ಸಾರಾಂಶ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗುತ್ತಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿಲ್ಲ. ದಲಿತರ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗದವರ ಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಅವರದ್ದೆ ನಿಗಮದ ಹಣ ಲೂಟಿ ಹೊಡೆದ ಪಾಪಿಷ್ಠ ಸರ್ಕಾರವಿದು.
ಚಡಚಣ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗುತ್ತಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಿಲ್ಲ. ದಲಿತರ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗದವರ ಮತ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಅವರದ್ದೆ ನಿಗಮದ ಹಣ ಲೂಟಿ ಹೊಡೆದ ಪಾಪಿಷ್ಠ ಸರ್ಕಾರವಿದು. ದಮ್ಮಿದ್ದರೆ ಈ ಪ್ರಕರಣವನ್ನು ಮುಖ್ಯಮಂತ್ರಿಗಳು ಸಿಬಿಐಗೆ ಒಪ್ಪಿಸಲಿ ಎಂದು ಸಂಸದ ರಮೇಶ ಜಿಗಜಿಣಗಿ ಸವಾಲು ಹಾಕಿದರು.
ಪಟ್ಟಣದ ರಾಮಲಿಂಗ ಚೌಡೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಬಿಜೆಪಿ ಕಾರ್ಯಕಾರಿಣಿ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 7ನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಇದು ಕಾರ್ಯಕರ್ತರ ಗೆಲುವು. ನನ್ನ ಮೇಲಿಟ್ಟಿರುವ ವಿಶ್ವಾಸದ ಗೆಲುವು ಎಂದ ಅವರು, ನಾನು ಯಾವತ್ತೂ ಪ್ರಚಾರಪ್ರಿಯನಲ್ಲ. ನನ್ನ ಅಧಿಕಾರಾವಧಿಯಲ್ಲಿ ಜಿಲ್ಲೆಗೆ ವಿದ್ಯುತ್ ಸ್ಥಾವರ ಪ್ರಾರಂಭ, ಸುಮಾರು ಏಳು ರಾಷ್ಟ್ರೀಯ ಹೆದ್ದಾರಿಗಳನ್ನು ತಂದಿದ್ದೇನೆ. ಲಿಂಗಸೂರು ಶಿರಾಡೋಣ ರಾಷ್ಟ್ರೀಯ ಹೆದ್ದಾರಿ ಬಾಕಿ ಉಳಿದಿದೆ. ಅದನ್ನೂ ಶೀಘ್ರ ಮಾಡಲು ಶ್ರಮಿಸುತ್ತೇನೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸ್ವತಃ ಮುತವರ್ಜಿ ವಹಿಸಿ ಬಿಜೆಪಿ ಸರ್ಕಾರವಿದ್ದಾಗ ಸುಮಾರು ₹ 3 ಸಾವಿರ ಕೋಟಿ ಮಂಜೂರು ಮಾಡಿಸಿ ಜನಪರ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಹೇಳಿದರು.
ಸಾಹಿತಿ ಬಸವರಾಜ ಯಂಕಂಚಿ ಮಾತನಾಡಿದರು. ಬಿಜೆಪಿ ಮುಖಂಡರಾದ ಸಂಜೀವ ಈಹೊಳ್ಳಿ, ಚಿದಾನಂದ ಚಲವಾದಿ, ಮಹೇಂದ್ರ ನಾಯಕ ಹಾಗೂ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಕಾರ್ಯಕರ್ತರ ಸತತ ಶ್ರಮದಿಂದ ಜಿಲ್ಲೆಯಲ್ಲಿ 7 ನೇ ಬಾರಿಗೆ ಆಯ್ಕೆಯಾದ ಸಂಸದ ರಮೇಶ ಜಿಗಜಿಣಗಿ ಅವರು ದೇಶದಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಅದರಂತೆ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ಗ್ಯಾರಂಟಿ ಕುರಿತು ಅರಿವು ಮೂಡಿಸುವದರ ಮೂಲಕ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಕಾಂತೂಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಭೀಮುಗೌಡ ಬಿರಾದಾರ, ತಾಪಂ ಮಾಜಿ ಸದಸ್ಯ ರಾಜು ಝಳಕಿ, ಮುಖಂಡರಾದ ಶಿವಾನಂದ ಮಕಣಾಪುರ, ಸಿದ್ದು ಬಗಲಿ, ಗಂಗಾಧರ ಪಾವಲೆ, ಗಿರಿಜಾ ವಿಜಯಪುರ, ಮಹಾದೇವ ಯಂಕಂಚಿ, ರಾಜು ಕೋಳಿ, ಮಲ್ಲು ದೋತ್ರೆ, ಚಂದ್ರಶೇಖರ ನಿರಾಳೆ, ಪ್ರಮೋದ ಮಠ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.