ಮಹಾದೇವಪ್ಪ ಬೇಕಾದ್ರೆ ನಮ್ಮ ಬಳಿ ಬರಲೇಬೇಡಿ

| Published : Apr 07 2024, 01:49 AM IST

ಸಾರಾಂಶ

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಮನೆಗೆ ಭೇಟಿ ನೀಡಿ ಮನವೊಲಿಸುವಲ್ಲಿ ಯಶಸ್ವಿಯಾಗಿ ನಿಟ್ಟುಸಿರುವ ಬಿಟ್ಟಿದ್ದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ಗೆ ಹೊಸ ತಲೆನೋವು ಎದುರಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಮನೆಗೆ ಭೇಟಿ ನೀಡಿ ಮನವೊಲಿಸುವಲ್ಲಿ ಯಶಸ್ವಿಯಾಗಿ ನಿಟ್ಟುಸಿರುವ ಬಿಟ್ಟಿದ್ದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ಗೆ ಹೊಸ ತಲೆನೋವು ಎದುರಾಗಿದೆ.

ಟಿಕೆಟ್‌ ವಂಚಿತರಾಗಿ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ರಾಮದುರ್ಗದ ಅವರ ಮನೆಯಲ್ಲಿ ಶುಕ್ರವಾರ ಭೇಟಿಯಾಗಿ ಮನವೊಲಿಸಿ ಬಿಜೆಪಿ ಪರ ಪ್ರಚಾರ ಕೈಗೊಳ್ಳುವಂತೆ ಮನವೊಲಿಸಿದ್ದರು. ಇದರಿಂದ ಕಳೆದ ವಿಧಾನಸಭೆಯಲ್ಲಿ ರಾಮದುರ್ಗ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆದು ಸ್ಪರ್ಧಿಸಿ ಪರಾಭವಗೊಂಡಿದ್ದ ಚಿಕ್ಕರೇವಣ್ಣ ಅಭಿಮಾನಿಗಳು ದಿಢೀರ್‌ ಸಭೆ ನಡೆಸಿ, ಶೆಟ್ಟರ್ ನಡೆಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.ಮಾತ್ರವಲ್ಲ, ನಿಮಗೆ ಯಾದವಾಡ ಬೇಕೋ? ನಾವು ಬೇಕೋ ? ಎಂಬುದನ್ನು ತಿಳಿಸಬೇಕು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಬೇಕಾದರೆ ನೀವು ನಮ್ಮ ಬಳಿ ಬರಲೇಬೇಡಿ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿದ್ದವರನ್ನೇ ಭೇಟಿ ಮಾಡಿದ್ದೀರಿ. ಇದರ ಅವಶ್ಯಕತೆ ಏನಿತ್ತು? ಚಿಕ್ಕರೇವಣ್ಣ ಅವರು ಕ್ಷೇತ್ರಕ್ಕೆ ಬಂದಿಲ್ಲ ಎಂದು ಹೇಳುತ್ತೀರಿ. ಈ ಕ್ಷಣದಲ್ಲೇ ಅವರನ್ನು ಕರೆಸಿಕೊಳ್ಳುವ ಶಕ್ತಿ ನಮಗಿದೆ. ಒಂದು ವೇಳೆ ಯಾದವಾಡ ನಿಮಗೆ ಬೇಕಾದರೆ ನಮ್ಮ ಬೆಂಬಲ ನಿಮಗೆ ಇಲ್ಲ ಎಂದು ಚಿಕ್ಕರೇವಣ್ಣ ಅಭಿಮಾನಿಗಳು ಶೆಟ್ಟರ್‌ಗೆ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.