ಒಪಿಎಸ್‌ ಬದಲು ಎನ್‌ಪಿಎಸ್‌ ಜಾರಿಗೊಳಿಸಿ: ಸಂಕನೂರ

| Published : Jul 19 2024, 12:54 AM IST

ಸಾರಾಂಶ

ರಾಜ್ಯ ಸರ್ಕಾರದ ಎಲ್ಲ ನೌಕರರಿಗೆ ಎನ್‌ಪಿಎಸ್‌ನಿಂದ ಹಲವಾರು ಸಮಸ್ಯೆಗಳಿವೆ. ಆದರೂ ಸಹ ಸರ್ಕಾರ ಒಪಿಎಸ್ ಜಾರಿಗಾಗಿ ಸಮಿತಿ ರಚನೆ ಮಾಡಿ ವಿವಿಧ ರಾಜ್ಯಗಳಿಗೆ ಅಧ್ಯಯನಕ್ಕೆ ಕಳುಹಿಸಲಾಗಿದೆ. ಆದರೆ ಇಲ್ಲಿಯವರೆಗೂ ಎಲ್ಲಿಯೂ ಸಹ ಅಧ್ಯಯನದ ಕಾರ್ಯ ನಡೆದಿಲ್ಲ.

ಧಾರವಾಡ:

ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ ಬದಲು ಒಪಿಎಸ್‌ ಜಾರಿಗಾಗಿ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರದ ಎಲ್ಲ ನೌಕರರಿಗೆ ಎನ್‌ಪಿಎಸ್‌ನಿಂದ ಹಲವಾರು ಸಮಸ್ಯೆಗಳಿವೆ. ಆದರೂ ಸಹ ಸರ್ಕಾರ ಒಪಿಎಸ್ ಜಾರಿಗಾಗಿ ಸಮಿತಿ ರಚನೆ ಮಾಡಿ ವಿವಿಧ ರಾಜ್ಯಗಳಿಗೆ ಅಧ್ಯಯನಕ್ಕೆ ಕಳುಹಿಸಲಾಗಿದೆ. ಆದರೆ ಇಲ್ಲಿಯವರೆಗೂ ಎಲ್ಲಿಯೂ ಸಹ ಅಧ್ಯಯನದ ಕಾರ್ಯ ನಡೆದಿಲ್ಲ. ಕೇವಲ ನೌಕರರಿಗೆ ಸಮಾಧಾನಕ್ಕಾಗಿ ಸಮಿತಿ ರಚಿಸಿದ್ದಾರೆ ಮತ್ತು ನೌಕರರಿಗೆ ನಿವೃತ್ತಿ ನಂತರ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೂಡಲೇ ಒಪಿಎಸ್ ಜಾರಿ ಮಾಡಬೇಕೆಂದು ತಾವು ಸದನದಲ್ಲಿ ಚುಕ್ಕೆಗುರುತಿನ ಪ್ರಶ್ನೆ ವೇಳೆಯಲ್ಲಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದೇನೆ ಎಂದು ಹೇಳಿದ್ದಾರೆ.

ನೌಕರರ ಕುಟುಂಬಕ್ಕೆ ಉಚಿತ ಆರೋಗ್ಯ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಆದೇಶ ಮಾತ್ರ ಮಾಡಿದೆ. ಇದರ ಸದುಪಯೋಗ ನೌಕರರಿಗೆ ಯಾವಾಗ ಸಿಗುತ್ತದೆ. ರಾಜ್ಯದಲ್ಲಿ 2.5 ಲಕ್ಷ ನೌಕರರ ಕೊರತೆ ಇದ್ದರು ಸಹ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಶ್ರಮಿಸುತ್ತಿದ್ದಾರೆ. ನೌಕರರ ಕಾಳಜಿ ಮಾಡುವುದು ಸಹ ಸರ್ಕಾರದ ಜವಾಬ್ದಾರಿ. ಹಾಗಾಗಿ ಕೂಡಲೇ ಸರ್ಕಾರ ಹೊರಡಿಸಿದ ಆದೇಶವನ್ನು ಅನುಷ್ಠಾನ ಮಾಡಿ ನೌಕರರ ಉಚಿತ ಆರೋಗ್ಯ ಸೇವೆಗೆ ಅನುಕೂಲ ಮಾಡಿಕೊಡಲು ಆಗ್ರಹಿಸಿದ್ದಾಗಿ ಹೇಳಿದರು.