ಸಾರಾಂಶ
ಕಾಂತರಾಜ ವರದಿಯನ್ನು ಶೀಘ್ರವೇ ಜಾರಿಗೆ ತರಲು ಅಗತ್ಯಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಚರ್ಚೆಗೂ ಅವಕಾಶ ಕೊಡಬೇಕು. ಅಧಿಕಾರಿಗಳ ಮಟ್ಟದಲ್ಲಿ ಅಧ್ಯಯನ ನಡೆಸಬೇಕು ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸಂಚಾಲಕ ಆರ್.ಕೆ.ಸಿದ್ರಾಮಣ್ಣ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಾತಿಗಣತಿ ವರದಿಯನ್ನು ಶೀಘ್ರವೇ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸಂಚಾಲಕ ಆರ್.ಕೆ.ಸಿದ್ರಾಮಣ್ಣ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಶ್ವತ ಹಿಂದುಳಿದ ಆಯೋಗವು ಕಳೆದ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿಯೇ ಜಾತಿ ಜನಗಣತಿ ಕಾಂತರಾಜ್ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿಯಲ್ಲಿರುವ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ. ಅದು ಸ್ವಾಗತ ಹಾಗೂ ಅವರಿಗೆ ಅಭಿನಂದನೆ. ಆದರೆ ಅದನ್ನು ಶೀಘ್ರವೇ ಜಾರಿಗೆ ತರಲು ಅಗತ್ಯಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಚರ್ಚೆಗೂ ಅವಕಾಶ ಕೊಡಬೇಕು. ಅಧಿಕಾರಿಗಳ ಮಟ್ಟದಲ್ಲಿ ಅಧ್ಯಯನ ನಡೆಸಬೇಕು ಎಂದರು.
ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟವು 2018ರಿಂದಲೇ ವರದಿಯ ಜಾರಿಗಾಗಿ ಹೋರಾಟ ಮಾಡುತ್ತ ಬಂದಿದೆ. ಈ ವರದಿಯನ್ನು ರಾಜಕೀಯವಾಗಿ ನೋಡಬಾರದು. ಸಂವಿಧಾನದತ್ತವಾಗಿ ಬಂದಿರುವ ಹಕ್ಕುಗಳನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ನ್ಯಾಯಾಲಯಗಳು ಕೂಡ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದೆ. ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕಾದರೆ ಅಂಕಿ ಅಂಶಗಳು ಅತಿ ಮುಖ್ಯವಾಗುತ್ತವೆ. ಯಾವುದೇ ಸರ್ಕಾರಗಳು ಅಂಕಿ ಅಂಶಗಳನ್ನು ಇಟ್ಟುಕೊಂಡು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಮೀಸಲಾತಿಗಳನ್ನು ಕಲ್ಪಿಸುತ್ತವೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೇ ಈ ವರದಿಯನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ರಾಜು ಮಾತನಾಡಿ, ಜಾತಿಜನಗಣತಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿರುವುದು ಸ್ವಾಗತ ಹಾಗೆಯೇ ಕೇಂದ್ರ ಸರ್ಕಾರ ಕೂಡ ಜನಗಣತಿಯನ್ನು ಮಾಡಲು ಹೊರಟಿದೆ. ಇದರ ಜೊತೆಗೆ ಜಾತಿಜನಗಣತಿಯನ್ನು ಕೂಡ ಮಾಡಬೇಕು. ಇದರಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಾಂತಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಪಿ.ಶೇಷಾದ್ರಿ, ಎಸ್.ಬಿ.ಅಶೋಕ್ಕುಮಾರ್, ರಾಜೇಶ್, ಜಿ.ಡಿ.ಮಂಜುನಾಥ್, ಶರತ್ ಮರಿಯಪ್ಪ, ವೆಂಕಟೇಶ್, ಬಾಲಪ್ಪ, ಎಸ್.ವಿ.ರಾಜಮ್ಮ, ಹೊನ್ನಪ್ಪ, ಸಿರಿಗೆರೆ ಹನುಮಂತಪ್ಪ, ನಾಗರತ್ನ ಇದ್ದರು.