ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ತಾಲೂಕಿನಲ್ಲಿ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಟಾನಗೊಳ್ಳುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಯಾವುದೇ ಸಮಸ್ಯೆಗಳು ಇದ್ದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯನ್ನು ಸಂಪರ್ಕಿಸಬಹುದು ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಎಚ್.ಎಂ. ಮಧು ತಿಳಿಸಿದರು.ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಕುರಿತು ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳು ಜನ ಸಾಮಾನ್ಯರನ್ನು ಯಶಸ್ವಿಯಾಗಿ ತಲುಪುತ್ತಿದ್ದು, ಜನ ಜೀವನ ಸುಧಾರಣೆ ಕಾಣುತ್ತಿದೆ ಎಂದರು.
ಸದಸ್ಯರು ಗೃಹಲಕ್ಷ್ಮಿ ಯೋಜನೆಯಡಿ ಜಿಎಸ್ಟಿ ಗೆ ಸಂಬಂಧಿಸಿದ ಕೆಲವು ಲೋಪದೋಷಗಳು ಕಂಡು ಬರುತ್ತಿರುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ನಿವಾರಣೆ ಮಾಡುವ ಕೆಲಸ ಆಗಬೇಕಿದೆ ಎಂದರು. ಕೆಲವು ಮನೆಗಳಲ್ಲಿ ಮನೆಯ ಯಾಜಮಾನಿಯ ಸಾವು ಆದ ಸಮಯದಲ್ಲಿ ಅದೇ ಮನೆಯ ಬೇರೆ ಸದಸ್ಯರನ್ನು ಮನೆಯ ಯಜಮಾನಿಯನ್ನಾಗಿ ಮಾಡಿ ಸೌಲಭ್ಯ ಮುಂದುವರಿಸುವಂತೆ ಹೇಳಿದರು.ಅನ್ನಭಾಗ್ಯ ಯೋಜನೆಯು ಸರಿಯಾದ ರೀತಿಯಲ್ಲಿ ಎಲ್ಲಾ ಪಡಿತರ ಕುಟುಂಬಗಳಿಗೆ ಸರಬರಾಜು ಆಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ, ಸರಿಯಾದ ರೀತಿಯಲ್ಲಿ ವಿತರಣೆ ಆಗದ ಪಡಿತರ ಅಂಗಡಿಯ ಮಾಹಿತಿಯನ್ನು ಪಡೆದು, ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದರು.
ಶಿವಮೊಗ್ಗ ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮೇ ತಿಂಗಳವರೆಗೆ 1,07,311 ಮಹಿಳೆಯರು ನೋಂದಣಿಯಾಗಿದ್ದು, 99324 ಮಹಿಳೆಯರಿಗೆ ಮೇ ತಿಂಗಳವರೆಗೆ ಹಣ ಜಮಾ ಆಗಿದೆ. ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ 43681 ಬಿಪಿಎಲ್ ಕುಟುಂಬಗಳ 144286 ಸದಸ್ಯರು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಶಿವಮೊಗ್ಗ ತಾಲೂಕಿನಲ್ಲಿ 236023743 ಯುನಿಟ್ಗಳ ಬಳಕೆಯಾಗಿದ್ದು, 169 ರು. ಸಬ್ಸಿಡಿ ದೊರೆತಿದೆ. ಶಕ್ತಿ ಯೋಜನೆಯಡಿ ತಾಲೂಕಿನಲ್ಲಿ ಶೇ.61.5 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, ಕೆಎಸ್ಆರ್ಟಿಸಿಗೆ ಮೇ ವರೆಗೆ 64.47 ಕೋಟಿ ಆದಾಯ ಗಳಿಕೆ ಆಗಿದೆ.ಯುವನಿಧಿ ಯೋಜನೆಯು ಬಹಳ ಯಶಸ್ವಿಯಾಗಿ ನಡೆಯುತ್ತಿದ್ದು, ಇನ್ನೂ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಈ ಯೋಜನೆಯಡಿ ಫಲಾನುಭವಿಗಳಾಗುವಂತೆ ಮಾಡಬೇಕು. ಈ ಯೋಜನೆಯ ಬಗ್ಗೆ ಯುವಜನತೆಗೆ ತಿಳಿಯುವಂತೆ ಮಾಡಬೇಕು. ಮೇ ತಿಂಗಳಲ್ಲಿ ಶಿವಮೊಗ್ಗ ತಾಲೂಕಿನಲ್ಲಿ 2482 ಜನ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 58.81 ಲಕ್ಷ ರು. ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ ಎಂದು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಶಿವಮೊಗ್ಗ ತಾಲೂಕು ಸಹಾಯಕ ಲೆಕ್ಕಾಧಿಕಾರಿ ಶ್ರೀಧರ್ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯಗಳ ಅನುಷ್ಟಾನ ಸಮಿತಿಯ ಸದಸ್ಯರುಗಳು, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.