ಸಾರಾಂಶ
ಕುಕನೂರು: ಧರ್ಮದ ಹಾದಿಯಲ್ಲಿ ಸಾಗಿದರೆ ಬದುಕು ಹಸನಾಗುತ್ತದೆ ಎಂದು ಯಲಬುರ್ಗಾ ಶ್ರೀಧರ ಮುರುಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯರು ಹೇಳಿದರು.ತಾಲೂಕಿನ ಗೊರ್ಲೆಕೊಪ್ಪದಲ್ಲಿ ಕಟ್ಟಿಬಸವೇಶ್ವರ ಕಾರ್ತಿಕೋತ್ಸವ, ಶರಣಬಸವೇಶ್ವರ ಪುರಾಣ ಮಂಗಳ ಪ್ರಯುಕ್ತ ಜರುಗಿದ 50 ವಟುಗಳಿಗೆ ಜರುಗಿದ ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಧರ್ಮ ಎಂಬುದು ಸತ್ಯ, ಪ್ರಾಮಾಣಿಕ ಹಾದಿಯಲ್ಲಿ ಸಾಗುವ ದಾರಿಯಾಗಿದೆ. ಬದುಕಿನಲ್ಲಿ ಸಾಧನೆ ಎಂಬುದು ಒಳ್ಳೆತನದ ಹಾದಿಯಲ್ಲಿ ಗಳಿಸಿದ ಶ್ರೇಷ್ಠತೆಯಾಗಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಯಿಂದ ಕಾಣಬೇಕು. ಆಗ ಜೀವನ ಸಾರ್ಥಕವಾಗಲಿದೆ. ಭಕ್ತಿ ಮಾರ್ಗದಲ್ಲಿ ಸಾಗಿದಾಗ ಮನಸ್ಸಿನಲ್ಲಿ ಚಂಚಲತೆ ಬಾರದು. ಮನುಷ್ಯನ ಮನಸ್ಸು ತಿಳಿಯಾಗಿರಬೇಕು. ಅಯ್ಯಾಚಾರ ಪಡೆದ ವಟುಗಳು ನಿತ್ಯ ಪೂಜೆ ಮಾಡಿಕೊಳ್ಳಬೇಕು. ಇದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿನಲ್ಲಿ ಭಕ್ತಿ ಭಾವನೆ ಮೂಡುತ್ತದೆ ಎಂದರು.ಬದುಕಿನಲ್ಲಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಕಲಿಸುವ ಪಾಠವು ಜೀವನದುದ್ದಕ್ಕೂ ಇರುತ್ತದೆ. ದೀಕ್ಷಾದಿಂದ ನಿತ್ಯ ಪೂಜೆ ಮಾಡುವುದು ಸಂಸ್ಕಾರದ ಸಂಕೇತ. ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ ಪೂಜೆ ಮಾಡಬೇಕು. ನಂತರ ನಿತ್ಯ ಕೆಲಸದಲ್ಲಿ ತೊಡಗಬೇಕು. ಇದರಿಂದ ದಿನವಿಡೀ ಉತ್ತಮ ಚೈತನ್ಯ ಒಡಮೂಡುತ್ತದೆ ಎಂದರು.