ಪದ ಪಾಂಡಿತ್ಯಕ್ಕಿಂತ ಸತ್ಯ ಮತ್ತು ಸರಳತೆಯೇ ಬುದ್ಧನ ದೃಷ್ಟಿಯಾಗಿತ್ತು. ಕವಿಗಳ ಲೇಖನಿಯಿಂದ ಬರುವ ಪ್ರತಿ ಸಾಲು ಜಗತ್ತಿಗೆ ಪ್ರೀತಿಯನ್ನು ಹಂಚಲಿ
ಕಾವ್ಯ ಬೆಳದಿಂಗಳು-೨೦೨೬ ಕವಿಗೋಷ್ಠಿಗೆ ಚಾಲನೆ ನೀಡಿ ಸಿಎಂ ಮಾಧ್ಯಮ ಸಲಹೆಗಾರ
ಕನ್ನಡಪ್ರಭ ವಾರ್ತೆ ಕೋಲಾರಬುದ್ಧ, ಕಾವ್ಯ ಮತ್ತು ಬೆಳದಿಂಗಳು ಈ ಮೂರರ ನಡುವೆ ಅವಿನಾಭಾವ ಸಂಬಂಧವಿದೆ. ಇಂದಿನ ಯುದ್ಧದ ಕಾರ್ಮೋಡಗಳ ನಡುವೆ ಬುದ್ಧ ಹೆಚ್ಚು ಪ್ರಸ್ತುತನಾಗಿದ್ದಾನೆ. ಬುದ್ಧನ ಬದುಕು ಲೌಕಿಕ ಜಗತ್ತಿಗೆ ಅಗತ್ಯವಿರುವ ಕಾವ್ಯ ಔಷಧದಂತಿದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.ತಾಲೂಕಿನ ಮಂಗಸಂದ್ರದ ಬೆಂಗಳೂರು ಉತ್ತರ ವಿವಿ ಸುವರ್ಣಗಂಗೆ ಸ್ನಾತಕೋತ್ತರ ಕೇಂದ್ರದಲ್ಲಿ ಬುದ್ಧ ಪೂರ್ಣಿಮಾ ಅಂಗವಾಗಿ ಕಾವ್ಯ ಬೆಳದಿಂಗಳು-೨೦೨೬ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿ, ಪದ ಪಾಂಡಿತ್ಯಕ್ಕಿಂತ ಸತ್ಯ ಮತ್ತು ಸರಳತೆಯೇ ಬುದ್ಧನ ದೃಷ್ಟಿಯಾಗಿತ್ತು. ಕವಿಗಳ ಲೇಖನಿಯಿಂದ ಬರುವ ಪ್ರತಿ ಸಾಲು ಜಗತ್ತಿಗೆ ಪ್ರೀತಿಯನ್ನು ಹಂಚಲಿ ಎಂದು ಹಾರೈಸಿದರು.ಸಿಎಂ ಆಪ್ತ ಕಾರ್ಯದರ್ಶಿ ಡಾ.ನೆಲಕುಂಟೆ ವೆಂಕಟೇಶಯ್ಯ, ಬುದ್ದ ನಮನ ಸಲ್ಲಿಸಿ, ಬುದ್ಧ ಎನ್ನುವ ವ್ಯಕ್ತಿತ್ವ ಮನುಷ್ಯ ಲೋಕವು ಲಕ್ಷಾಂತರ ವರ್ಷಗಳ ನಂತರ ಕಂಡುಕೊಂಡ ಅತ್ಯಂತ ಅದ್ಭುತವಾದ ಶಕ್ತಿ. ಅವರು ಕೇವಲ ಏಷ್ಯಾದ ಬೆಳಕಲ್ಲ, ಇಡೀ ಮಾನವ ಕುಲದ ಅರಿವಿನ ಬೆಳಕು ಎಂದು ಬಣ್ಣಿಸಿದರು.ಬೌದ್ಧ ಪರಂಪರೆ ಮತ್ತು ಸಮಕಾಲೀನ ಸಮಾಜದ ಕುರಿತು ಮಾತನಾಡಿದ ಅವರು, ಕೋಲಾರದ ನೆಲಕ್ಕೂ ಬೌದ್ಧ ಧರ್ಮಕ್ಕೂ ಅವಿನಾಭಾವ ಸಂಬಂಧ ಇದೆ. ಎರಡು ಸಾವಿರ ವರ್ಷಗಳ ಹಿಂದೆ ಇಂದ್ರ ಸಂಸ್ಕೃತಿಯ ಎದುರು ಬೌದ್ಧ ಸಂಸ್ಕೃತಿಯನ್ನು ಕಟ್ಟಿದ ಮಹನೀಯರಲ್ಲಿ ಬುದ್ಧ ಮೊದಲಿಗ ಎಂದು ಹೇಳಿದರು.
ಅಧಿಕಾರ ಮತ್ತು ವಿಜ್ಞಾನ, ವಿಜ್ಞಾನದ ಮೂಲಕ ದೊರೆಯುವ ಶಕ್ತಿ. ಸತ್ಯದ ಮಾರ್ಗ (ಕಾವ್ಯ) ವ್ಯಾಸ, ವಾಲ್ಮೀಕಿ, ರೂಮಿ, ಟ್ಯಾಗೋರ್ ಅಂತಹವರು ಕಂಡುಕೊಂಡ ಸತ್ಯ. ಭವ್ಯತೆಯ ಮಾರ್ಗ ಮಹಾವೀರ, ಜೀಸಸ್, ಮೊಹಮ್ಮದ್ ಪೈಗಂಬರ್ ಅವರಂತಹವರು ತೋರಿದ ದಾರಿ ಎಂದರು.ಬುದ್ಧ ಈ ಮೂರೂ ಮಾರ್ಗಗಳ ಸಮನ್ವಯತೆ. ಅವನು ಒಬ್ಬ ಸಂತ, ಒಬ್ಬ ಕವಿ ಮತ್ತು ಒಬ್ಬ ಆದಿ ವಿಜ್ಞಾನಿ. ಈ ಮೂರು ವ್ಯಕ್ತಿತ್ವಗಳು ಒಟ್ಟುಗೂಡಿದ ಇಂತಹ ಅದ್ಭುತ ಶಕ್ತಿ ಬುದ್ಧನ ನಂತರ ಮತ್ತೆ ಬರಲು ಸಾಧ್ಯವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ.ಕೆ.ಶರೀಫಾ, ದೂರದರ್ಶನ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥೆ ಎಚ್.ಎನ್.ಆರತಿ, ಅವಧಿ ಪತ್ರಿಕೆಯ ಸಂಪಾದಕ ಜಿ.ಎನ್.ಮೋಹನ್, ಸಾಹಿತಿ ಲಕ್ಷ್ಮಿಪತಿ ಕೋಲಾರ, ಕುಲಪತಿ ಡಾ.ಬಿ.ಕೆ.ರವಿ, ಕುಲಸಚಿವ ಪ್ರೊ.ಎನ್. ಲೋಕನಾಥ್, ಹಣಕಾಸು ಅಧಿಕಾರಿ ವಸಂತಕುಮಾರ್ ಬಿ.ವಿ., ಕ್ಯಾಂಪಸ್ ನಿರ್ದೇಶಕಿ ಪ್ರೊ.ಡಿ.ಕುಮುದ, ಡಾ.ರಮೇಶ್ ಎಂ.ಎನ್ ಇದ್ದರು. ೫೦ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಗಾಯತ್ರಿ ದೇವಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.