ಪಠ್ಯ ಶ್ರೇಷ್ಠವಾಗಿದ್ದರೆ ಕವಿಯೂ ಜೀವಂತ

| Published : Apr 30 2025, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಮಾಜದ ಅಂಚಿಗೆ ತಳ್ಳಲಾಗಿದ್ದ ಮಹಿಳೆಯರು ಹಾಗೂ ರೈತರನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಷ್ಟ್ರಕವಿ ಕುವೆಂಪು ರಚಿಸಿದ ಸಾಹಿತ್ಯ ಸರ್ವಶ್ರೇಷ್ಠವಾಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾಜದ ಅಂಚಿಗೆ ತಳ್ಳಲಾಗಿದ್ದ ಮಹಿಳೆಯರು ಹಾಗೂ ರೈತರನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಷ್ಟ್ರಕವಿ ಕುವೆಂಪು ರಚಿಸಿದ ಸಾಹಿತ್ಯ ಸರ್ವಶ್ರೇಷ್ಠವಾಗಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಹೇಳಿದರು.

ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ವಿಭಾಗ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಮ್ಮಿಕೊಂಡಿದ್ದ ಎರಡು ದಿನಗಳ ಕುವೆಂಪು ಓದು ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಪಠ್ಯವು ಶ್ರೇಷ್ಠವಾಗಿದ್ದಲ್ಲಿ ಅದು ಮತ್ತೇ ಮತ್ತೇ ಓದಿಸಿಕೊಳ್ಳುತ್ತದೆ. ಕುವೆಂಪು ರಚಿಸಿದ ಸಾಹಿತ್ಯ ಮತ್ತೆ ಮತ್ತೆ ಓದಿಸಿಕೊಳ್ಳುವುದರಿಂದ ಆ ಕವಿ ಜೀವಂತವಾಗಿರುತ್ತಾನೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಕವಿತೆಯ ಸಾಲುಗಳಂತೆ ಕವಿಗೆ ವಯಸ್ಸಾಗುತ್ತದೆ, ಆದರೆ ಕಾವ್ಯಕ್ಕಲ್ಲ ಎಂದರು.

ಕುವೆಂಪು ಅವರ ಸುದೀರ್ಘ ಸಾಹಿತ್ಯ ಮಾನವೀಯ ಮೌಲ್ಯವನ್ನು ಸಾರುತ್ತದೆ. ಮನುಷ್ಯ ಮನುಷತ್ವವನ್ನು ಹೊಂದಲು ಕುವೆಂಪುರವರ ಸಾಹಿತ್ಯ ಓದಲೇಬೇಕು ಎಂದು ಸಲಹೆ ನೀಡಿದರು.

ಸಿಂಡಿಕೇಟ್ ಸದಸ್ಯ ಡಾ.ನಟರಾಜ ಬೂದಾಳು ಮಾತನಾಡಿ, ಕುವೆಂಪು ಅವರ ಸಾಹಿತ್ಯ ಮಾನವೀಯ ಒಲುಮೆಯ ಆಗರ. ಈ ನಿಟ್ಟಿನಲ್ಲಿ ಮಹಿಳೆಯರು ಕುವೆಂಪು ಓದಿಗೆ ಸ್ಪಂದಿಸುವುದು ಅತ್ಯಂತ ಅವಶ್ಯಕವಾಗಿದೆ. ಓದು ಸಹಜವಾದ ಓದಾಗಿರದೇ ವ್ಯಕ್ತಿತ್ವ ವಿಕಸನವನ್ನು ಮಾಡುವ ಓದಾಗಬೇಕು. ಅಂತಹ ಓದನ್ನು ಕುವೆಂಪುರವರ ಸಾಹಿತ್ಯದಿಂದ ಪಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ.ಟಿ ಮಾತನಾಡಿ, ಕುವೆಂಪುರವರು ಆತ್ಮವಿಶ್ವಾಸ ತುಂಬುವ ಕವಿಗಳು. ಯಾವ ವ್ಯಕ್ತಿಯ ಆತ್ಮ ವಿಕಾಸ ಬೆಳೆಸುತ್ತದೆಯೋ ಮೌಲ್ಯವನ್ನು ಪ್ರತಿಪಾದಿಸುತ್ತಿದೆಯೋ, ನಂಬಿಕೆಯನ್ನು ದೃಢಗೊಳಿಸುತ್ತದೆಯೋ, ಸಾಮಾಜಿಕ ಪ್ರಸ್ತುತತೆಯನ್ನು ಬಿಂಬಿಸುತ್ತದೆಯೋ ಅದು ನಿಜವಾದ ಸಾಹಿತ್ಯ. ಅಂತಹ ಸಾಹಿತ್ಯವನ್ನು ನೀಡಿದವರು ಕುವೆಂಪು. ಮಾನವನ ವೈಜ್ಞಾನಿಕ ಜ್ಞಾನ ಸಾರ್ವತ್ರಿಕ ಸತ್ಯವನ್ನು ಪ್ರತಿಪಾದಿಸುವ ಸಾಹಿತ್ಯವೇ ಜಗತ್ತಿನ ಶ್ರೇಷ್ಠ ಸಾಹಿತ್ಯ ಎಂದರು.

ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ನಾಡಗೀತೆಯನ್ನು ನೀಡಿದ ವಿಶ್ವ ಕವಿಗಳಲ್ಲೇ ಶ್ರೇಷ್ಠ ಕುವೆಂಪುರವರ ಸಾಹಿತ್ಯ ಮನುಜ ಮತ ವಿಶ್ವಪಥ ಎಂಬ ಸಂದೇಶವನ್ನು ಸಾರುತ್ತದೆ. ವೈಜ್ಞಾನಿಕತೆ ಮತ್ತು ವೈಚಾರಿಕತೆ ಕುವೆಂಪುರವರ ಮಹತ್ವದ ಸಂದೇಶಗಳು. ಮೊಬೈಲ್ ಸಂದೇಶಗಳನ್ನು ಬಿಟ್ಟು ಪುಸ್ತಕ ಓದುವ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಪ್ರಾಧಿಕಾರದ ಸದಸ್ಯ ಸಂಚಾಲಕ ಎಸ್.ಗಂಗಾಧರಯ್ಯ, ಸಂಪನ್ಮೂಲ ವ್ಯಕ್ತಿ ಡಾ.ರಾಮಲಿಂಗಪ್ಪ ಬೇಗೂರು, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಎಂ.ನಾಗರಾಜ, ನಂದಿನಿ, ವೆಂಕಟಲಕ್ಷ್ಮೀ ಮುಂತಾದವರು ಇದ್ದರು.

ಬಾಕ್ಸ್‌

ಬಸವಣ್ಣನವರ ವಚನ ಸ್ಪರ್ಧೆ

ಮಹಾ ಮಾನವತಾವಾದಿ ಬಸವೇಶ್ವರ ಜಯಂತಿ ಅಂಗವಾಗಿ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಸವ ಅಧ್ಯಯನ ಪೀಠ ಹಮ್ಮಿಕೊಂಡಿದ್ದ ಬಸವಣ್ಣನವರ ವಚನ ಸ್ಪರ್ಧೆಯಲ್ಲಿ ೨೫ ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಈ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಸವಿತಾ ಚಿಗುರಿ, ಶಿಕ್ಷಣ ಅಧ್ಯಯನ ವಿಭಾಗ, ದ್ವಿತೀಯ ಬಹುಮಾನ ಲಕ್ಷ್ಮಿ ಕಾತ್ರಾಳ, ಇಂಗ್ಲಿಷ್ ಅಧ್ಯಯನ ವಿಭಾಗ, ತೃತೀಯ ಬಹುಮಾನ ಭವಾನಿ ಅಂಗಡಿ, ಸ್ನಾತಕ ವಿಭಾಗ, ಚತುರ್ಥಿ ಬಹುಮಾನ ಐಶ್ವರ್ಯ ಬಿರಾದಾರ ಸ್ನಾತಕ ವಿಭಾಗ ಇವರು ಪಡೆದರು. ಸ್ಪರ್ಧೆಯ ತೀರ್ಪುಗಾರರಾಗಿ ಡಾ.ಮಲ್ಲಿಕಾರ್ಜುನ ಮೇತ್ರಿ, ಡಾ.ರಾಜಶೇಖರ ಬೆನಕಹಳ್ಳಿ ಹಾಗೂ ಡಾ.ವಿಷ್ಣು ಶಿಂದೆ ಕಾರ್ಯನಿರ್ವಹಿಸಿದರು. ಬಸವ ಪೀಠದ ಸಂಯೋಜಕ ಡಾ.ರಾಜಕುಮಾರ ಮಾಲಿಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.