ಕನ್ನಡಪ್ರಭ ವಾರ್ತೆ ದಾವಣಗೆರೆ
ಬಿಜೆಪಿಯವರರನ್ನು ಅಯೋಗ್ಯರು, ಮುಠ್ಠಾಳರು ಎಂದಿರುವ ಹಾಗೂ ಮುಸ್ಲಿಂ ಮಹಿಳೆಯರಿಗೆ ಅವಮಾನಿಸಿರುವ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ್ಗೆ ತಾಕತ್ತಿದ್ದರೆ ದಾವಣಗೆರೆಗೆ ಬರಲಿ ಎಂದು ಬಿಜೆಪಿ ಮುಖಂಡ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ ಸವಾಲು ಹಾಕಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಸಲು ದಾವಣಗೆರೆಗೆ ಬಂದಿದ್ದ ಶಾಸಕ ಪ್ರದೀಪ ಈಶ್ವರ ಸುದ್ದಿಗಾರರ ಜೊತೆ ಮಾತನಾಡುತ್ತಾ ಬಿಜೆಪಿಯವರನ್ನು ಅಯೋಗ್ಯರು, ಮುಠ್ಠಾಳರು ಅಂದಿದ್ದಲ್ಲದೇ, ಮುಸ್ಲಿಂ ಮಹಿಳೆಯರಿಗೆ ಬಿಜೆಪಿಯವರು ಗೌರವ ನೀಡುವುದಿಲ್ಲ ಎಂಬ ಹೇಳಿಕೆ ನೀಡಿದ್ದು ಖಂಡನೀಯ ಎಂದರು.
ಶಿಕ್ಷಣ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಪ್ರದೀಪ ಈಶ್ವರ ಬಗ್ಗೆ ಸಾಕಷ್ಟು ಗೌರವ ಇತ್ತು. ತುಂಬಾ ಬುದ್ಧಿವಂತ ವ್ಯಕ್ತಿಯೆಂದು ತಿಳಿದಿದ್ದೆವು. ಆದರೆ, ಸಂವಿಧಾನಾತ್ಮಕ ಜವಾಬ್ಧಾರಿ, ಸ್ಥಾನದಲ್ಲಿರುವಂತಹ ಪ್ರದೀಪ ಈಶ್ವರ್ಗೆ ಬಿಜೆಪಿಯವರ ಬಗ್ಗೆ ಹೀಗೆ ಹಗುರವಾಗಿ ಮಾತನಾಡಲು ಯಾವ ನೈತಿಕತೆ ಇದೆ? ಬಿಜೆಪಿಯವರು ಮಹಿಳೆಯರನ್ನು ಕೀಳಾಗಿ ನೋಡುತ್ತಾರೆನ್ನುವ ಮೂಲಕ ದಾವಣಗೆರೆಯ ಸಮಸ್ತ ಮುಸ್ಲಿಂ ಮಹಿಳೆಯರಿಗೂ ಪ್ರದೀಪ ಈಶ್ವರ ಅಮಾನಿಸಿದ್ದಾರೆ ಎಂದು ದೂರಿದರು.ನಾವು ಬಿಜೆಪಿಯವರು ಎಂದಿಗೂ ಮಹಿಳೆಯರನ್ನು ಕೀಳಾಗಿ ಕಾಣುವುದಿಲ್ಲ. ಮಹಿಳೆಯನ್ನೇ ದೇಶದ ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಎಂಬುದನ್ನು ಪ್ರದೀಪ ಈಶ್ವರ ಅರಿಯರಿ. ಮುಂದಿನ ಚುನಾವಣೆಯಲ್ಲಿ ನಿನ್ನದೇ ಕ್ಷೇತ್ರದ ಮತದಾರರು ನಿನಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಮುಸ್ಲಿಮರ ಬಗ್ಗೆ ದೊಡ್ಡದಾಗಿ ಮಾತನಾಡುವ ಕಾಂಗ್ರೆಸ್ಸಿನವರು ದಾವಣಗೆರೆ ದಕ್ಷಿಣದಲ್ಲಿ ಸುಮಾರು 82 ಸಾವಿರದಷ್ಟಿರುವ ಮುಸ್ಲಿಂ ಸಮುದಾಯಕ್ಕೆ ಯಾಕೆ ಟಿಕೆಟ್ ನೀಡಲಿಲ್ಲ? 6 ಸಲ ಶಾಸಕರನ್ನಾಗಿಸಿದ ಅದೇ ಮುಸ್ಲಿಮರನ್ನು ನಿಮ್ಮ ಪಕ್ಷ ಕಡೆಗಣಿಸಿದ್ದು ಕಾಣಲಿಲ್ಲವೇ ಪ್ರದೀಪ ಈಶ್ವರ? ಶಿಗ್ಗಾಂವ್ನಲ್ಲಿ 4 ಸಲ ಟಿಕೆಟ್ ನೀಡಿದಂತೆ ದಾವಣಗೆರೆ ದಕ್ಷಿಣದಲ್ಲೇಕೆ ಮುಸ್ಲಿಮರಿಗೆ ಟಿಕೆಟ್ ಕೊಡಲಿಲ್ಲ? ನಿಮ್ಮ ಪಕ್ಷ ಟಿಕೆಟ್ ಕೊಡದಿದ್ದಕ್ಕೆ ಇಂದು ಮುಸ್ಲಿಂ ಸಮುದಾಯದ 24 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಹೇಳಿದರು.
ಮಾಜಿ ಮೇಯರ್ ಎಸ್.ಟಿ.ವೀರೇಶ, ಬಿಜೆಪಿ ಕಾನೂನು ಪ್ರಕೋಷ್ಟದ ಪದಾಧಿಕಾರಿ, ವಕೀಲರೂ ಆದ ಎ.ಸಿ.ರಾಘವೇಂದ್ರ ಮೊಹರೆ, ಎಚ್.ದಿವಾಕರ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾತಿ ವೀರೇಶ ದೊಗ್ಗಳ್ಳಿ. ತಾರೇಶ ನಾಯ್ಕ, ಅಣ್ಣೇಶ ನಾಯ್ಕ, ಸಂತೋಷ ಪೈಲ್ವಾನ, ಎಚ್.ಪಿ.ವಿಶ್ವಾಸ, ಮಂಜು ಬೆಳ್ಳೂಡಿ ಇತರರು ಇದ್ದರು.
ದಾವಣಗೆರೆಯಲ್ಲಿ ಸಣ್ಣ ಪುಟ್ಟ ಗಲಾಟೆ ಇತರೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಪಟ್ಟಿಯಲ್ಲಿ ಇರುವಂತಹ ಕೆಲವರಿಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮೊಬೈಲ್ ಗೆ ಕರೆ ಮಾಡಿ, ಕಾಂಗ್ರೆಸ್ಸಿಗೆ ಬೆಂಬಲಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಶಾಸಕ ಪ್ರದೀಪ ಈಶ್ವರ ಹೇಳಿಕೆ, ಕೆಲವು ಪೊಲೀಸ್ ಅಧಿಕಾರಿ, ಸಿಬ್ಬಂದಿ ಬೆದರಿಕೆ ಹಾಕಿರುವ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ, ರಾಜ್ಯ ಚುನಾವಣಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಲಿದೆ.ಬಿ.ಜಿ.ಅಜಯಕುಮಾರ ಮಾಜಿ ಮೇಯರ್, ದಾವಣಗೆರೆ.