ಕನ್ನಡಪ್ರಭ ವಾರ್ತೆ ಪಾವಗಡ ಹೈನುಗಾರಿಕೆ ಒಂದು ಉತ್ತಮ ಉಪಕಸಬಾಗಿದ್ದು, ಹಸು ಸಾಕಾಣಿಕೆಯಿಂದ ಹಾಲು ಸಂಗ್ರಹಿಸಿ ಜೀವನ ಮಟ್ಟ ಸುಧಾರಣೆಗೆ ಹೆಚ್ಚು ಸಹಕಾರಿ ಆಗಲಿದೆ ಎಂದು ತುಮಕೂರು ಸಹಕಾರಿ ಹಾಲು ಉತ್ಪಾದಕ ಸಂಘಗಳ ಒಕ್ಕೂಟದ ನಿರ್ದೇಶಕ ಪಾವಗಡ ಚಂದ್ರಶೇಖರರೆಡ್ಡಿ ಅವರು ಗ್ರಾಮೀಣ ರೈತರಿಗೆ ಕರೆ ನೀಡಿದರು.ಅವರು ಮಂಗಳವಾರ ತಾಲೂಕಿನ ಕಣಿವೇನಹಳ್ಳಿ ಗ್ರಾಮದಲ್ಲಿ ಉಪಕೇಂದ್ರದ ಹಾಲು ಶೇಖರಣೆ ಘಟಕ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ರೈತರಿಗೆ ಹೈನುಗಾರಿಕೆ ವರದಾನವಾಗಿದೆ. ಒಂದು ಹಸು ಸಾಕಾಣಿಕೆ ಮಾಡಿ ಅದರಿಂದ ಉತ್ಪಾದನೆಯ ಹಾಲಿನಿಂದ ಕುಟುಂಬದ ಜೀವನ ಮಟ್ಟ ಸುಧಾರಣೆ ಅಗಲಿದೆ. ಡೈರಿಗೆ ಹಾಲು ಹಾಕುವ ರೈತರಿಗೆ ತುಮುಲ್ ನಿಂದ ಅನೇಕ ಯೋಜನೆ ಜಾರಿಗೆ ತಂದಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಹಾಸ್ಟಲ್ ಸೌಲಭ್ಯ,ಹಾಗೂ ಹಸುಗಳಿಗೆ ವಿಮೆ ಸೌಲಭ್ಯ ಸೇರಿದಂತೆ ಇತರೆ ಅನೇಕ ಯೋಜನೆ ಜಾರಿಯಲಿವೆ.ತಾಲೂಕಿನಲ್ಲಿ ಹಾಲು ಉತ್ಪಾದಕರ ಸಂಖ್ಯೆ ಹೆಚ್ಚುತ್ತಿದೆ. ಕುಟುಂಬ ನಿರ್ವಹಣೆ ಹಾಗೂ ಆರ್ಥಿಕ ಪ್ರಗತಿಗೆ ಹೈನುಗಾರಿಕೆ ಹೆಚ್ವು ಸಹಕಾರಿ ಆಗಿದೆ ಎಂದು ರೈತರಿಗೆ ಸಲಹೆ ನೀಡಿದರು. ಈ ಭಾಗದ ಹಾಲು ಉತ್ಪಾದಕ ರೈತರ ಅನುಕೂಲವಾಗುವ ಹಿನ್ನೆಲೆಯಲ್ಲಿ, ಶಾಸಕರು ಹಾಗೂ ತುಮುಲ್ ಅಧ್ಯಕ್ಷರಾದ ಎಚ್‌.ವಿ.ವೆಂಕಟೇಶ್ ಹಾಗೂ ನಮ್ಮ ಸಹಕಾರದ ಮೇರೆಗೆ,ಗ್ರಾಮದಲ್ಲಿ ಹಾಲು ಶೇಖರಣೆಯ ಉಪಕೇಂದ್ರ ತೆರೆಯಲಾಗಿದೆ. ರೈತರು ಸದ್ಬಳಿಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ವೇಳೆ ಸ್ಥಳೀಯ ಹಾಲು ಉತ್ಪಾದಕ ಸಂಘದ ಅಧ್ಯಕ್ಷ,ಸದಸ್ಯರು ಹಾಗೂ ಊರಿನ ಹಿರಿಯ ಮುಖಂಡರು ಮತ್ತು ಉಪಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.