ಸಾರಾಂಶ
ಬಸವಕಲ್ಯಾಣದ ವಿಶ್ವ ಬಸವ ಧರ್ಮ ಟ್ರಸ್ಟ್. ಅನುಭವ ಮಂಟಪ ವತಿಯಿಂದ ಪ್ರಸಕ್ತ ಸಾಲಿನ ಶ್ರಾವಣ ಮಾಸದ ನಿಮಿತ್ತ ಅಮರಗಣಂಗಳ ಆತ್ಮಚೆರಿತ್ರೆ ಪ್ರವಚನದ ಉದ್ಘಾಟನೆ ಜರುಗಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಪ್ರವಚನ ಆಲಿಸುವುದರಿಂದ ನಮ್ಮ ಮನಸ್ಸು ಪರಿವರ್ತನೆ ಹೊಂದುತ್ತದೆ ಎಂದು ನಗರಸಭೆ ಪೌರಾಯುಕ್ತ ರಾಜು.ಡಿ.ಬಣಕಾರ ತಿಳಿಸಿದರು.ಇಲ್ಲಿನ ವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪದಿಂದ ಪ್ರಸಕ್ತ ಸಾಲಿನ ಶ್ರಾವಣ ಮಾಸದ ನಿಮಿತ್ತ ಅಮರಗಣಂಗಳ ಆತ್ಮಚರಿತ್ರೆ ಪ್ರವಚನದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಲ್ಯಾಣ ನಾಡು ಇಡಿ ದೇಶಕ್ಕೆ ಮಾದರಿಯಾಗಿದೆ. ನಾವೆಲ್ಲರೂ ಆಸೆ ಆಕಾಂಕ್ಷೆ ಬಿಟ್ಟು ಶರಣರ ಮಾರ್ಗದಲ್ಲಿ ನಡೆದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು.
ನಿವೃತ್ತ ನ್ಯಾಯಾಧೀಶರಾದ ಸುಭಾಷಚಂದ್ರ ನಾಗರಾಳೆ ಮಾತನಾಡಿ, ಅಕ್ಕಮಹಾದೇವಿ ವಚನ ಸಾರಾಂಶ ತಿಳಿಸಿದವರು, ಕಾಯಕ ಲಿಂಗಪೂಜೆ ಜಂಗಮಸೇವೆ ಶರಣರ ಒಡನಾಟ ಸಂತ್ಸಂಗದಲ್ಲಿ ಪಾಲ್ಗೊಂಡು ತನು ಮನ ಭಾವ ಶುದ್ಧೀಕರಣ ಮಾಡಿಕೊಳ್ಳಬೇಕೆಂದರು.ವಿಶ್ವ ಬಸವ ಧರ್ಮ ಟ್ರಸ್ಟ್. ಅನುಭವ ಮಂಟಪದ ಉಪಾಧ್ಯಕ್ಷ ವೈಜಿನಾಥ ಕಾಮಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಅನುಭವ ಮಂಟಪದ ಕಾರ್ಯ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಅದರೊಂದಿಗೆ ವಚನ ವಿಶ್ವವಿದ್ಯಾಲಯ ಅವಶ್ಯಕತೆ ಬಹಳಷ್ಟಿದೆ. ಈ ವಿಷಯದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಗಮನಕ್ಕೂ ಸಹ ತರುವೆ ಎಂದು ತಿಳಿಸಿದರು.
ನ್ಯಾಯವಾದಿ ವಿಜಯಲಕ್ಷ್ಮಿ ಆರ್, ಹೂಗಾರ ಮಾತನಾಡಿದರು. ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಪ್ರವಚನಕಾರರಾದ ಶಿವಾನಂದ ಸ್ವಾಮೀಜಿ, ಪೂಜ್ಯ ಸುಗುಣತಾಯಿ, ಹಾಲಮ್ಮತಾಯಿ, ಇಷ್ಟಲಿಂಗ ಸ್ವಾಮೀಜಿ, ವಿಶ್ವ ಬಸವ ದರ್ಮ ಟ್ರಸ್ಟ ಅನುಭವ ಮಂಟಪದ ಕಾರ್ಯದರ್ಶಿ ಡಾ.ಎಸ್.ಬಿ.ದುರ್ಗೆ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ರಾಜಕುಮಾರ ರಟಕಲೆ, ಎಸ್.ಜಿ.ಹುಡೇದ, ಭೀಮಾಶಂಕರ ಮಾಶ್ಯಾಳಕರ್. ಮಹಾದೇವಪ್ಪಾ ಇಜಾರೆ ಇತರರಿದ್ದರು.