ಗ್ಯಾರಂಟಿ ನಿಲ್ಲಿಸಿದ್ರೆ ಜನರೇ ಬಡೀತಾರೆ: ವಿಜಯೇಂದ್ರ

| Published : Apr 22 2024, 02:01 AM IST / Updated: Apr 22 2024, 08:58 AM IST

ಗ್ಯಾರಂಟಿ ನಿಲ್ಲಿಸಿದ್ರೆ ಜನರೇ ಬಡೀತಾರೆ: ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ನಿಲ್ಲಿಸಿದರೆ ಜನರೇ ಬಡಿಗೆ ತೆಗೆದುಕೊಂಡು ಸರ್ಕಾರವನ್ನು ಬಡಿಯುತ್ತಾರೆ‌ ಎಚ್ಚರವಿರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.

 ಮೈಸೂರು :  ಗ್ಯಾರಂಟಿ ನಿಲ್ಲಿಸಿದರೆ ಜನರೇ ಬಡಿಗೆ ತೆಗೆದುಕೊಂಡು ಸರ್ಕಾರವನ್ನು ಬಡಿಯುತ್ತಾರೆ‌ ಎಚ್ಚರವಿರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿ ಹೆಸರು ಹೇಳಿಕೊಂಡೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾನು ಕೇಳುತ್ತಿರುವುದು ಈ ಸರ್ಕಾರದಲ್ಲಿ ಯಾವ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಹೇಳಿ? ಒಂದೇ ಒಂದು ನಯಾ ಪೈಸೆ ಬಿಡುಗಡೆಯಾಗಿದೆಯಾ ಎಂದು ಪ್ರಶ್ನಿಸಿದರು.

ಚೊಂಬು ಪ್ರದರ್ಶನಕ್ಕೆ ತಿರುಗೇಟು: ಮೋದಿ ರಾಜ್ಯ ಭೇಟಿ ವೇಳೆ ರಸ್ತೆಗಿಳಿದು ನಲಪಾಡ್ ಚೊಂಬು ಪ್ರದರ್ಶನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಮುಗಿದ ಮೇಲೆ ನಲಪಾಡ್ ಹಾಗೂ ಕಾಂಗ್ರೆಸ್ ನಾಯಕರಿಗೆ ಅದೇ ಪರಿಸ್ಥಿತಿ ಬರಲಿದೆ. ಫಲಿತಾಂಶ ಬಂದ ನಂತರ ಅವರು ಚೊಂಬು ಹಿಡಿದುಕೊಂಡು ಹೋಗುವ ಸ್ಥಿತಿ ಬರುತ್ತದೆ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಜಾಹೀರಾತು, ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಅವರು ಏನಾದರೂ ಜಾಹೀರಾತು ಕೊಟ್ಟಿಕೊಳ್ಳಲಿ. ಈ ಬಾರಿ ಜನ ಮತ್ತೆ ಮೋದಿ ಅವರನ್ನು ಪ್ರಧಾನಿ‌ಮಾಡುತ್ತಾರೆ ಎಂದರು.

ರೈತ ಸಾಲ ಮನ್ನಾ ಹಾಗೂ ಕಾಂಗ್ರೆಸ್ ಹೊಸ ಗ್ಯಾರಂಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಯಾವ ಭರವಸೆಯನ್ನೂ ಪೂರೈಸಲ್ಲ. ಅವರು ಅಧಿಕಾರಕ್ಕೆ ಬಂದರೆ ತಾನೇ ಮಾಡುವುದು. ದೇಶದಲ್ಲಿ ಕಾಂಗ್ರೆಸ್ 50 ಸೀಟ್ ಸಹ ದಾಟಲ್ಲ. ಹೀಗಾಗಿ, ಪ್ರಣಾಳಿಕೆ ಗ್ಯಾರಂಟಿ ಯಾವುದು ಜಾರಿಯಾಗಲ್ಲ ಎಂದು ತಿಳಿಸಿದರು.

ಹಿಂದುಳಿದ ನಾಯಕ ಎನ್ನುವ ಸಿದ್ದುಓಲೈಸೋದು ಅಲ್ಪಸಂಖ್ಯಾತರನ್ನು 

ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಭಾನುವಾರ ಆಯೋಜಿಸಿದ್ದ ಕಾಯಕ ಸಮಾಜಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಅಹಿಂದ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ, ಅವರು ಕೇವಲ ಅಲ್ಪಸಂಖ್ಯಾತರ ಹಿಂದೆ ಹೊರಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಅಧಿವೇಶನದ ವೇಳೆಯೇ ಮಹಿಳೆಯನ್ನು ವಿವಸ್ತ್ರಗೊಳಿಸುವ ಪ್ರಯತ್ನ ನಡೆದಿತ್ತು. ಇದೀಗ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ ಆಗಿದ್ದು, ರಾಜ್ಯದಲ್ಲಿ ಮಹಿಳೆಯರ ರಕ್ಷಣೆ ಸವಾಲಾಗಿದೆ. ಗೃಹ ಸಚಿವರು, ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಚಿಂತೆ ಇಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಗ್ಯಾರಂಟಿ ಭರಾಟೆಯಲ್ಲಿ ಮುಳುಗಿದ್ದು, ಅಭಿವೃದ್ಧಿ ಯಲ್ಲಿ ಹಿಂದೆ ಬಿದ್ದಿದೆ. ಈ‌ ಚುನಾವಣೆ ದೇಶದ ಭವಿಷ್ಯ ರೂಪಿಸುವ ಚುನಾವಣೆ. ಮೋದಿ ಹಿಂದುಳಿದ ವರ್ಗಕ್ಕೆ ಸೇರಿದ ಹೆಮ್ಮೆಯ ಪ್ರಧಾನಿ ಎಂದರು.