ಸಾರಾಂಶ
ಸರ್ವ ಶರಣರ ಜಾಥಾ ಮತ್ತು ಧಾರ್ಮಿಕ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಸರ್ಕಾರ ಕೈಗೊಂಡಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಉಪ ಪಂಗಡಗಳ ಸಮಾಜ ಬಾಂಧವರು ವೀರಶೈವ ಲಿಂಗಾಯಿತ ಎಂದು ನಮೂದಿಸಿ ಜನಾಂಗದ ಶಕ್ತಿಯನ್ನು ಬಲಿಷ್ಠ ಗೊಳಿಸಬೇಕು ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ನಡೆದ ಸರ್ವ ಶರಣರ ಜಾಥಾ ಮತ್ತು ಧಾರ್ಮಿಕ ಸಭೆ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಅಧಿಕಾರದ ದಾಹ ಅಥವಾ ರಾಜಕಾರಣದ ದೃಷ್ಟಿಯಿಂದ ಸಮಾಜ ಬಾಂಧವರು ಬಲಿಯಾಗಬಾರದು. ಹೀಗಾಗಿ ಮುಂಬರುವ ಜಾತಿ ಗಣತಿಯಲ್ಲಿ ವೀರಶೈವರು ಧರ್ಮಗಳ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಕಡ್ಡಾಯವಾಗಿ ನಮೂದಿಸಲು ಮುಂದಾಗಬೇಕು ಎಂದು ತಿಳಿಸಿದರು.ವೀರಶೈವ ಲಿಂಗಾಯತ ಪರಂಪರೆಯಲ್ಲಿರುವವರು ತಮ್ಮ ದಾಖಲಾತಿಗಳಲ್ಲಿ ಉಪ ಪಂಗಡಗಳನ್ನು ನಮೂದಿಸಿದ್ದಾರೆ . ಕೆಲವರು ವೀರಶೈವ ಲಿಂಗಾಯತ ಹೆಸರಿಗೆ ಜೊತೆಗೆ ತಮ್ಮ ಮೂಲ ಜಾತಿಯನ್ನೂ ನಮೂದಿಸಿದ್ದಾರೆ. ವೀರಶೈವ ಲಿಂಗಾಯತ ಉಪ ಜಾತಿಯವರಿಗೆ ಮೂಲ ಜಾತಿಗೆ ಸಮಸ್ಯೆಯಾಗದಿರಲು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಬಸವತತ್ತ್ವ ಪೀಠದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ತಾತ್ವಿಕ, ಧಾರ್ಮಿಕವಾಗಿರುವ ಸಣ್ಣ ಪುಟ್ಟ ಭಿನ್ನಾಭಿ ಪ್ರಾಯಗಳು ಬಗೆಹರಿದಿಲ್ಲ. ರಾಜಕೀಯ, ಸಾಮಾಜಿಕವಾಗಿ ನಾವುಗಳು ಒಗ್ಗಟ್ಟಾಗದಿದ್ದರೆ ಸಮಾಜಕ್ಕೆ ಭವಿಷ್ಯವಿಲ್ಲ. ಹೀಗಾಗಿ ಸಮಾಜದಲ್ಲಾಗುತ್ತಿರುವ ಗೊಂದಲ ಪರಿಹರಿಸಲು ಸ್ವಾಮೀಜಿಗಳ ವರ್ಗ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕಿದೆ ಎಂದು ಹೇಳಿದರು.ಇತ್ತೀಚೆಗೆ ಸಮಾಜವನ್ನು ಒಳಗೆ ಹಾಗೂ ಹೊರಗಿನಿಂದ ದಾರಿ ತಪ್ಪಿಸುವ ಶಕ್ತಿಗಳು ಜಾಗೃತವಾಗುತ್ತಿವೆ. ಅಲ್ಲದೇ ನಮ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸವಾಗುತ್ತಿದೆ. ನಾವೆಲ್ಲರೂ ಒಂದಾಗಲು ಸಮಾಜದ ಇತಿಹಾಸ, ಧಾರ್ಮಿಕ ಮೌಲ್ಯ ಅರ್ಥ ಮಾಡಿಕೊಳ್ಳಬೇಕು. ದುರಾಚಾರಗಳು ಕಡೆಗಣಿಸಿ ವೀರಶೈವರು ಲಿಂಗಾಯಿತರು ಒಂದೇ ಎಂಬ ಮನೋಭಾವನೆ ಮೂಡಿಸಬೇಕು ಎಂದರು.
ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜ ಎಷ್ಟೇ ಒತ್ತಡ ಕೊಟ್ಟರು, ಕೊನೆಯ ದಾಗಿ ನಿರ್ಧಾರ ಕೈಗೊಳ್ಳುವುದು ವಿಧಾನಸೌಧದಲ್ಲಿ ಎಂದ ಅವರು ಆ ನಿರ್ಣಯ ಬದಲಾಯಿಸಲು ಸಮಾಜದ ಶಾಸಕರು ಕೈಜೋಡಿಸಬೇಕು. ಪ್ರಪ್ರಥಮವಾಗಿ ಜಿಲ್ಲೆ ಶಾಸಕರಿಂದಲೇ ಈ ನಿರ್ಣಯಕ್ಕೆ ಮುಂದಾಗಬೇಕು ಎಂದು ಹೇಳಿದರು.ಸಮುದಾಯದ ಅಜ್ಞಾನದ ಕೊರತೆಯಿಂದ ಇಂದು ವೀರಶೈವ-ಲಿಂಗಾಯಿತರು ಹೋರಾಟ ನಡೆಸುವ ಸ್ಥಿತಿ ನಿರ್ಮಾಣ ವಾಗಿದೆ. ಈ ಜಾತಿ ಗಣತಿ ಎಂಬುದು ಬ್ರಿಟೀಷರ ಕಾಲದ ಆಳ್ವಿಕೆಯಲ್ಲಿತ್ತು. ಅಂದು ಭಾರತೀಯರನ್ನು ಛಿದ್ರಗೊಳಿಸಲು ಜಾತಿ ಬೀಜ ಬಿತ್ತಿದ ಪರಿಣಾಮ ಇಂದು ಜಾತಿಯಿಂದಲೇ ಅಧಿಕಾರ ಗಿಟ್ಟಿಸಿಕೊಳ್ಳಲು ಪಕ್ಷಗಳು ಮುಂದಾಗುತ್ತಿವೆ ಎಂದು ತಿಳಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ವೀರಶೈವ-ಲಿಂಗಾಯಿತ ಒಗ್ಗಟ್ಟಾಗಲು ಜಿಲ್ಲೆಯಿಂದ ಅಡಿಪಾಯ ಹಾಕಿರುವುದು ಉತ್ತಮ ಬೆಳವಣಿಗೆ. ಈ ಜಾಥಾ ರಾಜ್ಯಾದ್ಯಂತ ಪಸರಿಸುವಂತಾಗಬೇಕು. ಈ ನಿರ್ಣಯ ಎತ್ತಿ ಹಿಡಿಯಲು ಸಮಾಜದ ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು, ನಾಯಕರು ಸದಾಕಾಲ ಒಗ್ಗಟ್ಟಿನಿಂದ ಕೈಜೋಡಿಸಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಕರಿಸಿದ್ದೇಶ್ವರ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ರುದ್ರಮುನಿ, ತಾಲ್ಲೂಕು ಅಧ್ಯಕ್ಷ ಕೆ.ಸಿ.ನಿಶಾಂತ್, ಸರ್ವ ಶರಣರ ಸಮಿತಿ ಮುಖ್ಯಸ್ಥ ನಂಜೇಶ್ ಬೆಣ್ಣೂರು, ಸಮಾಜ ಬಾಂಧವರಾದ ಧನಂಜಯ್, ದರ್ಶನ್, ಕೀರ್ತ ನ್, ಕೃತಿಕ್ ಉಪಸ್ಥಿತರಿದ್ದರು. 14 ಕೆಸಿಕೆಎಂ 3ಚಿಕ್ಕಮಗಳೂರಿನ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಸರ್ವ ಶರಣರ ಜಾಥಾ ಮತ್ತು ಧಾರ್ಮಿಕ ಸಭೆ ನಡೆಯಿತು.