ಸಾರಾಂಶ
ಲಕ್ಷ್ಮೇಶ್ವರ ಸಮೀಪದ ಸೂರಣಗಿ ಗ್ರಾಮದ ರಿಸ. ನಂ. 326ರಲ್ಲಿ ಪಟ್ಟಾ ಜಮೀನಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೂ ಲಕ್ಷ್ಮೇಶ್ವರ ತಹಸೀಲ್ದಾರ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗದಗ ಜಿಲ್ಲಾ ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಶರಣು ಗೋಡಿ ಆರೋಪಿಸಿದರು.
ಲಕ್ಷ್ಮೇಶ್ವರ: ಸಮೀಪದ ಸೂರಣಗಿ ಗ್ರಾಮದ ರಿಸ. ನಂ. 326ರಲ್ಲಿ ಪಟ್ಟಾ ಜಮೀನಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೂ ಲಕ್ಷ್ಮೇಶ್ವರ ತಹಸೀಲ್ದಾರ್ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗದಗ ಜಿಲ್ಲಾ ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಶರಣು ಗೋಡಿ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಪದ ಸೂರಣಗಿ ಗ್ರಾಮದ ಹತ್ತಿರ ನಡೆಯುತ್ತಿರುವ ಶಿಗ್ಗಾಂವಿ ಕಲ್ಮಲಾ ರಸ್ತೆ ಕಾಮಗಾರಿಗೆ ಪಟ್ಟಾ ಜಮೀನಿನಲ್ಲಿ ಹಿಟಾಚಿ ಬಳಸಿ ಟಿಪ್ಪರ್ಗಳ ಮೂಲಕ ಅಕ್ರಮವಾಗಿ ಸಾವಿರಾರು ಟ್ರಿಪ್ ಮಣ್ಣು ಎತ್ತಿ ಮೆಟ್ಲಿಂಗ್ ಮಾಡಲು ಉಪಯೋಗಿಸುತ್ತಿದ್ದಾರೆ. ಈ ಕುರಿತು ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದೇವೆ. ಅಲ್ಲದೆ ಜಿಪಿಎಸ್ ಫೋಟೋ ತೆಗೆದು ಕಳುಹಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸೂರಣಗಿ ಗ್ರಾಮ ಲೆಕ್ಕಾಧಿಕಾರಿ ಅವರನ್ನು ಕಳುಹಿಸಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರೂ ಅಕ್ರಮವಾಗಿ ಮಣ್ಣು ಎತ್ತುವವರ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಗಣಿ ಮತ್ತು ಭೂಗರ್ಭ ಇಲಾಖೆಯಿಂದ ಹಾಗೂ ಕಂದಾಯ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೆ ಅಕ್ರಮಮವಾಗಿ ರಾಜಾರೋಷವಾಗಿ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಬಡವರು ಹೊಲಗಳಿಗೆ ಮಣ್ಣು ಹೇರಿಕೊಂಡು ಹೋಗುತ್ತಿರುವವರಿಗೆ ದಂಡ ಹಾಕುತ್ತಾರೆ ಎಂದು ಆರೋಪಿಸಿದರು.ಗುತ್ತಿಗೆದಾರರೊಂದಿಗೆ ತಹಸೀಲ್ದಾರ್ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಮೂಡಿದೆ. ತಹಸೀಲ್ದಾರ್ ಅವರ ಈ ನಡೆಯಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರು. ರಾಜಸ್ವ ನಷ್ಟ ಉಂಟಾಗುತ್ತಿದೆ. ಆದ್ದರಿಂದ ತಹಸೀಲ್ದಾರ್ ವಾಸುದೇವ ಸ್ವಾಮಿ ಅವರನ್ನು ಕೂಡಲೇ ಅಮಾನತು ಮಾಡಬೇಕು. ಒಂದು ವೇಳೆ ತಹಸೀಲ್ದಾರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ನಾಗೇಶ ಅಮರಾಪುರ, ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಆಡೂರ, ಗೌಸ್ ಮೋದಿನ ಜಮಖಂಡಿ, ಕೈಶರ್ ಮಹ್ಮದ್ ಕುಂದಗೋಳ ಇದ್ದರು.