ಸಾರಾಂಶ
ಕಾರ್ಕಳ: ತಾಲೂಕಿನ ನಲ್ಲೂರಿನಲ್ಲಿ ನಡೆದ ಅಕ್ರಮ ಗೋ ಹತ್ಯೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ, ಪೋಲಿಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡಿರುವುದನ್ನು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಶ್ಲಾಘಿಸಿದ್ದಾರೆ.ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ನಲ್ಲೂರಿನ ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ವ್ಯವಸ್ಥಿತ ಗೋ ಹತ್ಯೆ ದಂಧೆಯ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ನಾನು ಪೋಲಿಸ್ ಇಲಾಖೆಯನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.ಪ್ರತಿ ಬಾರಿ ಗೋ ರಕ್ಷಣೆಯ ಕಾರ್ಯ ಮಾಡುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ಇಂತಹ ಅಕ್ರಮ ಗೋ ಹತ್ಯೆ ದಂಧೆಗಳನ್ನು ಪತ್ತೆಹಚ್ಚಿ ಬಯಲು ಮಾಡುವುದು ನಮ್ಮ ಹಿಂದೂ ಕಾರ್ಯಕರ್ತರೇ ಎನ್ನುವುದನ್ನು ಜನರು ಗಮನಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎನ್ನುವ ಭರವಸೆಯಿಂದ ಕೆಲವರು ಕಾನೂನಿನ ಭಯವಿಲ್ಲದೆ ರಾಜಾರೋಷವಾಗಿ ಅಕ್ರಮ ಗೋ ಮಾಂಸ ವ್ಯಾಪಾರ ನಡೆಸುತ್ತಿದ್ದಾರೆ. ಇಂತಹ ಅಕ್ರಮ ದಂಧೆಗಳೇ ಗೋ ಕಳ್ಳತನಕ್ಕೆ ಕಾರಣವಾಗುತ್ತಿವೆ ಎಂದು ಅವರು ಆರೋಪಿಸಿದರು.ಈ ಅಕ್ರಮ ಕಸಾಯಿಖಾನೆಗಳನ್ನು ಪತ್ತೆಹಚ್ಚಿ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿ ಕಠಿಣ ಕ್ರಮ ಕೈಗೊಳ್ಳಬೇಕು. ಪೋಲಿಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳ ಹೆಡೆಮುರಿಕಟ್ಟಲಿ, ಕಾರ್ಕಳದಾದ್ಯಂತ ನಡೆಯುತ್ತಿರುವ ಇಂತಹ ಅಕ್ರಮ ದಂಧೆಗಳನ್ನು ಶೀಘ್ರವೇ ನಿಗ್ರಹಿಸಬೇಕು ಎಂದು ನವೀನ್ ನಾಯಕ್ ಒತ್ತಾಯಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))