ಕೊಟ್ಟೂರು: ಕಡುಬಡತನದಲ್ಲಿ ಹುಟ್ಟಿ, ವಿದ್ಯೆಯ ಮೇರು ಪರ್ವತ ಏರಿದ ಡಾ.ಬಿ.ಆರ್. ಅಂಬೇಡ್ಕರ್ಗೆ ಜಗತ್ತಿನ ಹಲವು ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ. ಇದಕ್ಕೆ ಅವರು ಗಳಿಸಿದ ವಿದ್ಯೆ ಕಾರಣ ಎಂದು ಕನ್ನಡದ ಖ್ಯಾತ ಸಾಹಿತಿ, ನಾಡೋಜ ಪುರಸ್ಕೃತ ಕುಂ.ವೀರಭದ್ರಪ್ಪ ಹೇಳಿದರು.
ಪಟ್ಟಣದ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ 2026- 27ನೇ ಸಾಲಿನ ವಿವಿಧ ಸಾಂಸ್ಕೃತಿಕ ಸಮಿತಿಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.ಓದುವ ಮನಸ್ಸಿದ್ದರೆ ಬಡತನವೂ ಅಡ್ಡಿ ಬರಲಾರದು. ಸರ್ಕಾರಿ ಶಾಲೆ ಎಂಬ ಕೀಳಿರುಮೆ ಬಿಡಿ. ಈ ಹಿಂದೆ ಮಹಾನ್ ಸಾಧನೆಗೈದವರೆಲ್ಲ ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಮಟ್ಟಕ್ಕೆ ಏರಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಮಟ್ಟಕೇರಬಹುದೆಂಬುದಕ್ಕೆ ತಾವು ಕೂಡ ಕಾರಣ ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ ಬಹಳ ಮುಖ್ಯ. ಅದರೊಂದಿಗೆ ಶ್ರದ್ಧೆಯಿಂದ ಓದುವ ಮೂಲಕ ತಂದೆ- ತಾಯಿಗಳ ಕನಸನ್ನು ನನಸು ಮಾಡಿ. ನಾನು ಈ ಮಟ್ಟಕ್ಕೆ ಇರಲು ನನ್ನ ಗುರುಗಳೇ ಕಾರಣ. ಎಂದಿಗೂ ಗುರುಗಳ ಮಾತನ್ನು ಮೀರದೇ ಶ್ರದ್ಧೆಯಿಂದ ವಿದ್ಯೆ ಕಲಿತಾಗ ಜೀವನದಲ್ಲಿ ಎಲ್ಲ ಗೌರವಗಳನ್ನು ಅನುಭವಿಸಲು ಸಾಧ್ಯ ಎಂದು ತಿಳಿಸಿದರು.ನಿವೃತ್ತ ಪ್ರಾಚಾರ್ಯ ಎಚ್.ಎಂ. ರವೀಂದ್ರಸ್ವಾಮಿ, ಕಾಲೇಜು ಪ್ರಾಚಾರ್ಯ ಡಾ.ಜಿ.ಸೋಮಶೇಖರಪ್ಪ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಜಗದೀಶ್ ಚಂದ್ರ ಬೋಸ್ ಪ್ರಾಸ್ತಾವಿಕವಾಗಿ ಮಾತಾಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಿದ್ದಲಿಂಗನಗೌಡ, ಸಕ್ರಪ್ಪ ರಡ್ಡೇರ, ಅಂಜಿನಪ್ಪ ಡಿ, ಕೆ.ಎಂ. ರೇಣುಕಾಸ್ವಾಮಿ, ಎಂ.ಜಯಣ್ಣ, ಕರಿಬಸಪ್ಪ ಜಿ., ಗುರಪ್ಪ ನಾಯಕ, ಎಂ.ಬಸವರಾಜ, ಪ್ರವೀಣಕುಮಾರ್, ತುಷಾರ್, ಶಶಿರೇಖಾ, ಕೆ.ಎಂ. ಮಂಜುಳಾ, ನಿವೃತ್ತ ಉಪನ್ಯಾಸಕರಾದ ಶಿವರಾಜ್ ಜಿ., ಎಸ್ಡಿಎಂಸಿ ಸದಸ್ಯರಾದ ಡಿಸಿ ಮಂಜುನಾಥ, ಹಡಪದ ಪ್ರಕಾಶ, ಕೊಟ್ರೇಶ, ಪಾರ್ವತಿ ಹಾಗೂ ವಿದ್ಯಾರ್ಥಿಗಳು ಇದ್ದರು.