ಸಾರಾಂಶ
ಕ್ಷೇತ್ರದ ಜನತೆ ನನ್ನನ್ನು ಮೂರು ಬಾರಿ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಹಾಗೊಂದು ವೇಳೆ ಸಚಿವ ಸಂಪುಟ ಪುನಾರಚನೆ ಮಾಡಿದರೆ ನಾನೂ ಆಕಾಂಕ್ಷಿಯಾಗಿದ್ದೇನೆ.
ಹುಬ್ಬಳ್ಳಿ: ಸಚಿವ ಸಂಪುಟ ಪುನರ್ ರಚನೆಯಾದರೆ ನಾನು ಕೂಡ ಸಚಿವ ಆಕಾಂಕ್ಷಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನತೆ ನನ್ನನ್ನು ಮೂರು ಬಾರಿ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಹಾಗೊಂದು ವೇಳೆ ಸಚಿವ ಸಂಪುಟ ಪುನಾರಚನೆ ಮಾಡಿದರೆ ನಾನೂ ಆಕಾಂಕ್ಷಿಯಾಗಿದ್ದೇನೆ ಎಂದರು.ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಪ್ರಸ್ತಾಪವೇ ಆಗಿಲ್ಲ. ಸುಮ್ಮನೆ ಬೇರೆ ಬೇರೆಯವರು ಏನೇನೋ ಮಾತನಾಡುತ್ತಾರೆ. ಸದ್ಯಕ್ಕೆ ಪಕ್ಷದಲ್ಲಿ ಸಂಪುಟ ಪುನಾರಚನೆ ಕುರಿತಂತೆ ಚರ್ಚೆ ಆಗಿಲ್ಲ. ಆದರೆ, ಅಂತಿಮವಾಗಿ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದರು.
ಜನಗಣತಿಗೆ ಹೈಕಮಾಂಡ್ ಸೂಚನೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಜನಗಣತಿ ಜತೆಗೆ ಜಾತಿ ಸರ್ವೇ ಆಗಬೇಕು ಅನ್ನುವುದು ಸರ್ಕಾರದ ಉದ್ದೇಶ. ಕೆಲವು ಸಮುದಾಯಗಳಲ್ಲಿ ಸಮೀಕ್ಷೆ ಸರಿ ಆಗಿಲ್ಲ ಅನ್ನುವ ಕೂಗಿತ್ತು. ಸಾಮಾಜಿಕ ನ್ಯಾಯ, ಸಮ ಸಮಾಜ ನಿರ್ಮಾಣವಾಗಬೇಕು ಎನ್ನುವುದು ಅಂಬೇಡ್ಕರ್, ಬಸವಣ್ಣ ಅವರ ಕನಸು. ಹಿಂದೆ ಜಾತಿ ಸಮೀಕ್ಷೆಗೆ ವಿರೋಧ ಮಾಡಿದ್ದ ಕೇಂದ್ರ ಸರ್ಕಾರವೇ ರಾಜ್ಯದ ನಕಲು ಮಾಡುತ್ತಿದೆ. ಮೊದಲು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆದವರು ಈಗ ಬೇರೆ ಬೇರೆ ರಾಜ್ಯಗಳಲ್ಲಿ ಅವುಗಳನ್ನು ಜಾರಿ ಮಾಡುತ್ತಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಅವರ ಯೋಜನೆ ದೇಶಕ್ಕೆ ಮಾಡೆಲ್ ಎಂದರು.ಸಿದ್ದರಾಮಯ್ಯ ಅಹಿಂದ ವರ್ಗವನ್ನಷ್ಟೇ ಕರೆದುಕೊಂಡು ಹೋಗುತ್ತಿಲ್ಲ. ಮುಖ್ಯಮಂತ್ರಿ ಆಗಿ ಎಲ್ಲ ಸಮುದಾಯದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕರು ಎಂದು ತಿಳಿಸಿದರು.