ಸಾರಾಂಶ
ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿಗಾಗಿ ಕಳೆದ 9 ವರ್ಷದಿಂದ ನಿರಂತರ ರೈತರು ಹೋರಾಟ ಮಾಡಿದರೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆ ಜಾರಿ ಮಾಡದೆ ರಾಜಕಾರಣ ಮಾಡುತ್ತಿರುವುದರಿಂದ ಯೋಜನೆಗೆ ಹಿನ್ನೆಡೆ
ನರಗುಂದ: ಕೃಷಿ ಪ್ರಧಾನ ದೇಶದಲ್ಲಿ ರೈತರ ಬೆಳೆಗೆ ಯೋಗ್ಯ ಬೆಲೆ ಸಿಗದಿದ್ದರೆ ಆಳುವ ಸರ್ಕಾರಕ್ಕೆ ಸಂಕಷ್ಟ ಖಚಿತ ಎಂದು ರೈತ ಸೇನಾ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ಬಿ.ಜೋಗಣ್ಣವರ ಎಚ್ಚರಿಕೆ ನೀಡಿದರು.
ಅವರು 3141ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಭೀಕರ ಬರಗಾಲದಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದು, ಏಕರೆಗೆ ₹20 ರಿಂದ ₹ 50 ಸಾವಿರ ಖರ್ಚು ಮಾಡಿ ಬೆಳೆದು ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದಿದ್ದರೆ ಸಹಜವಾಗಿ ಸಿಟ್ಟು ಬಂದು ಆಳುವ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಬ್ಯಾಡಗಿಯಲ್ಲಿ ರೈತರು ಬೆಲೆ ಕುಸಿತದಿಂದ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಆದರಿಂದ ಆಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ರೈತರ ಬೆಳೆಗೆ ಯೋಗ್ಯ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಮುಂದಿನ ದಿನಮಾನಗಳಲ್ಲಿ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.ಕಳಸಾ ಬಂಡೂರಿ, ಮಹದಾಯಿ ಯೋಜನೆ ಜಾರಿಗಾಗಿ ಕಳೆದ 9 ವರ್ಷದಿಂದ ನಿರಂತರ ರೈತರು ಹೋರಾಟ ಮಾಡಿದರೂ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆ ಜಾರಿ ಮಾಡದೆ ರಾಜಕಾರಣ ಮಾಡುತ್ತಿರುವುದರಿಂದ ಯೋಜನೆಗೆ ಹಿನ್ನೆಡೆಯಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹದಾಯಿ, ಭದ್ರಾ,ಕೃಷ್ಣಾ, ಭೀಮಾ ಸೇರಿದಂತೆ ವಿವಿಧ ನದಿಗಳಿಂದ ಪ್ರತಿ ವರ್ಷ ಸಾವಿರಾರು ಟಿಎಂಸಿ ನೀರು ಹರಿದು ವ್ಯರ್ಥವಾಗುವ ನೀರನ್ನು ರೈತರ ಜಮೀನಗಳಿಗೆ ಹರಿಸಲು ಯೋಜನೆ ಹಾಕಿಕೊಂಡು ಅನ್ನದಾತರನ್ನು ಉಳಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಬ್ಯಾಡಗಿ ರೈತರು ಮಾಡಿದ ರೀತಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಎ.ಪಿ.ಪಾಟೀಲ, ಹನಮಂತ ಸರನಾಯ್ಕರ, ಸಿ.ಎಸ್. ಪಾಟೀಲ,ಸುಭಾಸ ಗಿರಿಯಣ್ಣವರ, ಸೋಮಲಿಂಗಪ್ಪ ಆಯಿಟ್ಟಿ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವ್ಹಾಣ , ಶಿವಪ್ಪ ಸಾತಣ್ಣವರ, ಯಲ್ಲಪ್ಪ ಚಲವಣ್ಣವರ, ವಿಜಯಕುಮಾರ ಹೂಗಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.