ಕನ್ನಡಪ್ರಭ ವಾರ್ತೆ ದೇವಲಾಪುರ

ನೀರಿಲ್ಲದೆ ಬರಿದಾಗಿರುವ ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಗೆ ಸೇರಿದ ದೇವಲಾಪುರ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಣೆ ದೊಡ್ಡ ಮಾಫಿಯಾವಾಗಿದೆ. ಅಲ್ಲದೇ, ಕೆರೆ ಸುತ್ತಲು ಇದ್ದ ಮರಗಳ ಮಾರಣ ಹೋಮ ನಡೆದಿದೆ.

ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ಕೇಂದ್ರವಾಗಿದ್ದು, ಈ ಕೆರೆಯಲ್ಲಿನ ಮಣ್ಣನ್ನು ಸುತ್ತಮುತ್ತಲಿನ ಗ್ರಾಮಗಳಿಗೂ ಬೆಳಗ್ಗೆಯಿಂದ ರಾತ್ರಿಯವರಿಗೂ ಕಾನೂನು ಉಲ್ಲಂಘನೆ ಮೀರಿ ಮಣ್ಣು ಸಾಗಣೆ ಮಾಡಲಾಗುತ್ತಿದೆ.

ಗ್ರಾಮಗಳ ರಸ್ತೆಗಳ ಮೂಲಕ ಮಣ್ಣು ಸಾಗಿಸಲಾಗುತ್ತಿದೆ. ಇದರಿಂದ ಉತ್ತಮ ರಸ್ತೆಗಳು ಗದ್ದೆಗಳಂತೆ ಕಾಣುತ್ತಿವೆ. ದ್ವಿಚಕ್ರ ವಾಹನ ಸವಾರರು ಸಂಚರಿಸುವ ವೇಳೆ ನೋವು ಅನುಭವಿಸುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆಗಳಲ್ಲಿ ಮಣ್ಣು ಸಾಗಣೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ವಾಹನ ಸವಾರರು, ವ್ಯಾಪಾರಸ್ಥರಿಗೂ ತುಂಬಾ ಕಿರಿಕಿರಿಯಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಗ್ರಾಮ ಜರುಗಿಸಬೇಕು. ಮಣ್ಣು ಮಾಫಿಯಾಗೆ ತಿಲಾಂಜಲಿ ನೀಡುವಂತೆ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.


ಕೆರೆ ಮಣ್ಣನ್ನು ತೆರೆಯಲು ಗ್ರಾಪಂ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ರೈತರು ಎಂದೇಳಿ ಸಾಗಾಣೆ ಮಾಡಲಾಗುತ್ತಿದೆ. ಮಣ್ಣನ್ನು ರೈತರ ಉಪಯೋಗಕ್ಕೆ ಬಳಸಬೇಕು. ಆದರೆ, ಕಾನೂನು ಉಲ್ಲಂಘಿಸಿ ಯಾವುದೇ ಅನುಮತಿ ಪಡೆಯದೇ ಬೇರೆಯವರಿಗೆ ಲಾಭಕ್ಕಾಗಿ ಸಾಗಣೆ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಕೆರೆಯ ಸುತ್ತಲು ಗೊಬ್ಬಳಿ ಮರಗಳಿವೆ. ಮಣ್ಣು ತೆಗೆಯುವ ನೆಪದಲ್ಲಿ ಈ ಮರಗಳನ್ನು ಕಡಿದು ಹಾಕಲಾಗಿದೆ. ಇದರಿಂದ ಪರಿಸರವು ನಾಶವಾಗುವಂತೆ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ. ಕೆರೆ ಮಣ್ಣು ಮಾಫಿಯಾ, ಮರಗಳ ಮಾರಣ ಹೋಮ ಮಾಡಿರುವವರ ವಿರುದ್ಧ ಜಿಲ್ಲಾಧಿಕಾರಿಗಳು, ತಾಲೂಕು ದಂಡಾಧಿಕಾರಿಗಳು, ಹೇಮಾವತಿ ಅಚ್ಚುಕಟ್ಟು ಪ್ರದೇಶ ಅಧಿಕಾರಿಗಳು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.