ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಕಮಲೇಶ್ ಚಂದ್ರ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಸದಸ್ಯರು ಕಪ್ಪುಪಟ್ಟಿ ಧರಿಸಿ, ಪಟ್ಟಣದ ಮುಖ್ಯ ಅಂಚೆ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಎಚ್.ಆರ್.ಭಾಸ್ಕರ ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರ 2016 ರಲ್ಲಿ ನೇಮಕ ಮಾಡಿದ್ದ ಕಮಲೇಶ್ ಚಂದ್ರ ವರದಿ ಯಥಾವತ್ತಾಗಿ ಜಾರಿಯಾಗಬೇಕು. ಇದು ನಮ್ಮ ಉಳಿವು ಅಳಿವಿನ ಪ್ರಶ್ನೆಯಾಗಿದೆ. ನ್ಯಾಯಯುತವಾದ ನಮ್ಮ ಬೇಡಿಕೆಗಳನ್ನು ಮನ್ನಿಸಿ ಯಥಾವತ್ತಾಗಿ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ದೆಹಲಿಯಲ್ಲಿ 2022 ಜೂನ್ 14ರಂದು ನಡೆದಿದ್ದ ಉಪವಾಸ ಸತ್ಯಾಗ್ರಹದ ಅವಧಿಯಲ್ಲಿ ಪಿಜಿಸಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒಂದು ತಿಂಗಳ ಒಳಗಾಗಿ ಕಮಲೇಶ್ ಚಂದ್ರ ಸಮಿತಿಯ ವರದಿಯ ಆಧಾರದಲ್ಲಿ ನೌಕರರಿಗೆ ನ್ಯಾಯ ದೊರಕಿಸುವ ಭರವಸೆಯನ್ನು ನೀಡಿದ ಪರಿಣಾಮ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿತ್ತು. ವರದಿ ನೀಡಿ 5 ವರ್ಷಗಳೇ ಕಳೆದಿದ್ದರೂ ಬೇಡಿಕೆಗಳನ್ನು ಈಡೇರಿಸದೇ ಸರ್ಕಾರ ನಮ್ಮನ್ನು ವಂಚಿಸಿದೆ ಎಂದರು.ಮುಷ್ಕರಕ್ಕೆ ಬೆಂಬಲ ಸೂಚಿಸಿದ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಮಾತನಾಡಿ, ಸರ್ಕಾರಿ ಇಲಾಖೆಗಳಲ್ಲಿ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವ ಅಂಚೆ ಇಲಾಖೆ ನೌಕರರ ಬೇಡಿಕೆ ನ್ಯಾಯಯುತವಾಗಿದೆ. ಗಾಳಿ-ಮಳೆಯನ್ನೂ ಲೆಕ್ಕಿಸದೇ ಕಾಗದ ಪತ್ರಗಳನ್ನು ಜನರ ಮನೆಗಳಿಗೆ ತಲುಪಿಸುವ ಈ ಸಿಬ್ಬಂದಿಗಳ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.
- - - ಬಾಕ್ಸ್ ಪ್ರಮುಖ ಬೇಡಿಕೆಗಳು- 8 ಗಂಟೆಗಳ ಅವಧಿಯ ಕೆಲಸ ನೀಡಬೇಕು- ಪಿಂಚಣಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು
- 12, 24 ಮತ್ತು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರಿಗೆ ಸೇವಾ ಹಿರಿತನ ಆಧಾರದಲ್ಲಿ ವಿಶೇಷ ಇನ್ಕ್ರಿಮೆಂಟ್ ನೀಡಬೇಕು- ₹5 ಲಕ್ಷದವರೆಗಿನ ಗ್ರೂಪ್ ಇನ್ಶೂರೆನ್ಸ್ ಕವರೇಜ್, 180 ದಿನಗಳ ರಜೆ ಉಳಿಸಿಕೊಳ್ಳುವ ಸೌಲಭ್ಯ ನೀಡಬೇಕು
- ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯವನ್ನೂ ನೀಡಬೇಕು- - - -14ಟಿಟಿಎಚ್01: ತೀರ್ಥಹಳ್ಳಿ ಪಟ್ಟಣದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಲಾಯಿತು.