ಬೂದು ನೀರು ನಿರ್ವಹಣಾ ಕಾಮಗಾರಿ ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಿ: ರಾಹುಲ್‌ ರತ್ನಂ ಪಾಂಡೆ

| Published : Mar 29 2024, 12:47 AM IST

ಬೂದು ನೀರು ನಿರ್ವಹಣಾ ಕಾಮಗಾರಿ ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಿ: ರಾಹುಲ್‌ ರತ್ನಂ ಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ವೈಜ್ಞಾನಿಕವಾಗಿ ಬೂದು ನೀರನ್ನು ಸಂಸ್ಕರಿಸಿ ಕಾಲುವೆ, ಕೆರೆ, ನಾಲಾಗಳಿಗೆ ಹರಿಸುವಂತೆ ಕ್ರಮವಹಿಸಬೇಕು.

ಹಿಟ್ನಾಳ ಗ್ರಾಮದಲ್ಲಿ ಗುರುತಿಸಲಾದ ಸ್ಥಳ ವೀಕ್ಷಣೆ ಮಾಡಿದ ಜಿಪಂ ಸಿಇಒಕನ್ನಡಪ್ರಭ ವಾರ್ತೆ ಕೊಪ್ಪಳ

ಹಿಟ್ನಾಳ ಗ್ರಾಮದಲ್ಲಿ ಈಗಾಗಲೇ ಗುರುತಿಸಲಾದ ಸ್ಥಳಗಳಲ್ಲಿ ವೈಜ್ಞಾನಿಕವಾಗಿ ಬೂದು ನೀರು ನಿರ್ವಹಣಾ ಕಾಮಗಾರಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ರತ್ನಂ ಪಾಂಡೆ ಸೂಚಿಸಿದರು.

ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಬೂದು ನೀರು ನಿರ್ವಹಣಾ ಕಾಮಗಾರಿಗಳಿಗೆ ಗುರುತಿಸಲಾದ ಸ್ಥಳಗಳಿಗೆ ಭೇಟಿ ನೀಡಿ ಮಾತನಾಡಿದರು. ಬೂದು ನೀರು ನಿರ್ವಹಣಾ ಕಾಮಗಾರಿಯನ್ನು ಅನುಷ್ಠಾನಿಸಲು ಪ್ರತಿ ತಾಲೂಕಿಗೆ 2 ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡು ಅನುಷ್ಠಾನಿಸುವಂತೆ ಗ್ರಾಮೀಣಾಭಿವೃದ್ದಿ ಆಯುಕ್ತಾಲಯದ ನಿರ್ದೇಶನ ನೀಡಿರುವ ಪ್ರಯುಕ್ತ ತಾಲೂಕಿನ ಹಿಟ್ನಾಳ, ಹಾಲರ್ವತಿ ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡಿದ್ದು, ವೈಜ್ಞಾನಿಕವಾಗಿ ಬೂದು ನೀರನ್ನು ಸಂಸ್ಕರಿಸಿ ಕಾಲುವೆ, ಕೆರೆ, ನಾಲಾಗಳಿಗೆ ಹರಿಸುವಂತೆ ಕ್ರಮವಹಿಸಲು ಸೂಚನೆ ನೀಡಿದರು.

ಬೂದು ನೀರು ಹೊರಗಡೆ ಹೋಗಲು ಗುರುತಿಸಲಾದ ಗುರುತು ವೀಕ್ಷಿಸಿದರು. ಗ್ರಾಮದಲ್ಲಿ ಬೂದು ನೀರು ಬರುವಂತಹ ಸ್ಥಳದಲ್ಲಿ ಚರಂಡಿ ಕಾಮಗಾರಿ ಅನುಷ್ಠಾನಿಸತಕ್ಕದ್ದು. ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ವಿವಿಧ ಯೋಜನೆಗಳಾದ 15ನೇ ಹಣಕಾಸು, ಸ್ವಚ್ಛ ಭಾರತ ಮಿಷನ್‌, ನರೇಗಾ ಯೋಜನೆಗಳ ಅನುದಾನವನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ಗ್ರಾಮದಲ್ಲಿ ಅವಶ್ಯವಿದ್ದಲ್ಲಿ ವೈಯಕ್ತಿಕ ಮತ್ತು ಸಮುದಾಯ ಇಂಗು ಗುಂಡಿ ನಿರ್ಮಿಸಲು ಸ್ಥಳದ ಲಭ್ಯತೆ ನೋಡಿಕೊಂಡು ಕ್ರಮಕೈಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿರತಕ್ಕದ್ದು. ಕಾಮಗಾರಿಯಿಂದ ಅಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು.

ನಂತರ ಗ್ರಾಪಂಗೆ ಭೇಟಿ ನೀಡಿ ಕರವಸೂಲಿಯ ಕುರಿತು ಪ್ರಗತಿ ಪರಿಶೀಲಿಸಿದರು. ಸಾಮಾನ್ಯ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಹಾಗು ಖಾಲಿ ಜಾಗೆಗಳಿಗೆ ವಿಧಿಸಿದ ಕರ ವಸೂಲಾತಿಯನ್ನು ಖುದ್ದು ಪರಿಶೀಲಿಸಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿಗಳ ಮಾಹಿತಿ, ಆಸ್ತಿಗಳಿಗೆ ಇಲ್ಲಿಯವರೆಗೆ ವಿತರಿಸಲಾದ ಫಾರಂ ನಂ.9&11 ಕುರಿತು ರಿಜಿಸ್ಟರ್‌ ಪರಿಶೀಲಿಸಿದರು. ನಂತರ ಮುನಿರಾಬಾದ ಡ್ಯಾಂ ಮೂನ್‌ ಲೈಟ್‌ ಡಾಬಾದ ಹತ್ತಿರ ಇರುವ ಚೆಕ್‌ ಪೋಸ್ಟ್‌ ಗೆ ಭೇಟಿ ನೀಡಿ ತಪಾಸಣಾ ತಂಡದ ಕಾರ್ಯ ವೈಖರಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರಪ್ಪ, ಕಾರ್ಯದರ್ಶಿ ಕೃಷ್ಣಮೂರ್ತಿ ಹಲಗೇರಿ, ತಾಂತ್ರಿಕ ಸಹಾಯಕ ರಮೇಶಕುಮಾರ, ಗ್ರಾಪಂ ಸಿಬ್ಬಂದಿ ಮಾರುತಿ, ದೊಡ್ಡಬಸವ ಇದ್ದರು.