾರಕಿಹೊಳಿ ಸಹೋದರರ ಬೆಂಬಲಿತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

  ಖಾನಾಪುರ :  ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದ ಮಾಜಿ ಶಾಸಕ ಹಾಗೂ ಬ್ಯಾಂಕ್‌ನ ಹಾಲಿ ನಿರ್ದೇಶಕ ಅರವಿಂದ ಪಾಟೀಲ ಅವರನ್ನು ಇಡೀ ಜಾರಕಿಹೊಳಿ ಸಹೋದರರ ಬೆಂಬಲಿತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. 

ಈ ಚುನಾವಣೆಯಲ್ಲಿ ತಾಲೂಕಿನ ಮತದಾರರು ಅರವಿಂದ ಪಾಟೀಲರನ್ನು ಗೆಲ್ಲಿಸಿದರೆ ಜಾರಕಿಹೊಳಿ ಕುಟುಂಬವನ್ನು ಗೆಲ್ಲಿಸಿದಂತೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪಟ್ಟಣದ ಶುಭಂ ಗಾರ್ಡನ್ ಸಭಾಗೃಹದಲ್ಲಿ ಬುಧವಾರ ಆಯೋಜಿಸಿದ್ದ ಬಿಡಿಸಿಸಿ ಬ್ಯಾಂಕ್ ಚುನಾವಣೆಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮುಂದಿನ ಅಕ್ಟೋಬರ್.19ರಂದು ಭಾನುವಾರ ಮತದಾನ ನಡೆಯಲಿದೆ. ಬಿಡಿಸಿಸಿ ಬ್ಯಾಂಕ್ ಚುನಾವಣೆ ರಾಜಕೀಯ ರಹಿತವಾದ ಚುನಾವಣೆಯಾಗಿದೆ. 

ಹೀಗಾಗಿ ಈ ಚುನಾವಣೆಯನ್ನು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ನಾಲ್ಕು ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾಗಿರುವ ಅವರಿಂದ ಅವರನ್ನು 5ನೇ ಅವಧಿಗೆ ಖಾನಾಪುರ ಕ್ಷೇತ್ರದ ಅಭ್ಯರ್ಥಿಯಾಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ. 

ಅರವಿಂದ ಅವರ ಆಯ್ಕೆ ಬಗ್ಗೆ ಮತ್ತು ಅವರ ದುಡುಕಿನ ಸ್ವಭಾವದ ಕ್ಷೇತ್ರದ ಹಾಲಿ ಶಾಸಕ ವಿಠ್ಠಲ ಹಲಗೇಕರ ಅವರು ತಮ್ಮ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದು, ಕೋಪಿಷ್ಟರಾದ ಅರವಿಂದ ಅವರಿಗೆ ತಮ್ಮ ಸ್ವಭಾವ ತಿದ್ದಿಕೊಳ್ಳುವಂತೆ ತಿಳಿಹೇಳಲಾಗುವುದು. 

ಈ ಚುನಾವಣೆಯಲ್ಲಿ ಅರವಿಂದ ಅವರನ್ನು ಬೆಂಬಲಿಸುವಂತೆ ಶಾಸಕ ಹಲಗೇಕರ ಅವರ ಮನವೊಲಿಸಲಾಗುವುದು ಎಂದರು. ಈಗಾಗಲೇ ಈ ಕ್ಷೇತ್ರದಿಂದ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸ್ಪರ್ಧಿಸಲು ಹಲವು ಧುರೀಣರು ಸಿದ್ಧತೆಗಳನ್ನು ನಡೆಸಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿವೆ. ಅರವಿಂದ ಎರಡು ದಶಕಗಳಿಂದ ಬ್ಯಾಂಕಿನ ನಿರ್ದೇಶಕರಾಗಿ, ಒಂದು ಅವಧಿಗೆ ಈ ಕ್ಷೇತ್ರದ ಶಾಸಕರಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಕೆಲವರು ಅರವಿಂದ ಅವರ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದು, ಈ ಚುನಾವಣೆಯಲ್ಲಿ ಇಡೀ ಜಾರಕಿಹೊಳಿ ಕುಟುಂಬ ಅರವಿಂದ ಅವರ ಬೆನ್ನ ಹಿಂದಿದೆ ಎಂಬ ಸಂದೇಶವನ್ನು ಇಲ್ಲಿಯ ಜನರಿಗೆ ಮತ್ತು ವಿರೋಧಿಗಳಿಗೆ ನೀಡುವ ಉದ್ದೇಶದಿಂದ ತಾವು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದು, ಅರವಿಂದ ಅವರ ಪರ ಬ್ಯಾಂಕಿನ ಮೊದಲ ಚುನಾವಣಾ ಪ್ರಚಾರ ಸಭೆಯನ್ನು ಖಾನಾಪುರದಿಂದಲೇ ಆರಂಭಿಸಲಾಗಿದೆ ಎಂದು ವಿವರಿಸಿದರು. 

