ಸಾರಾಂಶ
ಹಾವೇರಿ: ಆಸೆ ಕಳೆದುಕೊಂಡರೆ ಬದುಕಬಹುದು. ಆದರೆ ಆಸಕ್ತಿ ಕಳೆದುಕೊಂಡರೆ ಬದುಕಿನ ಮಾರ್ಗವೇ ಕಳೆದು ಹೋಗಬಹುದು. ಅವಕಾಶಗಳ ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.ನಗರದ ಎಸ್.ಜೆ.ಎಂ ಕಲಾ, ವಾಣಿಜ್ಯ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶಾಲಾ-ಕಾಲೇಜುಗಳ ಪರೀಕ್ಷೆಗಳಲ್ಲಿ ಪಾಸ್ ಆಗುವುದು ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಅವಶ್ಯವೇನೋ ನಿಜ, ಆದರೆ ಪರೀಕ್ಷಾ ಫಲಿತಾಂಶಗಳೇ ಜೀವನದಲ್ಲಿ ಅಂತಿಮವಲ್ಲ. ಜೀವನವೆಂಬ ಪರೀಕ್ಷೆಯಲ್ಲಿ ಪಾಸ್ ಆಗುವುದೇ ಮುಖ್ಯ ಎಂಬ ಮಾತನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದರು. ಕೆ-ಸಿ.ಇ.ಟಿ ಕಾಲೇಜಿನಲ್ಲಿ ಪ್ರಾರಂಭಿಸುವ ಪರಿಚಯ ಪತ್ರವನ್ನು ಬಿಡುಗಡೆ ಮಾಡಿದರು.ಎಂಆರ್ಎಂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ರಾಮ ಮೋಹನ್ರಾವ್ ಮಾತನಾಡಿ, ರಾಜ ತನ್ನ ರಾಜ್ಯದಲ್ಲಿ ಮಾತ್ರ ಗೌರವಿಸಲ್ಪಟ್ಟರೆ ವಿದ್ವಾಂಸ ಎಲ್ಲೆಡೆ ಗೌರವಿಸಲ್ಪಡುತ್ತಾನೆ. ಶಿಕ್ಷಣ ಆಸ್ತಿ ಆಗಬೇಕು, ಸಂವಹನ ಕಲೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪ್ರತಿಭಾವಂತರಾಗುವುದೇ ವಿದ್ಯಾರ್ಥಿಯ ಲಕ್ಷಣ. ಅನಾವಶ್ಯಕ ವಾದ -ವಿವಾದಗಳಿಂದ ದೂರವಿದ್ದು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದರು.ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಯಾವುದೇ ದೇಶದ ಶೈಕ್ಷಣಿಕ ಮೌಲ್ಯ ಕುಸಿದರೆ ಆ ದೇಶದ ವಿನಾಶ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಶೈಕ್ಷಣಿಕ ಸಮಾನತೆ ಅನುಷ್ಠಾನ ಸರ್ಕಾರದ ಆದ್ಯತೆಯಾಗಬೇಕು. ಒಂದು ಸಶಕ್ತ ರಾಷ್ಟ್ರವನ್ನು ಸರ್ವನಾಶಗೊಳಿಸಲು ಅಣುಬಾಂಬ್ ಅಥವಾ ದೂರಗಾಮಿ ಕ್ಷಿಪಣಿಗಳು ಅಗತ್ಯವಿರುವುದಿಲ್ಲ, ಆ ರಾಷ್ಟ್ರದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ನಕಲು ಮಾಡಲು ಬಿಟ್ಟು ಶಿಕ್ಷಣದ ಗುಣಮಟ್ಟ ತಗ್ಗಿಸಿದರೆ ಸಾಕು ಎಂದು ಹೇಳಿದರು.ಸೇವಾ ನಿವೃತ್ತಿಗೊಂಡ ರಾಜ್ಯಶಾಸ್ತ್ರ ಉಪನ್ಯಾಸಕಿ ಸುಚೇತಾ ಪವಾರ್ ಅವರನ್ನು ಕಾಲೇಜು, ಪದವಿ ಪೂರ್ವ ಕಾಲೇಜುಗಳ ಸಂಘ ಹಾಗೂ ರಾಣಿಬೆನ್ನೂರು ಎಸ್.ಜೆ.ಎಂ ಕಾಲೇಜಿನ ಸಿಬ್ಬಂದಿ ಗೌರವಿಸಿ ಬಿಳ್ಳೋಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವಿ.ಎನ್. ಆಲದಕಟ್ಟಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ದ್ವಿತೀಯ ಪಿಯುಸಿ ಮಹತ್ವದ ಘಟ್ಟ, ಭವಿಷ್ಯದ ಅಡಿಪಾಯ ಪರಿಶ್ರಮದಿಂದ ಪ್ರತಿಭೆ ಪ್ರಾಪ್ತಿಯಾಗುತ್ತದೆ. ಪ್ರತಿಭೆಗೆ ಯಾವಾಗಲೂ ಮನ್ನಣೆ ಇದ್ದೇ ಇದೆ ಎಂದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಾದ ನೇತ್ರಾವತಿ, ಪವಿತ್ರ ಹಾಗೂ ಭುವನೇಶ್ವರಿ ತಮ್ಮ ಅನಿಸಿಕೆ ಹಂಚಿಕೊಂಡರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಪ್ರತಿಭಾ ಪುರಸ್ಕಾರವು ನಡೆಯಿತು. ಸವಿತಾ ಹೊಂಬರಡಿ ವಚನ ಪ್ರಾರ್ಥಿಸಿದರು. ಒಕ್ಕೂಟದ ಕಾರ್ಯದರ್ಶಿ ಭಾಗ್ಯಲಕ್ಷ್ಮಿ ಅರೇಪಲ್ಲಿ ಸ್ವಾಗತಿಸಿದರು. ವೀಣಾ ಸಂಪಗಿ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.