ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಧರ್ಮದ ವಿಷಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಬಿಜೆಪಿ ನಾಯಕರು ಧಮ್ಮಿದ್ದರೆ ಅಭಿವೃದ್ಧಿ ಹೆಸರಿನಲ್ಲಿ ರಾಜಕಾರಣ ಮಾಡಲಿ ಎಂದು ಶಾಸಕ ಕೆ.ಎಂ. ಉದಯ್ ಸವಾಲು ಹಾಕಿದರು.ತಾಲೂಕಿನ ವೈದ್ಯನಾಥಪುರ ಗ್ರಾಮದ ಶ್ರೀ ವೈದ್ಯನಾಥೇಶ್ವರ ದೇಗುಲದ ಶಿಂಷಾ ನದಿ ದಡದಲ್ಲಿ ಸೋಪಾನಕಟ್ಟೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣೆಗಳು ಬಂದಾಗ ಬಿಜೆಪಿ ನಾಯಕರು ಧರ್ಮದ ವಿಷಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಹವ್ಯಾಸ ರೂಡಿಸಿಕೊಂಡಿದ್ದಾರೆ. ರಾಜ್ಯದ ಜನರು ಬುದ್ಧಿವಂತರಾಗಿದ್ದಾರೆ. ಇವರ ತಂತ್ರಕ್ಕೆ ಮರಳಾಗುವುದಿಲ್ಲ ಎಂದರು.ಧರ್ಮ ರಾಜಕಾರಣವನ್ನು ಬಿಜೆಪಿ ನಾಯಕರು ಪ್ರತಿ ಚುನಾವಣೆಯಲ್ಲೂ ನಡೆಸಿಕೊಂಡು ಬರುವ ಮೂಲಕ ರಾಜ್ಯದ ಜನರನ್ನು ಸೆಳೆಯುವ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಧರ್ಮದ ಅಸ್ತ್ರವನ್ನು ಜನರ ಮೇಲೆ ಪ್ರಯೋಗಿಸಿ ಕೋಮು ದ್ವೇಷವನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿರುವ ಬಿಜೆಪಿ ನಾಯಕರ ಇಂತಹ ರಾಜಕಾರಣ ಸದಾಕಾಲ ಪ್ರಯೋಜನಕ್ಕೆ ಬರುವುದಿಲ್ಲ. ಬುದ್ಧಿವಂತರಾಗಿರುವ ಜನರು ಇವರ ತಂತ್ರ ಮತ್ತು ಮಾತನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಶಾಸಕರ ಕ್ಷೇತ್ರಕ್ಕೆ 25 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅನುದಾನದಲ್ಲಿ ಮದ್ದೂರು ಕ್ಷೇತ್ರದ ಪ್ರತಿ ಜಿಪಂ ಕ್ಷೇತ್ರಗಳಿಗೆ ನಾಲ್ಕರಿಂದ ಐದು ಕೋಟಿ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡುವ ಮೂಲಕ ಶಿಥಿಲಗೊಂಡಿರುವ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.ಪುರಾಣ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ದೇಗುಲದ ಪಕ್ಕದ ಶಿಂಷಾ ನದಿಗೆ ಸೋಫಾನಕಟ್ಟೆ ಮತ್ತು ತಡೆಗೋಡೆ ನಿರ್ಮಾಣಕ್ಕೆ ಕಾವೇರಿ ನೀರಾವರಿ ನಿಗಮದ ವತಿಯಿಂದ 3 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಆಶ್ವಾಸನೆ ನೀಡಿದರು.
ವೈದ್ಯನಾಥಪುರದ ಶ್ರೀ ಪ್ರಸನ್ನ ಪಾರ್ವತಂಬ ವೈದ್ಯನಾಥೇಶ್ವರ ಟ್ರಸ್ಟ್ ಅಧ್ಯಕ್ಷ ವಿ .ಎಲ್. ರಾಜು, ಗ್ರಾಪಂ ಅಧ್ಯಕ್ಷೆ ಶಿಲ್ಪ, ಸದಸ್ಯ ಗಿರೀಶ, ಮಾಜಿ ಸದಸ್ಯ ಶಿವರಾಜು, ಮುಖಂಡರಾದ ವಿ. ಗೋವಿಂದ. ಮುರಳಿಧರ, ವಿ.ಎಂ. ನಾರಾಯಣ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿಕುಮಾರ್, ನಿವೃತ್ತ ಯೋಧ ಸಿಪಾಯಿ ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.