ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕಿನ ಬೊಗ್ರಿಬೈಲ್ ವ್ಯಾಪ್ತಿಯ ಸರ್ವೆ ನಂಬರ್ 25 ಹಿಸ್ಸಾ 1ರ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕಿನ ಅಲಗೇರಿ ಗ್ರಾಪಂ ವ್ಯಾಪ್ತಿಯ ಬೊಗ್ರಿಬೈಲ, ಶಿರಕುಳಿ, ಮತ್ತು ಬಾಳೆಗುಳಿ ಸಾರ್ವಜನಿಕರು ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೊಗ್ರಿಬೈಲ್ ಗ್ರಾಮದ ಸರ್ವೆ ನಂಬರ್ 25 ಹಿಸ್ಸಾ 1ರಲ್ಲಿರುವ 7 ಎಕರೆ 26 ಗುಂಟೆ ಜಮೀನನ್ನು ಶಿವಮೊಗ್ಗ ಮೂಲದ ಶಿವಕುಮಾರ ಮುರುಗೇಶ ರಾಮಸ್ವಾಮಿ ಎಂಬವರಿಗೆ ಮಾರಾಟ ಮಾಡಲಾಗಿದೆ. ಈ ಜಮೀನಿನ ಮಾರಾಟದ ಅಕ್ರಮದ ಹಿಂದೆ ಭಾರಿ ಜಾಲವಿರುವ ಶಂಕೆ ವ್ಯಕ್ತವಾಗಿದೆ.

ಪ್ರಮುಖರಾದ ಗೋವಿಂದ ಗೌಡ ಮಾತನಾಡಿ, ಈ ಪ್ರಕರಣದ ಹಿಂದೆ ಯಾರಿದ್ದಾರೆ, ನಕಲಿ ದಾಖಲೆ ಸೃಷ್ಟಿಸಿದವರು ಯಾರು, ಮೃತ ವ್ಯಕ್ತಿಗಳ ಹೆಸರಿನಲ್ಲಿ ಇದ್ದ ಮೂಲ ದಾಖಲೆ ತಿರುಚಿ ನಕಲಿಯಾಗಿ ಸೃಷ್ಟಿಸಿದ ವ್ಯಕ್ತಿಗಳು ಯಾರು ಮತ್ತು ಈ ಜಮೀನಿಗೆ ಸಂಬಂಧಿಸಿದಂತೆ ಅನೇಕ ಅನುಮಾನಗಳು ಮೂಡಿಸುತ್ತಿವೆ. ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ನಮ್ಮ ಊರಿನಲ್ಲಿ ಇಂತಹ ಅನೇಕ ಪ್ರಕರಣಗಳು ಈ ಹಿಂದೆಯೂ ಆಗಿವೆ ಮತ್ತು ಎಷ್ಟೋ ಅಮಾಯಕ ಜನರು ತಮ್ಮ ಮೂಲ ಭೂಮಿಯನ್ನು ಕಳೆದುಕೊಂಡಿದ್ದಾರೆ. ಎಷ್ಟೋ ಜನರು ಈಗಲೂ ಕೋರ್ಟ್ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಪ್ರಕರಣದಿಂದ ಅಂಕೋಲಾ ತಾಲೂಕಿನ ನಾಗರಿಕರಲ್ಲಿ ಅನೇಕ ಅನುಮಾನಗಳು ಹುಟ್ಟು ಹಾಕಿವೆ. ಆದ್ದರಿಂದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡು ಮುಂದೆ ಅಮಾಯಕರ ಜಮೀನುಗಳು ಇಂತಹ ದಲ್ಲಾಳಿಗಳ ಸ್ವಾರ್ಥಕ್ಕೆ ಬಲಿಯಾಗದ ಅಂಕೋಲಾ ತಾಲೂಕಿನ ಜನತೆಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.


ಈ ಸಂದರ್ಭ ಅಲಗೇರಿ ಗ್ರಾಪಂ ವ್ಯಾಪ್ತಿಯ ನಾಗರಿಕರಾದ ಕೇಶವ ನಾಯ್ಕ, ಕೃಷ್ಣಮೂರ್ತಿ ನಾಯಕ, ರವಿ ಗೌಡ, ಲೋಕೇಶ ಗೌಡ, ಸವಿತಾ ಕಲ್ಮಠ ಮುಂತಾದವರಿದ್ದರು.