ಬಿಡಿಸಿಸಿ ನಿರ್ದೇಶಕ ರಾಜೇಂದ್ರ ಅಂಕಲಗಿ ಮಾತನಾಡಿ, 20 ವರ್ಷಗಳ ಹಿಂದೆ ತಾಲೂಕಿನಲ್ಲಿ ವರ್ಷಕ್ಕೆ ₹9 ಕೋಟಿಯಷ್ಟು ಇದ್ದ ಪಿಕೆಪಿಎಸ್ ಬೆಳೆಸಾಲದ ಮೊತ್ತವನ್ನು ಅರವಿಂದ ಅವರು ಈಗ ₹180 ಕೋಟಿಗೆ ಹೆಚ್ಚಿಸಿದ್ದಾರೆ. ಜೊತೆಗೆ ಬಿಡಿಸಿಸಿ ಬ್ಯಾಂಕಿನಲ್ಲಿ ಖಾನಾಪುರ ತಾಲೂಕಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೂ ತಾವೇ ಖುದ್ದಾಗಿ ನಿಂತು ಮಾಡುತ್ತಾರೆ. ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದಾರೆ. 

ಇಂದಿನ ಸಭೆಯಲ್ಲಿ ಇಲ್ಲಿಯ 58 ಪಿಕೆಪಿಎಸ್ ಸಂಘಗಳ ಪೈಕಿ 52 ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಕಾರ್ಯದರ್ಶಿಗಳು ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದನ್ನು ಗಮನಿಸಿದರೆ ಅರವಿಂದ ಅವರಿಗೆ ಜನಬೆಂಬಲ ಇರುವುದು ಸ್ಪಷ್ಟವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯನ್ನುದ್ದೇಶಿಸಿ ಬಿಡಿಸಿಸಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ನಿರ್ದೇಶಕ ಮಹಾಂತೇಶ ದೊಡಗೌಡರ, ಬೆಳಗಾವಿ ಟಿಎಪಿಸಿಎಂಎಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಮಾಜಿ ಜಿಪಂ ಸದಸ್ಯ ಬಾಬುರಾವ್ ದೇಸಾಯಿ, ಮಹಾರುದ್ರಯ್ಯ ಹಿರೇಮಠ, ಶ್ರೀಶೈಲ ಮಾಟೋಳಿ, ಯಲ್ಲಪ್ಪ ಗುಪೀತ, ಶಿವಾನಂದ ಪಾಟೀಲ, ಶಿವಾನಂದ ಗೌರಿ, ಅಶೋಕ ಯಮಕನಮರಡಿ ಮತ್ತಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಜೀತೆಂದ್ರ ಮಾದಾರ, ಜ್ಯೋತಿಬಾ ರೇಮಾಣಿ, ಸುರೇಶ ದೇಸಾಯಿ, ಯಶವಂತ ಕೋಡೊಳ್ಳಿ, ಪುಂಡಲೀಕ ಕಾರಲಗೇಕರ, ಮಹಾನಿಂಗ ಇಟಗಿ, ಮಾರುತಿ ಹೇರೇಕರ, ಮಾರುತಿ ಟಕ್ಕೇಕರ, ಮಹೇಶ ಗುರವ, ಮಹೇಶ ಪಾಟೀಲ, ಮಹಾಬಳೇಶ್ವರ ಚವಲಗಿ, ಕಾಶೀಂ ಹಟ್ಟಿಹೊಳಿ ಸೇರಿದಂತೆ ತಾಲೂಕಿನ ಸಹಕಾರ ಕ್ಷೇತ್ರದ ಪದಾಧಿಕಾರಿಗಳು, ಬಿಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಇದ್ದರು. ವಿಠ್ಠಲ ಹಿಂಡಲಕರ ಕಾರ್ಯಕ್ರಮ ನಿರ್ವಹಿಸಿದರು. ಅರವಿಂದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿಬಾ ಭರಮಪ್ಪನವರ ವಂದಿಸಿದರು.

Read more Articles on