ಸಂಯುಕ್ತಾ ಸಂಸತ್ತಿಗೆ ಹೋದ್ರೆ ರಾಜ್ಯಕ್ಕೆ ನ್ಯಾಯ ಒದಗಿಸ್ತಾರೆ: ಮಹಮ್ಮದ್ ಹ್ಯಾರಿಸ್ ನಲಪಾಡ್

| Published : May 04 2024, 12:37 AM IST

ಸಂಯುಕ್ತಾ ಸಂಸತ್ತಿಗೆ ಹೋದ್ರೆ ರಾಜ್ಯಕ್ಕೆ ನ್ಯಾಯ ಒದಗಿಸ್ತಾರೆ: ಮಹಮ್ಮದ್ ಹ್ಯಾರಿಸ್ ನಲಪಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಸಂಯುಕ್ತಾ ಪಾಟೀಲ ಅವರು ತಂದೆ ಸಚಿವ ಶಿವಾನಂದ ಪಾಟೀಲರ ಪ್ರಭಾವದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಅವಕಾಶ ಪಡೆದಿಲ್ಲ.ನಾಯಕತ್ವ ಗುಣ ಹೊಂದಿರುವ ಕಾನೂನು ಪದವಿಧರೆಯಾಗಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಸಂಯುಕ್ತಾ ಪಾಟೀಲ ಅವರು ತಂದೆ ಸಚಿವ ಶಿವಾನಂದ ಪಾಟೀಲರ ಪ್ರಭಾವದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಅವಕಾಶ ಪಡೆದಿಲ್ಲ.ನಾಯಕತ್ವ ಗುಣ ಹೊಂದಿರುವ ಕಾನೂನು ಪದವಿಧರೆಯಾಗಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿದರು.

ಬೀಳಗಿ ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸತತ ನಾಲ್ಕು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಪಿ.ಸಿ.ಗದ್ದಿಗೌಡರ ತಮ್ಮ ಕ್ಷೇತ್ರ ಅಥವಾ ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ನಮ್ಮ ಪರವಾಗಿ ಮಾತನಾಡುವವರು ಸಂಸತ್ತಿನಲ್ಲಿ ಇರಬೇಕು. ಬಾಗಲಕೋಟೆ ಜಿಲ್ಲೆಗೆ ಬದಲಾವಣೆಯ ಕಾಲ ಬಂದಿದೆ. ಕಾಂಗ್ರೆಸ್ ಪಕ್ಷ ಒಬ್ಬ ಒಳ್ಳೆಯ ಅಭ್ಯರ್ಥಿಯನ್ನು ನಿಮಗೆ ನೀಡಿದೆ. ಸಂಯುಕ್ತಾ ಪಾಟೀಲ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕನಸು ಕಟ್ಟಿಕೊಂಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಏನೇನು ಮಾಡಬೇಕು ಎಂಬ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಸಂಯುಕ್ತಾ ಪಾಟೀಲ ಅವರನ್ನು ಅಧಿಕ ಮತಗಳಿಂದ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗಂಡಾಂತರ ನಿಶ್ಚಿತ. ಸಮಾಜವನ್ನು ಜಾತಿವಾರು ವಿಭಜನೆ ಮಾಡುತ್ತಾರೆ. ಸಂವಿಧಾನ ತಿದ್ದುಪಡಿಯ ಮಾತುಗಳನ್ನು ಆಡುತ್ತಿದ್ದಾರೆ. ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ದೇಶ ಮತ್ತು ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಬಸವಪ್ರಭು ಸರನಾಡಗೌಡ, ಶಾಸಕ ಜೆ.ಟಿ. ಪಾಟೀಲ ಮಾತನಾಡಿ ಸಂಯುಕ್ತಾ ಪಾಟೀಲರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಪಕ್ಷದ ಮುಖಂಡರಾದ ಪ್ರವೀಣಗೌಡ ಪಾಟೀಲ, ರಾಮನಗೌಡ ಜಕ್ಕನಗೌಡ, ಎಸ್.ಟಿ. ಪಾಟೀಲ, ಆಶಾ ಬೀಳಗಿ, ಸಂಗಪ್ಪಣ್ಣ ಮತ್ತಿತರರು ವೇದಿಕೆಯಲ್ಲಿದ್ದರು. ಸಭೆಗೂ ಮುನ್ನ ಬೀಳಗಿ ಪಟ್ಟಣದಲ್ಲಿ ರ್‍ಯಾಲಿ ನಡೆಯಿತು. ಅಂಬೇಡ್ಕರ್, ಬಸವೇಶ್ವರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.---ಬಾಕ್ಸ್----

ದುಪ್ಟಟ್ಟಾಗಿದ್ದು ಆದಾಯವಲ್ಲ, ಖರ್ಚು:

ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ನೀಡಿದ್ದರು. ಆದರೆ ಆದಾಯ ದುಪ್ಪಟ್ಟು ಆಗಲಿಲ್ಲ. ಬದಲಿಗೆ ವೆಚ್ಚಗಳು ದುಪ್ಪಟ್ಟಾಗಿವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಟೀಕಿಸಿದರು.

ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಅತಿ ಹೆಚ್ಚು ಸಾಲ ಮಾಡಿದ ಪ್ರಧಾನಿ ಎಂಬ ಅಪಖ್ಯಾತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ₹ 130 ಲಕ್ಷ ಕೋಟಿ ಸಾಲ ಮಾಡಿದರೂ ರೈತರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಶ್ರೀಮಂತ ಉದ್ದಿಮೆದಾರರ ₹ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೇ ಮೋದಿ ಸಾಧನೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಬಿಜೆಪಿ ಮುಖಂಡರು ಗೇಲಿಮಾಡಿದರು. ಆದರೆ ಈ ಗ್ಯಾರಂಟಿ ಯೋಜನೆಗಳಿಂದ ಅನೇಕ ಬಡ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಶ್ರೀಮಂತರ ಪರವಾಗಿರುವವರಿಗೆ ಬಡವರ ಕಷ್ಟಗಳು ಅರಿವಿರಲ್ಲ ಎಂದು ಹೇಳಿದರು.