-ಮಾಜಿ ಶಾಸಕ ಸುಭಾಷ್ ಗುತ್ತೇದಾರ ಆಗ್ರಹ । ಬಿಜೆಪಿಯಿಂದ ಬೃಹತ್ ಪ್ರತಿಭಟನೆ
----ಕನ್ನಡಪ್ರಭ ವಾರ್ತೆ ಆಳಂದ
2025-26ನೇ ಸಾಲಿನ ಆಳಂದ ತಾಲೂಕಿನ ಹಲವು ಗ್ರಾಮಗಳ ರೈತರಿಗೆ ಬೆಳೆ ವಿಮೆ ಜಮೆಯಾಗದಿರುವ ಕುರಿತು ಸಮಗ್ರ ತನಿಖೆ ನಡೆಸಿ, ಅರ್ಹ ರೈತರಿಗೆ ತಕ್ಷಣ ವಿಮೆ ಮೊತ್ತ ಜಮೆ ಮಾಡುವಂತೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಆಗ್ರಹಿಸಿದರು.ಸೋಮವಾರ ಆಳಂದ ಬಸ್ ನಿಲ್ದಾಣದ ಎದುರು ಆಳಂದ ಮಂಡಲ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಆಳಂದ ತಾಲೂಕಿನ ಸಾವಿರಾರು ರೈತರು ಬೆಳೆ ನಷ್ಟ ಅನುಭವಿಸಿದ್ದರೂ, ಹಲವು ಗ್ರಾಮಗಳ ರೈತರಿಗೆ ಇನ್ನೂ ಬೆಳೆ ವಿಮೆ ಪರಿಹಾರ ಜಮೆಯಾಗಿಲ್ಲ. ಕೆಲವು ಗ್ರಾಮಗಳನ್ನು ಸಂಪೂರ್ಣವಾಗಿ "ಶೂನ್ಯ ಎಂದು ಪರಿಗಣಿಸಿರುವುದು ರೈತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ದೂರಿದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಮಾತನಾಡಿ, ಆಳಂದದ ಖಜೂರಿ, ಹಾಳ ತಡಕಲ, ಹಡಲಗಿ, ಧುತ್ತರಗಾಂವ್, ಆಳಂಗಾ, ಹೆಬಳಿ, ಕೋರಹಳ್ಳಿ, ಹಳ್ಳಿ ಸಲಗರ, ಮುನ್ನಹಳ್ಳಿ, ಧಂಗಾಪೂರ, ನಿಂಬರ್ಗಾ ಅನೇಕ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಬೆಳೆ ವಿಮೆ ಬಂದಿಲ್ಲ ಎಂದು ದೂರಿದರು.
ವೀರಣ್ಣ ಮಂಗಾಣೆ, ಚಂದ್ರಶೇಖರ ಹಿರೇಮಠ, ಅಣ್ಣಾರಾವ್ ಪಾಟೀಲ ಕವಲಗಾ, ಬಸವರಾಜ ಬಿರಾದಾರ, ಹಣಮಂತ ಕಾಬಡೆ, ಶರಣಗೌಡ ದೇವಂತಗಿ, ಶಿವಪುತ್ರ ನಡಗೇರಿ, ಕಲ್ಯಾಣರಾವ್ ಪಾಟೀಲ ಮಾತನಾಡಿ, ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದರು.2025-26ನೇ ಸಾಲಿನಲ್ಲಿ ಬೆಳೆ ವಿಮೆ ಜಮೆಯಾಗದ ತಾಲೂಕಿನ ಎಲ್ಲಾ ಗ್ರಾಮಗಳ ಕುರಿತು ಉನ್ನತ ಮಟ್ಟದ ತನಿಖೆ ಗೆ ಆಗ್ರಹಿಸಿದರು.
ಸುಭಾಷ ಪಾಟೀಲ, ಆನಂದರಾವ್ ಪಾಟೀಲ, ಕಲ್ಯಾಣಿ ದಾನಾಗೋಳ, ಶಿವಪ್ಪ ವಾರಿಕ, ಮಹಾದೇವಪ್ಪ ವಾಡೆ, ಆದಿನಾಥ ಹೀರಾ, ಕುಮಾರ ಬಂಡೆ, ಸಂತೋಷ ಹಾದಿಮನಿ, ಶಂಕರಗೌಡ ಪಾಟೀಲ, ರುದ್ರಯ್ಯ ಹಿರೇಮಠ, ಅಮೃತ ಬಿಬ್ರಾಣಿ, ನಾಗರಾಜ ಶೇಗಜಿ, ನಾಗರಾಜ ದೇನಕ, ಬಸವರಾಜ ಹತ್ತರಕಿ, ವೈಜನಾಥ ಪಾಟೀಲ, ಸುವರ್ಣಾ ಪಾಟೀಲ ಇದ್ದರು.