ಕನ್ನಡ ಭಾಷೆ, ಸಾಹಿತ್ಯದಲ್ಲಿ ನಮ್ಮೆಲ್ಲರ ಉಸಿರು, ಬದುಕಿದೆ: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ

| Published : Dec 15 2024, 02:03 AM IST

ಕನ್ನಡ ಭಾಷೆ, ಸಾಹಿತ್ಯದಲ್ಲಿ ನಮ್ಮೆಲ್ಲರ ಉಸಿರು, ಬದುಕಿದೆ: ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆಯ ಫಲವಂತಿಕೆ ಕರ್ನಾಟಕ ನೆಲೆ ಫಲವತ್ತತೆಯನ್ನು ಅವಲಂಬಿಸಿದ್ದು ಕನ್ನಡ ಭಾಷೆ ಮತ್ತಷ್ಟು ಶ್ರೀಮಂತವಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ತಿಳಿಸಿದರು. ತಿಪಟೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ನಡೆದ ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಕನ್ನಡ ಭಾಷೆ ಜಾತ್ಯತೀತ, ಮಾನವೀಯ ಮೌಲ್ಯಗಳಿಂದ ಕೂಡಿರುವ ಭಾಷೆಯಾಗಿದ್ದು ಸೌಹಾರ್ದತೆ, ಸಮಾನತೆಯ ಸಂಕೇತವಾಗಿದೆ. ಕನ್ನಡ ಭಾಷೆಯ ಫಲವಂತಿಕೆ ಕರ್ನಾಟಕ ನೆಲೆ ಫಲವತ್ತತೆಯನ್ನು ಅವಲಂಬಿಸಿದ್ದು ಕನ್ನಡ ಭಾಷೆ ಮತ್ತಷ್ಟು ಶ್ರೀಮಂತವಾಗಬೇಕಿದೆ ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ತಿಳಿಸಿದರು.ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನ ಶ್ರೀಮದ್ ರಂಭಾಪುರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ನಡೆದ ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಮ್ಮೇಳನಗಳು ಕೇವಲ ಭಾಷಣಕ್ಕೇ ಸೀಮಿತವಾಗದೆ ಕನ್ನಡದ ಸಾಹಿತ್ಯ, ಸಂಸ್ಕೃತಿ, ಭಾಷೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ಕೆಲಸವಾಗಬೇಕು. ಮುಂದಾದರೂ ಸಮ್ಮೇಳನಗಳ ಸ್ವರೂಪ ಬದಲಾಗಬೇಕಿದೆ. ಸಾಹಿತ್ಯವೆಂಬ ಸತ್ಯ ಪ್ರತಿಪಾದನೆಯ ಮಾರ್ಗದಿಂದಲೇ ಜೀವ ವಿರೋಧಿ ರಾಜ ಪ್ರಭುತ್ವವನ್ನು ಸೋಲಿಸಲು ಸಾಧ್ಯ. ಸಕಲ ಜೀವಗಳ ಒಳಿತನ್ನು ಬಯಸುವ ರಾಜಕಾರಣದ ರಿಪೇರಿಗೆ ಸಾಹಿತ್ಯ ಬೇಕಿದೆ. ಕನ್ನಡ ಶಾಲೆಗಳು ಮೂಲಭೂತ ಸೌಲಭ್ಯ, ಶಿಕ್ಷಕರು, ಮಕ್ಕಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಬಾರದು. ಸೋಲುತ್ತಿರುವ ಬಡವಾಗುತ್ತಿರುವ ಬಡವರ ಸರ್ಕಾರಿ ಶಾಲೆಗಳಿಗೆ ತಕ್ಷಣವೇ ಕಾಯಕಲ್ಪ ಒದಗಿಸಿ ಉಳಿಸಿಕೊಳ್ಳದಿದ್ದರೆ ಸರ್ಕಾರಗಳು ಕೊಡುತ್ತಿರುವ ಯಾವ ಸವಲತ್ತುಗಳಿಗೂ ಬೆಲೆ ಇಲ್ಲದಂತಾಗುತ್ತದೆ. ಇದರಿಂದ ಕನ್ನಡ ಸಾಹಿತ್ಯ ಭಾಷೆ ಬಡವಾಗುತ್ತದೆ ಇದಕ್ಕೆ ಅವಕಾಶ ಕೊಡಬಾರದು. ಶಾಸಕ ಕೆ. ಷಡಕ್ಷರಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಹಾಗೂ ಕನ್ನಡ ಭಾಷೆಯನ್ನು ಉಳಿಸಲು ಸರ್ಕಾರ ಶ್ರಮಿಸುತ್ತಿದ್ದು ಶಾಲೆಯಲ್ಲಿ ಒಂದು ಮಗುವಿದ್ದರೂ ಸಹ ಶಾಲೆಯನ್ನು ಮುಚ್ಚದೆ ಶಿಕ್ಷಣ ನೀಡುತ್ತಿದೆ. ಪೋಷಕರು ಹಾಗೂ ಶಿಕ್ಷಕರಲ್ಲಿ ಕನ್ನಡದ ಅಭಿಮಾನವಿದ್ದಾಗ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬರುವುದಿಲ್ಲ. ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮೂಡಲು ಇಂತಹ ಸಮ್ಮೇಳನಗಳು ಅವಶ್ಯಕವಾಗಿದ್ದು ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ಹೆಚ್ಚು ಒತ್ತು ನೀಡುತ್ತಿರುವುದು ಆರೋಗ್ಯ, ಶಿಕ್ಷಣ, ನೀರಾವರಿಗಾಗಿ ಆದ್ದರಿಂದ ನನ್ನ ಕ್ಷೇತ್ರದ ಅಭಿವೃದ್ದಿ ಬಗ್ಗೆ ನನಗೆ ಹೆಚ್ಚು ಕಾಳಜಿ ಇದೆ. ಮುಂದಿನ ದಿನಗಳಲ್ಲಿ ಹೊನ್ನವಳ್ಳಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿ ನಾನು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು.ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ತಿಪಟೂರಿನಲ್ಲಿ ಈಗಾಗಲೇ ಜಿಲ್ಲಾ ಮಟ್ಟ ಸೇರಿದಂತೆ ಐದು ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗಿದ್ದು, ಈ ಸಮ್ಮೇಳನವೂ ಸಹ ಅಭೂತಪೂರ್ವವಾಗಿ ನಡೆದಿದೆ. ಎರಡು ಸಾವಿರ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಇತರೆ ಭಾಷೆಗಳನ್ನು ಅರಗಿಸಿಕೊಳ್ಳುವ ಜೀರ್ಣಶಕ್ತಿ ಹೆಚ್ಚಿದ್ದು ಯಾವುದೇ ಕಾರಣಕ್ಕು ಆಪತ್ತು ಬರುವುದಿಲ್ಲ ಎಂದರು. ಸಮಾರಂಭದಲ್ಲಿ ಕಸಾಪ ತಾ. ಅಧ್ಯಕ್ಷ ಬಸವರಾಜಪ್ಪ, ಸಮಾಜ ಸೇವಕ ಲೋಕೇಶ್ವರ, ಸಾಹಿತಿ ಪ್ರೊ. ನಟರಾಜ್ ಬೂದಾಳ್, ಪ್ರೊ. ಕೆ. ಪುಟ್ಟರಂಗಪ್ಪ, ತಾ.ಪಂ ಇಓ ಸುದರ್ಶನ್, ಗ್ರಾ,ಪಂ ಅಧ್ಯಕ್ಷರುಗಳಾದ ಕಲ್ಪನಾ, ವಿದ್ಯಾ ಮಲ್ಲೇಶ್, ರಂಭಾಪುರಿ ವಿದ್ಯಾಸಂಸ್ಥೆ ಅಧ್ಯಕ್ಷ ಸದಾಶಿವಯ್ಯ, ಕಾರ್ಯದರ್ಶಿ ವೆಂಕಟರಾಮಯ್ಯ, ಪ್ರಾಂಶುಪಾಲ ಭರತೇಶ್, ಮುಖ್ಯಶಿಕ್ಷಕ ನವೀನ್, ಕಸಾಪ ತಾ. ಅಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಮಂಜಪ್ಪ, ಹೋಬಳಿ ಘಟಕದ ಅಧ್ಯಕ್ಷ ಶಂಕರಪ್ಪ, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ದಸಂಸ ಮುಖಂಡ ಕುಂದೂರು ತಿಮ್ಮಯ್ಯ ಸೇರಿದಂತೆ ತಾಲೂಕು ಹಾಗೂ ಕಿಬ್ಬನಹಳ್ಳಿ ಹೋಬಳಿ ಘಟಕದ ಪದಾಧಿಕಾರಿಗಳು, ಸಾಹಿತಿಗಳು, ಲೇಖಕರು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.ಧ್ವಜಾರೋಹಣದೊಂದಿಗೆ ಸಮ್ಮೇಳನ ಪ್ರಾರಂಭವಾಯಿತು. ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಯು ಪೂರ್ಣಕುಂಭ ಸ್ವಾಗತದೊಂದಿಗೆ ಹಸಿರು ಸಸ್ಯಗಳೊಂದಿಗೆ ಸೋಮನಕುಣಿತ, ಕಹಳೆ, ತಮಟೆ, ನಗಾರಿ, ಅರೆವಾದ್ಯ ವಿವಿಧ ಜಾನಪದ ಕಲಾತಂಡಗಳೊಂದಿಗೆ ವೈಭವಯುತವಾಗಿ ನಡೆಯಿತು. ಪುಸ್ತಕ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು. ಪ್ರಧಾನ ವೇದಿಕೆಗೆ ಪರಿಸರ ಪ್ರೇಮಿ ದಿ. ಷಡಕ್ಷರ ದೇವರು ಅವರ ಹೆಸರಿಡಲಾಗಿತ್ತು. ಭಾಗವಹಿಸಿದ್ದ ಎಲ್ಲರಿಗೂ ಬೂಂದಿ, ಪಾಯಸದ ಊಟದ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದಲ್ಲಿ ೧೩೦೦ ಕನ್ನಡ ಶಾಲೆಗಳು ಮುಚ್ಚಿಹೋಗಿದ್ದು ೫೦ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ವಹಿಸಬೇಕಿದೆ. ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದ್ದು ಕನ್ನಡ ಭಾಷೆಯ ಫಲವಂತಿಕೆ ಕರ್ನಾಟಕ ನೆಲದ ಫಲತ್ತತೆಯನ್ನು ಅಲಂಬಿಸಿರುವ ಕಾರಣ ನಮ್ಮ ನಾಡು-ನುಡಿಯ ಬಗ್ಗೆ ಹೆಚ್ಚು ಅಭಿಮಾನ ಹೊಂದಬೇಕು. ಈ ಬಗ್ಗೆ ಕೇವಲ ಕನ್ನಡ ಪರ ಸಂಘಟನೆಗಳು ಧ್ವನಿ ಎತ್ತಿದರೆ ಸಾಲದು ಸರ್ಕಾರ, ಜನಪ್ರತಿನಿಧಿಗಳು ಕೈ ಜೋಡಿಸಬೇಕಿದೆ.

ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ, ಸಮ್ಮೇಳನಾಧ್ಯಕ್ಷ