ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡ ಕಾರ್ಯ ಮಾದರಿ ಕಾರ್ಯವಾಗಿದ್ದು, ಮಹಿಳಾ ಸಬಲೀಕರಣದ ಉತ್ತಮ ಯೋಜನೆಯಾಗಿದೆ. ಕೌಶಲ್ಯ ತರಬೇತಿ ಪಡೆದವರಿಗೂ ಕೂಡ ಉದ್ಯೋಗ ಸೃಷ್ಟಿಮಾಡುವ ಕಾರ್ಯ ಆಗಬೇಕಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ನಗರದ ಬೊಮ್ಮನಕಟ್ಟೆಯ ಪಾರ್ವತಮ್ಮ ಲೇಔಟ್‌ನಲ್ಲಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ವಸತಿ ನಿಲಯ ಹಾಗೂ ಕೌಶಲ್ಯ ತರಬೇತಿ ಕೇಂದ್ರದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಗುರುಗಳು ಸಾನ್ನಿಧ್ಯ ವಹಿಸಿದ್ದಲ್ಲಿ ಎಲ್ಲಾ ಕಾರ್ಯವು ನೆರವೇರುತ್ತದೆ. ಸುಂದರ ಭವನ ಯಶಸ್ವಿಯಾಗಿ ನಿರ್ಮಾಣವಾಗಿದೆ ಎಂದರು.

ಮಹಿಳೆಯರು ಸಂಘಟಿತರಾದರೆ ಎಲ್ಲಾ ಕಾರ್ಯವೂ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆಯಾಗಿದೆ. ಶಿವಮೊಗ್ಗದ ಜನಪ್ರತಿನಿಧಿಗಳು ಅಭಿವೃದ್ಧಿ ಕಾರ್ಯಗಳಲ್ಲಿ ಪಕ್ಷಬೇಧ ಮರೆತು ಲವಲೇಶ ರಾಜಕಾರಣ ಮಾಡದೇ ಕೈಜೋಡಿಸುತ್ತಾರೆ. ಅದಕ್ಕೆ ಈ ಭವನವೇ ಉದಾಹರಣೆಯಾಗಿದೆ ಎಂದರು.

ಶಾಸಕಿ ಬಲ್ಕೀಶ್‌ಬಾನು ಮಾತನಾಡಿ, ಮಹಿಳೆಯರು ಸಂಘಟಿತರಾಗುವುದೇ ಕಷ್ಟ. ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರ ಸದಾ ಸಿದ್ಧವಿದೆ. ಮುಂದಿನ ಕೌಶಲ್ಯ ತರಬೇತಿಗೆ ಸರ್ಕಾರದ ಸಂಪೂರ್ಣ ಸಹಕಾರ ನೀಡುತ್ತೇವೆ. ನನ್ನ ಅನುದಾನದಲ್ಲಿ 10 ಲಕ್ಷ ರು. ನೀಡುತ್ತೇನೆ ಎಂದು ಹೇಳಿದರು.


ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣು ಸಂಸಾರದ ಕಣ್ಣು. ಹೆಣ್ಣು ಕಲಿತರೆ ದೇಶದ ಅಭಿವೃದ್ಧಿ ತನ್ನಿಂದ ತಾನೇ ಆಗುತ್ತದೆ. ಮೋದಿಯವರು ಮಹಿಳೆಯರಿಗೆ ಶೇ.33ರ ಮೀಸಲಾತಿ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ನಿಮಗೆ ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ನಾನು ನಗರಸಭಾ ಅಧ್ಯಕ್ಷನಾಗಿದ್ದಾಗ ಮಹಿಳಾ ಮಂಡಳಿ ಅಧ್ಯಕ್ಷೆ ವಿನಯಾ ರಾಯ್ಕರ್ ಅವರು ಉಪಾಧ್ಯಕ್ಷೆಯಾಗಿದ್ದರು. ಅವರ ಸತತ ಪರಿಶ್ರಮದಿಂದ ಈ ಕಾರ್ಯ ನೆರವೇರಿದೆ. ಪ್ರಧಾನಿ ರಾಜೀವ್‌ಗಾಂಧಿಯವರು ಅಂದಿನ ಕಾಲದಲ್ಲೇ ಮಹಿಳೆಯರಿಗೆ ಅವಕಾಶ ಕಲ್ಪಿಸಿದ್ದರಿಂದಲೇ ಅವರು ನಗರದ ಉಪಾಧ್ಯಕ್ಷೆಯಾಗಿದ್ದರು. ಈಗ ಸಮಾಜದ ಮಹಿಳೆಯರಿಗೆ ತರಬೇತಿ ಕೇಂದ್ರ ಮತ್ತು ವಸತಿ ನಿಲಯ ಸ್ಥಾಪನೆಮಾಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸುಧಾ ಮಾತನಾಡಿ, ದೈವಜ್ಞ ಸಮುದಾಯದವರು ಕರಕುಶಲ ವೃತ್ತಿಯಲ್ಲಿ ಪರಿಣಿತರು. ನಮ್ಮ ಮುಂದಿನ ಪೀಳಿಗೆಗೆ ಇಂತಹ ಕೇಂದ್ರಗಳಿಂದ ಉತ್ತಮ ಅವಕಾಶ ಸಿಗುತ್ತದೆ. ಇಲ್ಲಿ ಕೌಶಲ್ಯಯುಕ್ತ ತರಬೇತುದಾರರ ನೇಮಕವಾಗಲಿ. ಅವರಿಂದ ಇವರಿಗೆ ಗುಣಮಟ್ಟದ ತರಬೇತಿ ಸಿಗಲಿ ಎಂದರು.

ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಶಿವಮೊಗ್ಗದ ರೂಪು-ರೇಷೆ ಬದಲಾಯಿತು. ರಾಜ್ಯ ಭೂಪಟದಲ್ಲಿ ಶಿವಮೊಗ್ಗಕ್ಕೆ ಹೆಚ್ಚಿನ ಸ್ಥಾನ ದೊರೆಯಿತು. ನಮ್ಮ ಸಮಾಜದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ. ಅವರೆಲ್ಲರಿಗೂ ಈ ಕಟ್ಟಡದ ಸದುಪಯೋಗವಾಗಲಿ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ದಾನಿಗಳಿಗೆ ಸನ್ಮಾನ, ವಿದ್ಯಾನಿಧಿ ಸಮರ್ಪಣೆ ಮತ್ತು ಗುರುಗಳಿಂದ ಆಶೀರ್ವಚನ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಿನಯಾ ರಘುನಾಥ್ ರಾಯ್ಕರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯ ಪದಾಧಿಕಾರಿಗಳು ಮತ್ತು ಸಮಾಜದ ಬಾಂಧವರು ಭಾಗವಹಿಸಿದ್ದರು.