ಸಾರಾಂಶ
ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಹೀಗಾಗಿ ಜನರು ಸಿಗುವ ನೀರನ್ನೇ ಬಳಸುತ್ತಿದ್ದಾರೆ. ನೀವು ನಿಮ್ಮ ಮನೆಯಲ್ಲಿ ಇಂತಹ ನೀರನ್ನೇ ಕುಡಿಯುತ್ತೀರಾ ಎಂದು ಅಧಿಕಾರಿಗಳನ್ನು ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದರು.
ಗಂಗಾವತಿ:
ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಲು ಆಗದಿದ್ದರೆ ಗಂಟು ಮೂಟೆ ಕಟ್ಟಿಕೊಂಡು ಮನೆಗೆ ನಡೆಯಿರಿ. ನಿಮ್ಮ ನಿರ್ಲಕ್ಷ್ಯತನದಿಂದ ಜನರಿಗೆ ತೊಂದರೆಯಾಗುತ್ತಿದೆ.ಇದು ಸಚಿವ ಶಿವರಾಜ ತಂಗಡಗಿ ಗ್ರಾಪಂ ಪಿಡಿಒಗಳಿಗೆ ನೀಡಿದ ಎಚ್ಚರಿಕೆ.
ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ತಾಲೂಕು ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರಟಗಿ ತಾಲೂಕಿನ ಗುಂಡೂರು, ಬೇವಿನಾಳ, ಮುಷ್ಟೂರ, ಗಂಗಾವತಿ ತಾಲೂಕಿನ ಚಿಕ್ಕಜಂತಕಲ್, ಹಣವಾಳ ಮತ್ತು ಕನಕಗಿರಿ ತಾಲೂಕಿನ ಕರಡೋಣಾ, ಮೂಸ್ಟೂರು ಪಂಚಾಯಿತಿಯ ಪಿಡಿಒಗಳು ಜನರಿಗೆ ಸ್ಪಂದಿಸುತ್ತಿಲ್ಲ. ಕಾರ್ಯ ನಿರ್ವಹಿಸುತ್ತಿಲ್ಲವೆಂದು ದೂರುಗಳು ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗುಂಡೂರ ಗ್ರಾಪಂ ಪಿಡಿಒ ಕನಕಪ್ಪ ಅವರನ್ನು ಕೂಡಲೇ ಅಮಾನತು ಮಾಡುವಂತೆ ತಾಪಂ ಇಒಗೆ ಸೂಚಿಸಿದರು. ಉಳಿದವರಿಗೆ ಒಂದು ವಾರ ಗಡುವು ನೀಡಿದ್ದೇನೆ. ಸರಿಯಾಗಿ ಕೆಲಸ ಮಾಡದಿದ್ದರೆ ಮುಲಾಜಿ ಇಲ್ಲದೆ ಅಮಾನತು ಮಾಡಿ ಮನೆಗೆ ಕಳಿಸಿ ಎಂದ ಅವರು, ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ತರದೆ ಕಾಲಹರಣ ಮಾಡುತ್ತೀದ್ದಿರಿ ಎಂದು ತರಾಟೆಗೆ ತೆಗೆದುಕೊಂಡರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಹೀಗಾಗಿ ಜನರು ಸಿಗುವ ನೀರನ್ನೇ ಬಳಸುತ್ತಿದ್ದಾರೆ. ನೀವು ನಿಮ್ಮ ಮನೆಯಲ್ಲಿ ಇಂತಹ ನೀರನ್ನೇ ಕುಡಿಯುತ್ತೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನಗರ ಸೇರಿದಂತೆ ತಾಲೂಕುಗಳಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದರು ನಿಯಂತ್ರಿಸುವಲ್ಲಿ ವಿಫಲರಾಗಿದ್ದೀರಿ. ಅಂಗನವಾಡಿ ಕಟ್ಟಡಗಳಿಗೆ ಸ್ಥಳ ನೀಡಲು ಕೋರಿದ್ದರು ಸಹ ಏಕೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳಿಂದ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು. ಈ ವೇಳೆ ಸಂಸದ ರಾಜಶೇಖರ ಹಿಟ್ನಾಳ್, ತಾಪಂ ಇಒ ಲಕ್ಷ್ಮೀದೇವಿ, ರಾಮರೆಡ್ಡಿ, ತಹಸೀಲ್ದಾರ್ ನಾಗರಾಜ್, ವಿಶ್ವನಾಥ ಮುರುಡಿ, ರೆಡ್ಡಿ ಶ್ರೀನಿವಾಸ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಇದ್ದರು.