ಗುರುವನ್ನೆ ಮೀರಿಸಿ ಬಹು ಎತ್ತರಕ್ಕೆ ಬೆಳೆಯುವ ಶಿಷ್ಯವೃಂದವು ಲಭಿಸಿರುವುದು ದೇವರು ಕೊಟ್ಟ ಕೊಡುಗೆ: ನಿವೃತ್ತ ಮುಖ್ಯಶಿಕ್ಷಕ ಎಚ್.ಕೆ. ಪ್ರಭಾಕರ್ ಮೂರ್ತಿ

| Published : Feb 26 2024, 01:32 AM IST

ಗುರುವನ್ನೆ ಮೀರಿಸಿ ಬಹು ಎತ್ತರಕ್ಕೆ ಬೆಳೆಯುವ ಶಿಷ್ಯವೃಂದವು ಲಭಿಸಿರುವುದು ದೇವರು ಕೊಟ್ಟ ಕೊಡುಗೆ: ನಿವೃತ್ತ ಮುಖ್ಯಶಿಕ್ಷಕ ಎಚ್.ಕೆ. ಪ್ರಭಾಕರ್ ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಿಯು ಹಳ್ಳಿಗಳಿಂದ ಬಂದ ನನ್ನ ವಿದ್ಯಾರ್ಥಿಗಳು ಒಟ್ಟಾಗಿ ಸೇರಿಕೊಂಡು, ಗುರುವಂದನಾ ಕಾರ್ಯಕ್ರಮ ಮಾಡಿದ್ದಾರೆ. ಅದು ನಮಗೆ ಗುರು-ಶಿಷ್ಯರ ಸ್ನೇಹ ಮಿಲನದ ಸ್ಪಂದನಾ ಕಾರ್ಯಕ್ರಮವಾಗಿದೆ. ಪುನರ್ಜನ್ಮ ಇದ್ದರೆ ಮತ್ತೇ ಶಿಕ್ಷಕರಾಗಿಯೇ ಹುಟ್ಟಲು ಬಯಸುತ್ತೇನೆ. ನಾಲ್ಕು ದಶಕಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ನಮ್ಮ ಮನೆಯಾಗಿಯೆ ಇತ್ತು.

ಕನ್ನಡಪ್ರಭ ವಾರ್ತೆ ಜಯಪುರ

ಗುರುವನ್ನೆ ಮೀರಿಸಿ ಬಹು ಎತ್ತರಕ್ಕೆ ಬೆಳೆಯುವ ಶಿಷ್ಯವೃಂದವು ನಮ್ಮಂತ ಶಿಕ್ಷಕರಿಗೆ ಲಭಿಸಿರುವುದು ದೇವರು ಕೊಟ್ಟ ಕೊಡುಗೆ ಎಂದು ಜಯಪುರ ರಾಘವೇಂದ್ರ ವಿದ್ಯಾಪೀಠ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕ ಎಚ್.ಕೆ. ಪ್ರಭಾಕರ್ ಮೂರ್ತಿ ಹೇಳಿದರು.

ಗ್ರಾಮದಲ್ಲಿ ಶನಿವಾರ ರಾಘವೇಂದ್ರ ವಿದ್ಯಾಪೀಠ ಪ್ರೌಢಶಾಲಾ ಆವರಣದಲ್ಲಿ 2004-2005ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರವಂದನಾ ಮತ್ತು ಪುನರ್ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲಿಯು ಹಳ್ಳಿಗಳಿಂದ ಬಂದ ನನ್ನ ವಿದ್ಯಾರ್ಥಿಗಳು ಒಟ್ಟಾಗಿ ಸೇರಿಕೊಂಡು, ಗುರುವಂದನಾ ಕಾರ್ಯಕ್ರಮ ಮಾಡಿದ್ದಾರೆ. ಅದು ನಮಗೆ ಗುರು-ಶಿಷ್ಯರ ಸ್ನೇಹ ಮಿಲನದ ಸ್ಪಂದನಾ ಕಾರ್ಯಕ್ರಮವಾಗಿದೆ. ಪುನರ್ಜನ್ಮ ಇದ್ದರೆ ಮತ್ತೇ ಶಿಕ್ಷಕರಾಗಿಯೇ ಹುಟ್ಟಲು ಬಯಸುತ್ತೇನೆ. ನಾಲ್ಕು ದಶಕಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ನಮ್ಮ ಮನೆಯಾಗಿಯೆ ಇತ್ತು. ಶಿಕ್ಷಣ ಪದ್ಧತಿಯು ಹಲವಾರು ಬದಲಾವಣೆ ಕಂಡಿದೆ. ಸರ್ಕಾರ ಹಲವು ಸವಲತ್ತುಗಳನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಲ್ಲ ವಿದ್ಯಾರ್ಥಿಗಳು ಉನ್ನತ ಗುರಿ ಕಂಡು ಯಶಸ್ಸು ಪಡೆಯಬೇಕೆಂದರು.

ಮುಖ್ಯ ಶಿಕ್ಷಕ ಎಸ್. ವೈದ್ಯನಾಥ್ ಮಾತನಾಡಿ, ರಾಘವೇಂದ್ರ ವಿದ್ಯಾಪೀಠ ಶಾಲೆಯು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಿದೆ. ಇವರೆಲ್ಲರು ಗುರುವಂದನೆಯ ಮೂಲಕ ನಮಗೆ ತೋರಿಸುವ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ. ಈ ಕಾರ್ಯಕ್ರಮದ ಮೂಲಕ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ ಎಂದರು.

2004-05ನೇ ಸಾಲಿನ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಿಂದ ಸರ್ಪಪಲ್ಲಿ ರಾಧಕೃಷ್ಣನ್ ಮತ್ತು ಸರಸ್ವತಿ ಪೋಟೋಗಳಿಗೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದರು. ಹಿರಿಯ ನಿವೃತ್ತ ಶಿಕ್ಷಕರಿಗೆ ಗುರುಸ್ಪಂದನ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಹಳೆಯ ವಿದ್ಯಾರ್ಥಿಗಳು 20 ವರ್ಷಗಳ ನಂತರ ಒಟ್ಟಿಗೆ ಭೇಟಿ ಯಾದ ಘಳಿಗೆಯಲ್ಲಿ ಶಾಲಾ ದಿನಗಳನ್ನು ಮೆಲುಕು ಹಾಕಿದರು.

ಹಿರಿಯ ನಿವೃತ್ತ ಶಿಕ್ಷಕರಾದ ಎಸ್.ಎಸ್. ವಾಗೀಶ್, ಆರ್. ಜಯಶೇಖರ್, ಸಿ.ಎನ್. ಬಾಲಕೃಷ್ಣ, ಮಾದಪ್ಪ ಸ್ವಾಮಿ, ಕನಕಲಕ್ಷ್ಮಿ, ಎಸ್.ಎಂ. ಶೋಭಾ, ನಂಜಯ್ಯ, ಪ್ರೌಢಶಾಲಾ ಸಹಶಿಕ್ಷಕರಾದ ಜಿ.ಕುಮಾರಸ್ವಾಮಿ, ಜಿ. ವೆಂಕಟೇಗೌಡ, ಸಿದ್ದರಾಮು, ಕೆ.ಎನ್. ಸಿದ್ದೇಗೌಡ, ಮಹಾಲಕ್ಷ್ಮಿ ಹಾಗೂ 2004-05ನೇ ಸಾಲಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.