ಸಾರಾಂಶ
-ಸಂವಿಧಾನ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
----ಕನ್ನಡಪ್ರಭ ವಾರ್ತೆ ಹಿರಿಯೂರು: ಎಲ್ಲಾ ಧರ್ಮ, ಜಾತಿಯ ಜನರ ಹಕ್ಕು ಬಾಧ್ಯತೆಗಳನ್ನು ರಕ್ಷಿಸುವಂತಹ ಭಾರತದ ಸಂವಿಧಾನವನ್ನು ಬಾಬಾ ಸಾಹೇಬರು ರಚಿಸದಿದ್ದರೆ ಮತ್ತು ಅವರು ಬೌದ್ಧಧರ್ಮ ಅಲ್ಲದೇ ಬೇರೆ ಧರ್ಮ ಆಯ್ಕೆ ಮಾಡಿಕೊಂಡಿದ್ದರೆ ಇಷ್ಟೊತ್ತಿಗೆ ರಕ್ತ ಕ್ರಾಂತಿಯಾಗಿ ಭಾರತ ಅದೆಷ್ಟೋ ಭಾಗವಾಗಿ ವಿಂಗಡಣೆಯಾಗುವ ಸಂಭವವಿತ್ತು ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿಪಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಟಿಬಿ ವೃತ್ತದ ಸಮೀಪದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜು, ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಹಾಗೂ ನಗರಸಭೆ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪ್ರಸ್ತಾವನೆ ಭೋಧಿಸಿ ಮಾತನಾಡಿದರು.ಸಂವಿಧಾನ ಗೌರವಿಸುವುದೆಂದರೆ ಅದನ್ನು ಪವಿತ್ರ ಗ್ರಂಥವೆoದು ಪೂಜಿಸುವುದು ಆರಾಧಿಸುವುದಲ್ಲ, ಬದಲಾಗಿ ಅದರ ಆಶಯಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುವುದು. ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ತಮ್ಮ ಕರ್ತವ್ಯಗಳನ್ನು ಪಾಲಿಸುವುದು ಇತಿಮಿತಿ ಮೀರದಿರುವುದು ಆಗಿದೆ.
ಪ್ರಜಾಪ್ರಭುತ್ವ ಎಂಬುದು ಕೇವಲ ಸರ್ಕಾರದ ಸ್ವರೂಪ ಮಾತ್ರವಲ್ಲ. ಅದೊಂದು ಸಮನ್ವಯ ಜೀವನ ಪದ್ಧತಿ. ಮಾನವರಲ್ಲಿ ಪರಸ್ಪರ ಹೊಂದಿಕೊoಡು ಬಾಳುವ ಸುಖಾನುಭವ. ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ರಕ್ತಪಾತವಿಲ್ಲದೇ ಕ್ರಾಂತಿಕಾರಕ ಬದಲಾವಣೆ ತರುವಂತ ಒಂದು ಪದ್ಧತಿಯ ಆಡಳಿತ ಸ್ವರೂಪವೇ ಪ್ರಜಾಪ್ರಭುತ್ವ. ಅದು ಜೀವಂತವಾಗಿದ್ದರೆ ಅದರ ಫಲವನ್ನು ನಾವೆಲ್ಲರೂ ಅನುಭವಿಸಬಹುದು. ಇಲ್ಲವಾದರೆ ನಮ್ಮೆಲ್ಲರ ಸರ್ವನಾಶ ಖಂಡಿತ ಎಂದರು.ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ಭಾರತದ ಸಂವಿಧಾನ ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯಗಳನ್ನು ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನಿನ ಬಲ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಸದಸ್ಯರಾದ ಬಿಎನ್.ಪ್ರಕಾಶ್, ಪೌರಾಯುಕ್ತ ಎ.ವಾಸಿಂ, ನಿವೃತ್ತ ಪ್ರಾಂಶುಪಾಲ ಸಂಗೇನಹಳ್ಳಿ ತಿಪ್ಪೇಸ್ವಾಮಿ, ಮುಖಂಡ ತುರುವನೂರು ಜಗನ್ನಾಥ್, ಉಪನ್ಯಾಸಕರಾದ ಕೃಷ್ಣಮೂರ್ತಿ, ದಯಾನಂದ, ರಂಗಸ್ವಾಮಿ, ಎಚ್.ಆರ್.ಲೋಕೇಶ್, ಈ.ನಾಗೇಂದ್ರಪ್ಪ, ಎಲ್.ಶಾಂತಕುಮಾರ್, ಜಯಪ್ರಕಾಶ್, ಡ್ಯಾನಿಯಲ್ ಮಂಜುನಾಥ, ಶಿವರಾಜ್ ಇದ್ದರು.------ಫೋಟೊ: ನಗರದ ಟಿಬಿ ವೃತ್ತದ ಸಮೀಪದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜು, ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಹಾಗೂ ನಗರಸಭೆ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು.