ಸಾರಾಂಶ
ಹರಪನಹಳ್ಳಿ: ಪ್ರತಿಭೆಗೆ ಪ್ರೋತ್ಸಾಹಿಸಿದರೆ ಇನ್ನು ಹೆಚ್ಚಿನ ಸಾಧನೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಹೇಳಿದ್ದಾರೆ.
ಪಟ್ಟಣದ ಸ್ಟೇಡಿಯಂ ಬಳಿಯ ಮಿನಿರಂಗಮಂದಿರದಲ್ಲಿ ಸಮಸ್ತರು ಜಾಗೃತ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಕೆ.ಸಿ. ಸಾಗರ ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡ ಬಿ.ಪರಶುರಾಮ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿದ್ಯಾರ್ಥಿಗಳು ಕಷ್ಟ ಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದಬೇಕು. ಇಂದು ನಾವು ಎಲ್ಲ ರಂಗದಲ್ಲೂ ಮುಂದೆ ಇದ್ದೇವೆ. ಆದರೆ ಜಾತಿ ವ್ಯವಸ್ಥೆಯಲ್ಲೂ ಮುಂದೆ ಇರುವುದು ವಿಷಾದದ ಸಂಗತಿ, ಜಾತಿ ವ್ಯವಸ್ಥೆ ತೊಲಗಬೇಕು ಎಂದರು.
ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಆದರ್ಶವಾಗಿ ಬದುಕಲು ಕಲಿಸಬೇಕು ಎಂದು ನುಡಿದರು. ವೀರಶೈವ ಮಹಾಸಭಾದ ತಾಲೂಕು ಅದ್ಯಕ್ಷ ಎಂ.ರಾಜಶೇಖರ ಮಾತನಾಡಿ, ನಕಲು ಮಾಡಿ ಉತ್ತೀರ್ಣರಾಗುತ್ತೇವೆ ಎಂದು ಭಾವಿಸಬಾರದು, ಪೋಷಕರು ಮಕ್ಕಳನ್ನು ಆ ರೀತಿ ಬೆಳೆಸಬಾರದು. ಕಲೆ, ಸಾಹಿತ್ಯ ಸಂಸ್ಕೃತಿ ಇಂದು ನಶಿ ಸುತ್ತಿವೆ. ಅವುಗಳನ್ನು ಪುನಃ ಜೀವಂತಗೊಳಿಸಿ ಯುವ ಜನತೆಗೆ ಪರಿಚಯಿಸಬೇಕು ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವಶಿವಯೋಗಿಗಳು ಮಾತನಾಡಿ, ಸಂಸ್ಕೃತಿ, ಸಂಸ್ಕಾರ ಕಲಿಸದೇ ಹೋದರೆ ಎಷ್ಟು ಅಂಕ ಗಳಿಸಿದರೂ ಉಪಯೋಗವಿಲ್ಲ. ವಿದ್ಯೆಗಿಂತ ಮಾನವೀಯತೆ, ಹೃದಯವಂತಿಕೆ ಮುಖ್ಯ. ಆದರೆ ಇಂದು ಮಾನವೀಯತೆ ಮೌಲ್ಯಗಳು ಮಾಯವಾಗಿವೆ ಎಂದರು.
ಬಸವಣ್ಣನವನರ ತತ್ವ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದ ಶ್ರೀಗಳು ಕೆ.ಸಿ. ಸಾಗರ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು.ಬಯಲಾಟ ನಾಟಕ ಅಕಾಡೆಮಿ ಸದಸ್ಯ, ರಂಗಕರ್ಮಿ ಬಿ.ಪರಶುರಾಮ ಸನ್ಮಾನ ಸ್ವೀಕರಿಸಿ ಮಾತನಾಡಿ, ವೈಚಾರಿಕೆ ವಿಚಾರಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು. ಮಸ್ಕಕ ಸರಿ ಇದ್ದರೆ ಪುಸ್ತಕ ಬರೆಯಬಹುದು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಇನ್ನೊಬ್ಬ ಸಾಧಕ ವಿದ್ಯಾರ್ಥಿ ಕೆ.ಸಿ. ಸಾಗರ ಮಾತನಾಡಿ, ನಾನು ಒತ್ತಡದಿಂದ ಓದಿಲ್ಲ. ವಿಷಯ ಅರ್ಥ ಮಾಡಿಕೊಂಡು ಇಷ್ಟ ಪಟ್ಟು ಓದಿದೆ. ಫಲಿತಾಂಶ ಗುರುತಿಸಿ ಸನ್ಮಾನಿಸಿದ್ದಕ್ಕೆ ಸಂತಸವಾಗಿದೆ ಎಂದು ತಿಳಿಸಿದರು.ಸಮಸ್ತರು ಜಾಗೃತ ವೇದಿಕೆಯ ಸಂಚಾಲಕ ಪಿ.ಮೇಘರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜ ಜಾಗೃತಿ ಗೊಳಿಸಲು ಸಮಸ್ತರು ಜಾಗೃತಿ ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.
ಪುರಸಭಾ ಸದಸ್ಯ ರೊಕ್ಕಪ್ಪ, ಲಾಟಿ ದಾದಾಪೀರ, ಟಿ.ವೆಂಕಟೇಶ, ಎಪಿಎಂಸಿ ಮಾಜಿ ಅಧ್ಯಕ್ಷ ಷಣ್ಮುಖಪ್ಪ, ವಿಜಯದಿವಾಕರ, ಕಣವಿಹಳ್ಳಿ ಚಂದ್ರಶೇಖರ, ಲಕ್ಷ್ಮಿಚಂದ್ರಶೇಖರ, ಎಚ್.ವಸಂತಪ್ಪ, ಚಲವಾದಿ ಪರಶುರಾಮ, ಹೇಮಣ್ಣ ಮೋರಗೇರಿ, ಎಲ್.ಮಂಜನಾಯ್ಕ, ಎನ್.ಶಂಕರ, ಲಿಂಗಾನಂದ ಉಪಸ್ಥಿತರಿದ್ದರು.