ಸಾರಾಂಶ
ರಸ್ತೆ ತಿರುವಿನಲ್ಲಿ ಸಾಕಷ್ಟು ನೀರು ನಿಲ್ಲುತ್ತಿದೆ. ದ್ವಿ ಚಕ್ರವಾಹನ ಸವಾರರಂತೂ ಮಳೆ ಬಂದರೆ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದೆ. ರಸ್ತೆ ಬದಿಯ ಮನೆಗಳಿಗೆ ಆಗಾಗ್ಗೆ ನೀರು ನುಗ್ಗಿ ವಸ್ತುಗಳೆಲ್ಲ ಹಾಳಾಗುತ್ತಿದ್ದರೂ ಸಮಸ್ಯೆಯನ್ನು ಪರಿಹರಿಸುವ ಗೋಜಿಗೆ ಯಾವುದೇ ಅಧಿಕಾರಿಗಳು ಹೋಗಿಲ್ಲ.
ಕನ್ನಡಪ್ರಭ ವಾರ್ತೆ ಮಾಗಡಿ
ಪಟ್ಟಣದ ಎನ್ಇಎಸ್ ನಿಂದ ಹೊಸಪೇಟೆಗೆ ಹೋಗುವ ಮುಖ್ಯರಸ್ತೆಯಲ್ಲಿ ಸಣ್ಣ ಮಳೆ ಬಂದರೂ ನೀರು ನಿಂತು ಕೆರೆಯಂತಾಗಿ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಮಳೆ ನೀರು ಸರಾಗವಾಗಿ ಚರಂಡಿಯಲ್ಲಿ ಹೋಗದೇ ರಸ್ತೆಯಲ್ಲೇ ಹರಿಯುತ್ತಿದ್ದು, ರಸ್ತೆ ತಿರುವಿನಲ್ಲಿ ಸಾಕಷ್ಟು ನೀರು ನಿಲ್ಲುತ್ತಿದೆ. ದ್ವಿ ಚಕ್ರವಾಹನ ಸವಾರರಂತೂ ಮಳೆ ಬಂದರೆ ಈ ರಸ್ತೆಯಲ್ಲಿ ಓಡಾಡುವುದೇ ಕಷ್ಟಕರವಾಗಿದೆ. ರಸ್ತೆ ಬದಿಯ ಮನೆಗಳಿಗೆ ಆಗಾಗ್ಗೆ ನೀರು ನುಗ್ಗಿ ವಸ್ತುಗಳೆಲ್ಲ ಹಾಳಾಗುತ್ತಿದ್ದರೂ ಸಮಸ್ಯೆಯನ್ನು ಪರಿಹರಿಸುವ ಗೋಜಿಗೆ ಯಾವುದೇ ಅಧಿಕಾರಿಗಳು ಹೋಗಿಲ್ಲ, ವಾಹನ ಸವಾರರು ರಾಮನಗರ ಮತ್ತು ದಾಬಸ್ ಪೇಟೆಗೆ ಈ ರಸ್ತೆಯಲ್ಲೇ ಓಡಾಡಬೇಕಿದೆ. ಪಟ್ಟಣದಲ್ಲಿ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದ್ದು, ಮುಖ್ಯ ರಸ್ತೆಯ ಅಕ್ಕಪಕ್ಕ ಗಿಡಗಳು ಬೆಳೆದು ಎದುರಿಗೆ ಬರುವ ವಾಹನಗಳೂ ಕಾಣದಂತಾಗಿವೆ. ಜೊತೆಗೆ ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡುವುದು ಸಾಕಷ್ಟು ಕಷ್ಟರವಾಗಿದ್ದು, ಸಾಕಷ್ಟು ಅಪಘಾತಗಳಾಗಿರುವ ಪ್ರಕರಣಗಳು ಹೆಚ್ಚಾಗಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ರಸ್ತೆಯನ್ನು ಸಮರ್ಪಕವಾಗಿ ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.