ಸಮಾಜಮುಖಿ ಕಾರ್ಯಗಳತ್ತ ಐಎಂಎ ಹೆಜ್ಜೆ

| Published : Oct 07 2025, 01:03 AM IST

ಸಾರಾಂಶ

ಐಎಂಎ ವತಿಯಿಂದ ಈಗಾಗಲೇ ಕಾಲಕಾಲಕ್ಕೆ ವೈದ್ಯಕೀಯ ಶಿಬಿರ, ಉಪನ್ಯಾಸ, ಸಾಧಕರಿಗೆ ಸನ್ಮಾನ, ಹಿರಿಯರ ಸ್ಮರಣೆಯಂತಹ ಕಾರ್ಯಕ್ರಮ ಸಹ ಮಾಡುತ್ತಿದೆ.

ಧಾರವಾಡ:

ಭಾರತೀಯ ವೈದ್ಯಕೀಯ ಸಂಸ್ಥೆಯು (ಐಎಂಎ) ಆರಂಭದಿಂದಲೂ ಸಮಾಜಮುಖಿ ಚಿಂತನೆ ಹಾಗೂ ಕಾರ್ಯಗಳನ್ನು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿ, ಕ್ರಿಯಾಶೀಲ ಕಾರ್ಯಗಳನ್ನು ಮಾಡಲಿದೆ ಎಂದು ಐಎಂಎ ನೂತನ ಅಧ್ಯಕ್ಷ ಡಾ. ಜಗದೀಶ ನಿರಡಿ ಹೇಳಿದರು.

ಇಲ್ಲಿಯ ಐಎಂಎ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐಎಂಎ ವತಿಯಿಂದ ಈಗಾಗಲೇ ಕಾಲಕಾಲಕ್ಕೆ ವೈದ್ಯಕೀಯ ಶಿಬಿರಗಳು ನಡೆಯುತ್ತಿವೆ. ಅಲ್ಲದೇ ಉಪನ್ಯಾಸ, ಸಾಧಕರಿಗೆ ಸನ್ಮಾನ, ಹಿರಿಯರ ಸ್ಮರಣೆಯಂತಹ ಕಾರ್ಯಕ್ರಮ ಸಹ ಮಾಡುತ್ತಿದ್ದೇವೆ. ಸಮಾಜಕ್ಕೆ ಸ್ಪಂದಿಸುವ ಕೆಲಸ ನಮ್ಮದು ಎಂದರು.

ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ ಸದಸ್ಯ ಡಾ. ವೀರಭದ್ರಯ್ಯ ಟಿ.ಎ. ಮಾತನಾಡಿ, ಐಎಂಎ ಕಾರ್ಯಗಳಿಗೆ ತಾವು ಸಹ ಸಹಕಾರ ನೀಡಲಿದ್ದೇವೆ ಎಂದು ಹೇಳಿದರು.

ಇದೇ ವೇಳೆ ನೂತನ ಕಾರ್ಯದರ್ಶಿ ಡಾ. ರಾಜೀವ ಗೋಠೆ, ಖಜಾಂಚಿಯಾಗಿ ಡಾ. ಆದಿತ್ಯ ಪಾಂಡುರಂಗಿ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ಡಾ. ನವೀನ ಮಂಕಣಿ, ಕಾರ್ಯದರ್ಶಿ ಡಾ. ಸುಹಾಸ ಹಂಚಿನಮನಿ ಹಾಗೂ ಖಜಾಂಚಿ ಡಾ. ಸಪನ್‌ ಡಿ.ಎಸ್‌., ಕಾರ್ಯಕ್ರಮ ಉಸ್ತುವಾರಿ ಡಾ. ಶಿವಕುಮಾರ ಕುಂಬಾರ, ಡಾ. ಪ್ರಮೋದ ಛಬ್ಬಿ ಮತ್ತು ಕಾತ್ಯಾಯಿನಿ ಇದ್ದರು.