ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪುರಸಭೆ ಮಳಿಗೆಗಳ ಬಾಡಿಗೆ ವಸೂಲಿಗೆ ಹೋದಾಗ ಲಕ್ಷಾಂತರ ರು. ಬಾಡಿಗೆ ಬಾಕಿ ಉಳಿಸಿಕೊಂಡಿರುವ ವ್ಯಾಪಾರಿಗಳು, ಕರ ವಸೂಲಿದಾರರಿಗೆ ಐನೂರು, ಸಾವಿರ ಹಣ ನೀಡಿ ಲಕ್ಷಾಂತರ ರು.ಗಳನ್ನು ಉಳಿಸಿಕೊಂಡಿದ್ದಾರೆ. ಇದನ್ನೆಲ್ಲಾ ಸಹಿಸಲ್ಲ. ಬಾಡಿಗೆ ವಸೂಲಿ ಮಾಡದಿದ್ದರೆ ಅವರ ಸಂಬಳ ತಡೆಹಿಡಿಯಿರಿ ಎಂದು ಮುಖ್ಯಾಧಿಕಾರಿ ಶಿವಶಂಕರ್‌ ಹಾಗೂ ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮೀ ಅವರಿಗೆ ಶಾಸಕ ಎಚ್. ಡಿ. ರೇವಣ್ಣ ಸೂಚಿಸಿದರು.ಪಟ್ಟಣದ ಪುರಸಭೆಯಲ್ಲಿ ಬುಧವಾರ ಪ್ರಗತಿ ಪರಿಸೀಲನೆ ನಡೆಸಿದ ನಂತರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಪುರಸಭೆಯ ವಾಣಿಜ್ಯ ಮಳಿಗೆಗಳ ಲಾಕ್ಷಾಂತರ ಬಾಡಿಗೆ ಬಾಕಿ ಇದ್ದರೂ ಬಾಡಿಗೆ ವಸೂಲಿ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದು, ಇದನ್ನ ಸಹಿಸಲು ಸಾಧ್ಯವಿಲ್ಲ ಎಂದರು. ಪುರಸಭೆ ಮಳಿಗೆಗಳ ಕರ ವಸೂಲಿಗಾರ ಮೋಹನ್ ಮಾತನಾಡಿ ಮಾಂಸ ಮಾರಾಟ ಮಳಿಗೆಯ ಬಾಕಿ ೮ ಲಕ್ಷ ರು, ಮಲ್ಲೇಗೌಡ ಎಂಬುವವರ ಮಳಿಗೆ ಬಾಕಿ ೪ ಲಕ್ಷ ರು, ಹಾಗೂ ರಿಯಾಜ್ ಎಂಬುವವರ ಮಳಿಗೆಯ ಬಾಡಿಗೆ ಬಾಕಿ ೫ ಲಕ್ಷ ರು. ಸೇರಿದಂತೆ ಇನ್ನೂ ಅನೇಕರ ಬಾಡಿಗೆಯ ಲಕ್ಷಾಂತರ ಬಾಕಿ ಇದ್ದು ಎಷ್ಟು ಕೇಳಿದರೂ ಬಾಡಿಗೆ ಪಾವತಿಸುತ್ತಿಲ್ಲ ಎಂದು ಸಹಾಯಕತೆ ವ್ಯಕ್ತ ಪಡಿಸಿದರು. ಶಾಸಕ ಎಚ್. ಡಿ. ರೇವಣ್ಣ ಅವರು ಯಾರು ಬಾಡಿಗೆ ನೀಡಿಲ್ಲ ಅವರಿಗೆ ಒಂದು ವಾರದೊಳಗೆ ಬಾಡಿಗೆ ಪಾವತಿಸುವಂತೆ ನೋಟಿಸ್ ನೀಡಿ, ನಂತರ ಬೀಗ ಹಾಕಿ ಖಾಲಿ ಮಾಡಿಸಿ, ಮರು ಹರಾಜು ಮಾಡಿ ಮತ್ತು ಮುಂಗಡ ಹಣ ಮುಟ್ಟುಗೋಲು ಹಾಕಿಕೊಳ್ಳಿ ಎಂದರು.ಪಟ್ಟಣದಲ್ಲಿ ಇನ್ನೂ ಕೆಲವು ಮಾಂಸದ ಅಂಗಡಿಗಳನ್ನು ತೆರೆಯಲು ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು. ಪುರಸಭೆಯಲ್ಲಿ ಖಾತೆ ಮಾಡಿಕೊಡುತ್ತಿಲ್ಲ, ಈ ಸ್ವತ್ತು ಮಾಡಿ ಕೊಡಲು ತಿರುಗಿಸುತ್ತಿದ್ದಾರೆ ಎನ್ನುವ ಆರೋಪ ಇದೆ, ಮುಖ್ಯಾಧಿಕಾರಿಗಳೇ ಪುರಸಭೆ ಸಿಬ್ಬಂದಿಯಿಂದ ಕೆಲಸ ಮಾಡಿಸಿ ಎಂದರು. ಪುರಸಭೆ ವ್ಯಾಪ್ತಿಯಲ್ಲಿ ಯಾರಿಗೆ ಮನೆಗಳಿಲ್ಲ ಒಂದು ಪಟ್ಟಿ ಮಾಡಿ ಕೊಡಿ ಎಂದೆ ಇನ್ನೂ ಕೊಟ್ಟಿಲ್ಲ. ಇನ್ನೂ ನಿಮಗೆ ಎಷ್ಟುದಿನ ಬೇಕು ಎಂದಾಗ ಸಿಬ್ಬಂದಿ ರಮೇಶ್ ೧೫ ದಿನದಲ್ಲಿ ಪಟ್ಟಿಕೊಡುತ್ತೇನೆ ಎಂದರು. ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿ, ೪೦ ವರ್ಷವಾಗಿದೆ ಮತ್ತು ಬಹುತೇಕ ಹಾಳಾಗಿದೆ. ೧೨೭ ಕೋಟಿ ರು. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ ಆದರೆ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ ಎಂದರು. ಪಟ್ಟಣದ ಬಸ್ ನಿಲ್ದಾಣ ಹಾಗೂ ದೇವಾಂಗ ಬಡಾವಣೆಯ ಸುತ್ತಮುತ್ತ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮಾಡಲು ೨ ಹೊಸ ಮಿನಿ ಟ್ಯಾಂಕ್‌ಗಳನ್ನು ಕಟ್ಟಲು ಪ್ರಸ್ಥಾವನೆ ಸಲ್ಲಿಸಲು ಎಂಜಿನಿಯರ್‌ ಪರಮೇಶ್‌ಗೆ ಸೂಚಿಸಿದರು.