ಸಾರಾಂಶ
- ಹೊನ್ನಾಳಿ ಹಿರೇಕಲ್ಮಠದಲ್ಲಿ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಬೆಳ್ಳಿ ರಥೋತ್ಸವ, ಧರ್ಮಸಭೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸಮಾಜದಲ್ಲಿ ಶಿಕ್ಷಕ ಮತ್ತು ವೈದ್ಯ ಕಣ್ಣುಗಳಿದ್ದಂತೆ. ಶಿಕ್ಷಕ ಶಿಕ್ಷಣ ನೀಡುತ್ತ ಸಮಾಜವನ್ನು ಅರಿವಿನಿಂದ ಬೆಳಗಿಸಿದರೆ, ವೈದ್ಯ ಜನರ ಆರೋಗ್ಯ ಕಾಪಾಡುತ್ತ ಸದೃಢ ಸಮಾಜ ನಿರ್ಮಾಣಕ್ಕೆ ಕಾರಣಕರ್ತನಾಗುತ್ತಾರೆ. ಮನುಷ್ಯ ಆರೋಗ್ಯ ಹಾಗೂ ಬುದ್ಧಿಶಕ್ತಿಯಿಂದ ಇದ್ದರೆ ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಪಟ್ಣಣದ ಹಿರೇಕಲ್ಮಠದದಲ್ಲಿ ಗುರುವಾರ ರಾತ್ರಿ ಬಾದಾಮಿ ಅಮಾವಾಸ್ಯೆ ಪ್ರಯುಕ್ತ ಶ್ರೀಗುರು ಚನ್ನೇಶ್ವರ ಕರ್ತೃಗದ್ದಿಗೆಗಳಿಗೆ ಮಹಾರುದ್ರಭಿಷೇಕ, ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿಯೊಂದಿಗೆ ಬೆಳ್ಳಿರಥೋತ್ಸವ ಸಮಾರಂಭದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಸರ್ಕಾರಿ ನೌಕರಿಯಿಂದ ಶಿಕ್ಷಕ ಮತ್ತು ವೈದ್ಯರು ನಿವೃತ್ತಿಯಾದರೆ ನಮ್ಮ ಜೀವನ ಮುಗಿಯಿತು ಎನ್ನುವುದಕ್ಕಿಂತ ಅವರು ಸಲ್ಲಿಸಿದ ಸೇವೆ ಜನಮಾನಸದಲ್ಲಿ ಉಳಿಯುತ್ತದೆ. ಶ್ರೀಮಠದಲ್ಲಿ ನಿರಂತರ ಧರ್ಮಕಾರ್ಯಗಳು ನಡೆಯುತ್ತವೆ. ಸಮಾಜದ ಜನರು ನಿತ್ಯ ಧಾರ್ಮಿಕ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದರು.ಹಿರೇಕಲ್ಮಠದ ಪೀಠಾಧ್ಯಕ್ಷ ಶ್ರೀ ಲಿಂ. ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಪೀಠಾಧ್ಯಕ್ಷರಾದ ಸಂದರ್ಭ 1972 ರಲ್ಲಿ ತಾಲೂಕಿನಲ್ಲಿ ಒಂದೇ ಸರ್ಕಾರಿ ಪ್ರೌಢಶಾಲೆ ಇತ್ತು. ಇದನ್ನು ಆರಿತು ಸ್ವಾಮೀಜಿ ಅವರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ, ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದಿಂದ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಐಟಿಐ ಕಾಲೇಜುಗಳನ್ನು ಆರಂಭಿಸಿದರು. ಆ ಮೂಲಕ ಈ ಭಾಗದ ಜನರಿಗೆ ಶಿಕ್ಷಣ ಸೌಲಭ್ಯ ಸಿಗುವಂತೆ ಮಾಡಿದ್ದಾರೆ. ಇದರಿಂದಾಗಿ ಸಮಾಜಕ್ಕೆ ಅನುಕೂಲವಾಗಿದೆ. ಶ್ರೀ ಮಠದ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಸಾವಿರಾರು ವಿಧ್ಯಾರ್ಥಿಗಳು ಉತ್ತಮ ನೌಕರಿಗಳ ಪಡೆದು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ ಎಂದರು.
ಸೇವೆಯಿಂದ ನಿವೃತ್ತರಾದ ತಾಲೂಕು ವೈದ್ಯಾದಿಕಾರಿ ಡಾ.ಕೆಂಚಪ್ಪ ಬಂತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜು ಹಾಗೂ ಶ್ರೀ ಚನ್ನಮಲ್ಲಿಕಾರ್ಜನ ವಿದ್ಯಾಸಂಸ್ಥೆ ಕಾರ್ಯದರ್ಶಿ ಪಟ್ಟಣಸೆಟ್ಟಿ ಪರಮೇಶ್ವರಪ್ಪ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿನ 2023- 2024ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್.ಪಿ. ನಿಶಾ, ಬಿ.ಕೆ.ವಿಶ್ವನಾಥ್, ವರ್ಷಾ ಉಕ್ಕಡಗಾತ್ರಿ, ನ್ಯಾಮತಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದ ಮಾಳಿಗೇರ ವೀರಪ್ಪ ಚನ್ನಪ್ಪ ಪ್ರೌಢಶಾಲೆಯ ಕೆ.ಬಿ.ವರ್ಷ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಅಭಿನೇತ್ರಿ ಡ್ಯಾನ್ಸ್ ಮ್ಯೂಸಿಕ್ ಅಕಾಡೆಮಿ ಡಾ.ಪ್ರತಿಮಾ ನಿಜಗುಣ ಶಿವಯೋಗಿಸ್ವಾಮಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು. ಎಸ್.ಜೆ.ವಿ.ಪಿ. ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಎಂ.ಮಮತ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಮಠದ ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಯ್ಯ, ಅಕ್ಕಮಹಾದೇವಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕ ಜಿ.ಎಂ.ಶಂಕರಸ್ವಾಮಿ, ಎಚ್.ಎಂ. ಚನ್ನೇಶಯ್ಯ, ಎಚ್.ಆರ್. ಬಸವರಾಜಪ್ಪ, ಅಮೃತಗೌಡ ಕೆ. ದೊಡ್ಮನಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಉಮಾಕಾಂತ, ಸಿ.ಸಿ. ಶಿವಕುಮಾರ, ಕೆ.ಎಚ್. ಮಂಜನಾಯ್ಕ, ನರಸನಹಳ್ಳಿ ಗುರುಪ್ರಸಾದ, ಗೀತಾ ವೀರಯ್ಯ, ಕಡದಕಟ್ಟೆ ದಾನಪ್ಪ, ಭಕ್ತರು ಇದ್ದರು.
- - - -7ಎಚ್.ಎಲ್.ಐ3:ಹೊನ್ನಾಳಿ ಹಿರೇಕಲ್ಮಠದಲ್ಲಿ ಬಾದಮಿ ಅಮಾವಾಸ್ಯೆ ಪ್ರಯುಕ್ತ ನಡೆದ ಧರ್ಮಸಭೆಯನ್ನು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.