ಹಿಂದು ನಾಯಕರ ದಮನ ಯತ್ನ ತಕ್ಷಣ ಕೈಬಿಡಿ: ಗಂಟಿಹೊಳೆ ಆಗ್ರಹ

| Published : Jun 04 2025, 02:14 AM IST

ಹಿಂದು ನಾಯಕರ ದಮನ ಯತ್ನ ತಕ್ಷಣ ಕೈಬಿಡಿ: ಗಂಟಿಹೊಳೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಹಿಂದೂ ಸಮಾಜದ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅನಾವಶ್ಯಕವಾಗಿ ಕಿರುಕುಳ ನೀಡುವ ಪ್ರಯತ್ನ ಮಾಡುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಂದೂರು

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಆಡಳಿತ ಪೂರ್ಣ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.‌ ಸರ್ಕಾರ ಹಿಂದೂ ಸಮಾಜದ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅನಾವಶ್ಯಕವಾಗಿ ಕಿರುಕುಳ ನೀಡುವ ಪ್ರಯತ್ನ ಮಾಡುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.ಹಿಂದೂ ಮುಖಂಡರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರ ಮೇಲೆ ಎಫ್ಐಆರ್ ದಾಖಲಿಸಿ, ಅರುಣ್ ಕುಮಾರ್ ಪುತ್ತಿಲ ಸೇರಿ 20ಕ್ಕೂ ಅಧಿಕ ಹಿಂದು ಸಂಘಟನೆ ಮುಖಂಡರನ್ನು ಗಡೀಪಾರು ಮಾಡಲು ನೋಟಿಸ್ ಜಾರಿ ಮಾಡಿದ್ದು, ಹಿಂದೂ ಕಾರ್ಯಕರ್ತರ ಮನೆಗೆ ರಾತೋರಾತ್ರಿ ಪೊಲೀಸರು ಹೋಗಿ ಅವರ ಮಾನಸಿಕ ಸ್ಥೈರ್ಯ ಕುಗ್ಗಿಸಲು ಮುಂದಾಗಿರುವುದು ಖಂಡನೀಯ. ಮಂಗಳೂರಿನಲ್ಲಿ ನಡೆದ ಸರಣಿ ಕೊಲೆಗಳು ರಾಜ್ಯ ಸರ್ಕಾರದ ದುರಾಡಳಿತವನ್ನು ಸೂಚಿಸುತ್ತದೆ. ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷದ ಮುಸಲ್ಮಾನ ಮತದಾರರು ಆಕ್ರೋಶಗೊಂಡಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ಹಿಂದೂ ಸಂಘಟಕರ ಮೇಲೆ ಸಕಾರಣವಿಲ್ಲದೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದವರು ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಸ್‌ಡಿಪಿಐ, ಕಾಂಗ್ರೆಸ್‌ ನಾಯಕರು ಒತ್ತಡ ಹೇರಿದ ಪರಿಣಾಮವಾಗಿ ಎರಡು ಮೂರು ವಾರಗಳ ಹಿಂದಿನ ಭಾಷಣಗಳನ್ನು ಉಲ್ಲೇಖಿಸಿ ಎಫ್‌ಐಆರ್‌ ದಾಖಲಿಸುತ್ತಿರುವುದು ಕಾಂಗ್ರೆಸ್‌ ಸರ್ಕಾರದ ಮತಾಂಧ ಶಕ್ತಿಗಳ ಓಲೈಕೆಯ ರಾಜಕೀಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾತ್ರೋರಾತ್ರಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮನೆಗೆ ನುಗ್ಗಿ, ಪ್ರಕರಣ ದಾಖಲಿಸುತ್ತಿರುವುದನ್ನು ಹಿಂದೂ ಸಮಾಜ ವಿರೋಧಿಸುತ್ತದೆ. ಕಾಂಗ್ರೆಸ್ಸಿನ ಅಜೆಂಡಾಗಳನ್ನು ಪೊಲೀಸ್‌ ಇಲಾಖೆಯ ಮೂಲಕ ಜಾರಿಗೊಳಿಸುವುದು ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ ಎಂದವರು ಹೇಳಿದ್ದಾರೆ.ಕಾಂಗ್ರೆಸ್ ಸರ್ಕಾರ ತಕ್ಷಣ ತನ್ನ ಈ ಹಿಂದೂ ವಿರೋಧಿ ನಿಲುವು ಹಾಗೂ ಹಿಂದೂ ಕಾರ್ಯಕರ್ತರನ್ನು ದಮನಿಸುವ ಪ್ರಯತ್ನ ಕೈಬಿಟ್ಟು, ಕರಾವಳಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು ಎಂದು ಗುರುರಾಜ್ ಗಂಟಿಹೊಳೆ ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.